ಸೆ. 9ರಿಂದ ಕಲರ್ಸ್ ಕನ್ನಡದಲ್ಲಿ ಪ್ರೀತಿಯ ಗುಟ್ಟು ‘ದೃಷ್ಟಿ ಬೊಟ್ಟು’

ಕಿರುತೆರೆಯಲ್ಲಿ ಕನ್ನಡಿಗರಿಗೆ ಸದಭಿರುಚಿಯ ಮನರಂಜನೆ ನೀಡುತ್ತಾ ಬಂದಿರುವ ಕಲರ್ಸ್ ಕನ್ನಡ ವಾಹಿನಿಯು ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಹೊತ್ತು ತರುತ್ತಿದೆ. ರೂಪವೇ ಶಾಪವಾದ ಹುಡುಗಿಯೊಬ್ಬಳ ಕತೆಯನ್ನು ಮನಮುಟ್ಟುವಂತೆ ಹೇಳುವ ಪ್ರಯತ್ನವೇ ‘ದೃಷ್ಟಿಬೊಟ್ಟು’. ಸೆಪ್ಟೆಂಬರ್ 9ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ಸಂಜೆ 6.30ಕ್ಕೆ ಈ ಸೀರಿಯಲ್ ಪ್ರಸಾರವಾಗಲಿದೆ. ಜನಪ್ರಿಯ ಕಿರುತೆರೆ ನಟ ವಿಜಯ್ ಸೂರ್ಯ ಈ ಧಾರಾವಾಹಿಯ ಮೂಲಕ ಕಲರ್ಸ್ ಕನ್ನಡ ವಾಹಿನಿಗೆ ಮರಳಿರುವುದು ವಿಶೇಷ. ನಾಯಕಿಯ ಪಾತ್ರದಲ್ಲಿ ಅರ್ಪಿತಾ ಮೋಹಿತೆ ಎಂಬ ಹೊಸ ನಟಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟಿ ದೀಪಶ್ರೀ ಈ ಧಾರಾವಾಹಿ ಮೂಲಕ 14 ವರ್ಷಗಳ ನಂತರ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಜೊತೆಗೆ ದೀಪಶ್ರೀ, ರಾಘು ಶಿವಮೊಗ್ಗ, ಅಶೋಕ್ ಹೆಗ್ಡೆ ಸೇರಿದಂತೆ ಅನೇಕ ಕಿರಿ ಹಿರಿ ನಟನಟಿಯರು ಈ ಧಾರಾವಾಹಿಯ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. 

ಇತ್ತೀಚೆಗೆ ನಡೆದ ಈ ಧಾರಾವಾಹಿಯ ಸಂಚಿಕೆಯೊಂದರ ಪ್ರದರ್ಶನ ಮತ್ತು ಪತ್ರಿಕಾಗೋಷ್ಠಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಮಾತನಾಡಿ ‘ಪ್ರೀತಿ ಗುಟ್ಟು ಈ ದೃಷ್ಟಿ ಬುಟ್ಟು. ತಂಡ ತುಂಬಾ ಶ್ರಮವಹಿಸಿ ಶೂಟಿಂಗ್ ಮಾಡಿದೆ. ಹಾಗಾಗಿ ಮೊದಲ ಎಪಿಸೋಡ್ ತೋರಿಸಲಾಗಿದೆ. ನಾವು ಇದನ್ನು ಸಂಜೆ 6.30ಕ್ಕೆ ಪ್ರಸಾರ ಮಾಡಲು ಪ್ಲಾನ್ ಮಾಡಿದ್ದೇವೆ. ಪ್ರತಿದಿನ ಈ ಧಾರಾವಾಹಿಯಿಂದ ಒಳ್ಳೆಯ ಒಪನಿಂಗ್ ತೆಗೆದುಕೊಂಡು ನಮ್ಮ ವಾಹಿನಿಯ ಮುಂದಿನ ಸೀರಿಯಲ್‌ಗಳಿಗೆ ದಾರಿ ಮಾಡಿಕೊಡುವಂತೆ ಆಗುತ್ತದೆ ಎಂದುಕೊಂಡಿದ್ದೇವೆ. ಮೊದಲ ಎಪಿಸೋಡ್ ಇಡೀ ಸೀರಿಯಲ್‌ನ ಟ್ರೇಲರ್ ಇದ್ದಂಗೆ’ ಎನ್ನುವರು. ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡಲಾಗಿರುವ ಈ ಧಾರಾವಾಹಿಯ ನಿರ್ಮಾಪಕ ರಕ್ಷ ರಾಮ್ ಮಾತನಾಡಿ ‘ನಾನು ಕಲರ್ಸ್ನಲ್ಲೇ ‘ಪುಟ್ಟ ಗೌರಿ ಮದುವೆ’ ಧಾರಾವಾಹಿಯಿಂದ ಕರಿಯರ ಶುರು ಮಾಡಿದೆ. ಈಗ ನಿರ್ಮಾಪಕನಾಗಿದ್ದೇನೆ. ಟೀವಿ ನಮ್ಮ ಮನೆ ದೇವರು ಇದ್ದಂಗೆ. ಹುಚ್ಚುತನದಿಂದ ಕನಸು ಇಟ್ಟುಕೊಂಡು ಈ ನಿರ್ಮಾಣ ಸಂಸ್ಥೆ ಹುಟ್ಟುಹಾಕಲಾಗಿದೆ. ನಾನು ವಿಜಯ ಒಂದೇ ಚಾನಲ್‌ನಿಂದ ಜರ್ನಿ ಶುರು ಮಾಡಿದವರು. ಜೊತೆಗೆ ಕೆಲಸ ಮಾಡತಾ ಇರೋದು ಖುಷಿ ಇದೆ. ಬಳ್ಳಾರಿಯ ಮೈನಿಂಗ್‌ನಲ್ಲಿ ಶೂಟ್ ಮಾಡಿದ್ದು ಚಾಲೆಂಜ್ ಆಗಿತ್ತು’ ಎನ್ನುವರು.

ಎರಡು ವಿಭಿನ್ನ ಕೌಟುಂಬಿಕ ಹಿನ್ನೆಲೆಗಳಿಂದ ಬಂದ ದೃಷ್ಟಿ ಎಂಬ ಹುಡುಗಿ ಹಾಗೂ ದತ್ತ ಶ್ರೀರಾಮ್ ಪಾಟೀಲ್ ಎಂಬ ಹುಡುಗನ ಬದುಕುಗಳು ಸಂಧಿಸಿದಾಗ ನಡೆಯುವ ಕುತೂಹಲಕರ ಕಥಾನಕವನ್ನು ‘ದೃಷ್ಟಿಬೊಟ್ಟು’ ಎಳೆಎಳೆಯಾಗಿ ಅನಾವರಣಗೊಳಿಸುತ್ತಾ ಹೋಗುತ್ತದೆ. ದೃಷ್ಟಿಯ ಪಾಲಿಗೆ ರೂಪ ಅನ್ನುವುದೇ ಶಾಪ. ತನ್ನ ರೂಪವನ್ನೇ ಬದಲಾಯಿಸಿಕೊಂಡು ಬದುಕುತ್ತಿರುವ ಅವಳಿಗೆ ತನ್ನ ಸೋದರಿಯನ್ನು ಮರಳಿ ಮನೆಗೆ ಕರೆತಂದು ಕುಟುಂಬವನ್ನು ಒಂದು ಮಾಡಬೇಕೆಂಬ ಗುರಿ. ಮೊದಲು ಮೆಕಾನಿಕ್ ಆಗಿ ಈಗ ರೌಡಿಯಾಗಿರುವ ಕಥಾನಾಯಕ ದತ್ತ, ಸುಂದರವಾಗಿರುವ ಹೆಣ್ಣುಗಳನ್ನ ಕಂಡರೆ ಉರಿದು ಬೀಳುತ್ತಾನೆ. ದುರುಳ ಪೋಲೀಸನೊಬ್ಬನ ಕೈಗೆ ಸಿಕ್ಕ ದೃಷ್ಟಿ ಅವನ ಕಿರುಕುಳಕ್ಕೆ ಸಿಕ್ಕು ಒದ್ದಾಡುತ್ತಿರುವಾಗ ದತ್ತನ ಪ್ರವೇಶವಾಗುತ್ತದೆ. ಆಮೇಲೆ ಕತೆ ಹಲವು ಊಹಿಸಲಾಗದ ತಿರುವುಗಳನ್ನು ತೆಗೆದುಕೊಳ್ಳುತ್ತಾ ಮುಂದೆ ಸಾಗುತ್ತದೆ. ದೃಷ್ಟಿಗೆ ತನ್ನ ಸೋದರಿ ಸಿಕ್ಕಳೆ? ವಿಧಿ ದತ್ತ ಮತ್ತು ದೃಷ್ಟಿಯನ್ನು ಒಂದುಮಾಡುವುದೆ? ದತ್ತನನ್ನು ಅವನ ದುಷ್ಟ ಸೋದರಿಯರಿಂದ ದೃಷ್ಟಿ ಕಾಪಾಡಬಲ್ಲಳೆ? ಇಂಥ ಎಲ್ಲ ಪ್ರಶ್ನೆಗಳಿಗೂ ಉತ್ತರ ಬೇಕೆಂದರೆ ನೀವು ‘ದೃಷ್ಟಿಬೊಟ್ಟು’ ಧಾರಾವಾಹಿಯನ್ನು ನೋಡಬೇಕು. 

ಸೆಪ್ಟೆಂಬರ್ 9ರ ಸಂಜೆ 6:30ಕ್ಕೆ ತಪ್ಪದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಮೊದಲ ಸಂಚಿಕೆಯನ್ನು ವೀಕ್ಷಿಸಬೇಕು. ಬಳಿಕ ಜಿಯೊ ಸಿನಿಮಾ ಆಪ್‌ನಲ್ಲಿ ಕೂಡ ‘ದೃಷ್ಟಿ ಬೊಟ್ಟು’ ಧಾರಾವಾಹಿಯನ್ನು ನೀವು ವೀಕ್ಷಿಸಬಹುದು. ಅಂದಂಗೆ ಈ ಸೀರಿಯಲ್‌ನ್ನು ಯುವ ಪ್ರತಿಭೆ ಶ್ರವಂತ್ ನಿರ್ದೇಶನ ಮಾಡಿದ್ದು, ನಿರ್ಮಾಣದಲ್ಲಿ ರಕ್ಷ ರಾಮ್‌ಗೆ ಅನುಷಾ ಶಿವಪ್ರಸಾದ್ ಸಾಥ್ ನೀಡಿದ್ದಾರೆ.