‘ಸಿರಿ ಸಿನಿಮಾಸ್‌’ ಮೊದಲ ಕಾಣಿಕೆಯಾಗಿ ತಯಾರಾಗಲಿದೆ ‘ಯಾಕೆ’

ರಾಯಚೂರು ಮೂಲದ ರಂಗಭೂಮಿ ಕಲಾವಿದೆ ಸೀತಾ ಹರ್ಷವರ್ಧನ್ ಕನ್ನಡದ ಒಂದಿಷ್ಟು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ತೆಲುಗು ಭಾಷೆಯ ಸೀರಿಯಲ್‌ಗಳಲ್ಲೂ ಅಭಿನಯ ಮಾಡಿದ್ದು, ಇದೀಗ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದಾರೆ. ಹೌದು ಸೀತಾ ಇದೀಗ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದು, ಆ ಸಂಸ್ಥೆಯ ಉದ್ಘಾಟನೆ ಮತ್ತು ಕನ್ನಡ, ತೆಲುಗು ಭಾಷೆಯಲ್ಲಿ ಮೂಡಿ ಬರಲಿರುವ ಎರಡು ಚಿತ್ರಗಳ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯಿತು.  

ಈ ಸಮಾರಂಭಕ್ಕೆ ನಟರಾದ ಒರಟ ಪ್ರಶಾಂತ್, ಶ್ರೀನಗರ ಕಿಟ್ಟಿ, ನಿರ್ಮಾಪಕ ಟಿ.ಪಿ. ಸಿದ್ದರಾಜ್, ಕಲಾವಿದೆ ಅಂಬುಜಾ ಸೇರಿದಂತೆ ಹಲವು ಗಣ್ಯರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಇತ್ತೀಚಿಗೆ ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಚ್ಚಾಗಿ ಚಿತ್ರಗಳು ಸೆಟ್ಟೇರುತ್ತಿವೆ. ಆ ಸಾಲಿಗೆ ಮತ್ತೊಂದು ಹೊಸಬರ ಚಿತ್ರ ಸೇರೆ​‍್ಡಯಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಲಿರುವ ಚಿತ್ರಕ್ಕೆ ಎರಡು ಭಾಷೆಯಲ್ಲಿ ಬೇರೆ ಬೇರೆ ಶೀರ್ಷಿಕೆ ಇಡಲಾಗಿದೆ. ಕನ್ನಡದಲ್ಲಿ ‘ಯಾಕೆ’ ಎನ್ನುವ ಶೀರ್ಷಿಕೆ ಇಟ್ಟಿದ್ದು, ತೆಲುಗಿನಲ್ಲಿ ‘ಸಿಂಹಾಸನಂ’ ಎಂದು ಹೆಸರು ಇಡಲಾಗಿದೆ. ಎರಡು ಭಾಷೆಯಲ್ಲಿ ಸೀತಾ ಹರ್ಷವರ್ಧನ್ ಚಿತ್ರ ನಿರ್ಮಾಣ ಮಾಡುತ್ತಿದ್ದು ಪ್ರೇಮ್ ಚಿತ್ರಕ್ಕೆ ಆ್ಯಕ್ಷನ್‌-ಕಟ್ ಹೇಳುತ್ತಿರುವುದು ವಿಶೇಷ.  

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕಿ ಸೀತಾ ಹರ್ಷವರ್ಧನ್ ‘ಕನ್ನಡದ ಹಲವು ಚಿತ್ರಗಳು ಮತ್ತು ಧಾರಾವಾಹಿಯಲ್ಲಿ ನಟಿಸಿದ್ದೇನೆ ಜೊತೆಗೆ ತೆಲುಗು ದಾರವಾಹಿಗಳಲ್ಲೂ ನಟಿಸಿದ್ದೇನೆ. ಈ ನಡುವೆ ನಿರ್ದೇಶಕ ಪ್ರೇಮ್ ಅವರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾಗಿದ್ದೇನೆ. ನವೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು ಮುಂದಿನ ವರ್ಷ ಏಪ್ರಿಲ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಹಾಕಿಕೊಳ್ಳಲಾಗಿದೆ. ನಮ್ಮ ಪ್ರಯತ್ನಕ್ಕೆ ಅಮೆಜಾನ್ ಮತ್ತು ಹೈದರಾಬಾದಿನ ‘ಖುಷಿ ಸಿನಿಮಾ’ ಸಂಸ್ಥೆ ಜೊತೆಗೂಡಿದೆ ಇದರಿಂದಾಗಿ ಚಿತ್ರ ನಿರ್ಮಾಣಕ್ಕೆ ಮತ್ತಷ್ಟು ಬಲ ಬಂದಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವ ಉದ್ದೇಶ ನಮ್ಮದು’ ಎಂದು ಹೇಳಿದರು.  

ನಂತರ ನಿರ್ದೇಶಕ ಪ್ರೇಮ್ ಮಾತನಾಡಿ ‘ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ. ಒಳ್ಳೆಯ ಕಂಟೆಂಟ್ ಇದೆ. ನವಂಬರ್ ಮಧ್ಯಭಾಗದಿಂದ ಚಿತ್ರಿಕರಣ ಆರಂಭ ಮಾಡುತ್ತೇವೆ. ಎಲ್ಲರಿಗೂ ಇಷ್ಟವಾಗುವ ಕಥೆಯನ್ನು ಚಿತ್ರ ಒಳಗೊಂಡಿದೆ’ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಖುಷಿ ಸಿನಿಮಾ ಸಂಸ್ಥೆಯ ಪಾಲುದಾರರು ಚಿತ್ರದ ಬಗ್ಗೆ ಮಾಹಿತಿ ನೀಡಿ ಹೊಸ ಹೊಸ ಕಂಟೆಂಟ್‌ಗಳು ಬಂದರೆ ಅವುಗಳನ್ನು ಚಿತ್ರ ನಿರ್ಮಾಣ ಮಾಡಲು ಸಂಸ್ಥೆ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.