ಯುವ ಶಕ್ತಿಯ ಸಬಲೀಕರಣ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪರಿವರ್ತನೆಗೆ ಭದ್ರಬೂನಾದಿ
World Population Day:July 11
ವಿಶ್ವ ಜನಸಂಖ್ಯಾ ದಿನ:
ಜನಸಂಖ್ಯೆ ಒಂದು ದೇಶದ ಅಭಿವೃದ್ಧಿಗೆ ವರವೋ ಅಥವಾ ಶಾಪವೋ ಎಂಬದು ಅದರ ಗಾತ್ರ, ರಚನೆ, ಸಂಯೋಜನೆ ಮತ್ತು ಗುಣಮಟ್ಟವನ್ನು ಅವಲಂಬಿಸಿದೆ. ಒಂದು ದೇಶದಲ್ಲಿ ಉತ್ತಮ ಗುಣಮಟ್ಟದ ಜನಸಂಖ್ಯೆ ಅಧಿಕವಾಗಿದ್ದರೆ ಹೆಚ್ಚು ಕಾರ್ಮಿಕ ಶಕ್ತಿಯಿಂದ ಕೃಷಿ, ಕೈಗಾರಿಕೆ, ಉದ್ಯಮಗಳು ಮತ್ತು ಸೇವಾ ವಲಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ. ಹೆಚ್ಚಿನ ಜನಸಂಖ್ಯೆಯಿಂದ ಉತ್ಪಾದಿತ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿ ಅಧಿಕ ಪ್ರಮಾಣದ ಸರಕು ಮತ್ತು ಸೇವೆಗಳನ್ನು ಉತ್ಪಾದಿಸಲು ಸಾಧ್ಯ. ಇದು ಸ್ಥಳೀಯ ಹಾಗೂ ವಿದೇಶಿ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡುತ್ತದೆ. ಇದರಿಂದ ಸಾರಿಗೆ, ಸಂಪರ್ಕ, ವಾಣಿಜ್ಯ, ವ್ಯಾಪಾರ ಮುಂತಾದ ಚಟುವಟಿಕೆಗಳ ಅಭಿವೃದ್ಧಿಗೆ ದಾರಿಮಾಡಿಕೊಡುತ್ತದೆ. ಅಲ್ಲದೆ ದೇಶಕ್ಕೆ ಹೊಸ ಹೊಸ ತಂತ್ರಜ್ಞಾನ, ಬುದ್ಧಿವಂತಿಕೆ ಮತ್ತು ನವೀನ ಆವಿಷ್ಕಾರಗಳು ದೊರೆಯುತ್ತವೆ.
ಅದರೆ ಜನಸಂಖ್ಯೆ ಸೂಕ್ತವಾಗಿ ನಿರ್ವಹಣೆ ಮಾಡದೆ ವಿಪರೀತವಾಗಿ ಬೆಳೆದರೆೆ ಮನೆ, ನೀರು, ಆಹಾರ, ಶಿಕ್ಷಣ, ಆಸ್ಪತ್ರೆ, ಆರೋಗ್ಯ, ಬಸ್ ವಿದ್ಯುತ್ ಮುಂತಾದ ಮೂಲಸೌಕರ್ಯಗಳ ಮೇಲೆ ಭಾರೀ ಒತ್ತಡ ಬೀಳುತ್ತದೆ ಉದ್ಯೋಗಾವಕಾಶಕ್ಕಿಂತ ಜನಸಂಖ್ಯೆ ಹೆಚ್ಚಾದರೆ ನಿರುದ್ಯೋಗ, ಬಡತನ ಮತ್ತು ಅಪರಾಧದ ಪ್ರಮಾಣ ಹೆಚ್ಚಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ಮತ್ತು ಪರಿಸರ ಮಾಲಿನ್ಯ ಉಂಟಾಗುತ್ತದೆ. ನಿಜವಾಗಲೂ ಜನಸಂಖ್ಯೆ ಶಾಪವಲ್ಲ. ಆದರೆ ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡದಿದ್ದರೆ ಅಭಿವೃದ್ಧಿಗೆ ಮಾರಕವಾಗಬಹುದು. ಜನಸಂಖ್ಯೆಯನ್ನು ಒಂದು ಸಂಪತ್ತಾಗಿ ಪರಿಗಣಿಸಿ, ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದರೆ ಆರ್ಥಿಕ ಅಭಿವೃದ್ಧಿಯ ವೇಗ ಹೆಚ್ಚಿಸಲು ಸಾಧ್ಯ. ಆ ಮೂಲಕ ಜನಸಂಖ್ಯೆಯ ಲಾಭಾಂಶ ಪಡೆಯಲು ಸಾಧ್ಯ.
ಈ ಹಿನ್ನಲೆಯಲ್ಲಿ ವಿಶ್ವ ಸಂಯುಕ್ತ ರಾಷ್ಟ್ರ ಸಂಸ್ಥೆ ಜನಸಂಖ್ಯಾ ಪ್ರವೃತ್ತಿಗಳು, ರಚನೆ, ಬೆಳವಣಿಗೆ, ನಿರ್ವಹಣೆ, ಕುಟುಂಬ ಯೋಜನೆ, ಪುನರುತ್ಪಾದನಾ ಆರೋಗ್ಯ, ಯುವಜನರ ಸ್ವಾಯತ್ತತೆ, ಲಿಂಗ ಸಮಾನತೆ, ಜನಸಂಖ್ಯೆಯ ಪರಿಣಾಮ ಮತ್ತು ಸಂಬಂಧಿತ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯ ಕುರಿತಾಗಿ ಸಾಮಾನ್ಯ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 11ರಂದು ಒಂದು ಮುಖ್ಯವಾದ ವಿಷಯವನ್ನು ಆಯ್ಕೆಮಾಡಿಕೊಂಡು ‘ವಿಶ್ವ ಜನಸಂಖ್ಯಾ ದಿನ’ವನ್ನು ಭರ್ಜರಿಯಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.
ಈ ವರ್ಷ ‘ನ್ಯಾಯೋಚಿತ ಹಾಗೂ ಭರವಸೆಯ ವಿಶ್ವದಲ್ಲಿ ತಮ್ಮ ಇಚ್ಛೆಯ ಕುಟುಂಬವನ್ನು ರೂಪಿಸಿಕೊಳ್ಳಲು ಯುವಜನತೆಯ ಸಬಲೀಕರಣ’ ಎಂಬ ವಿಷಯವನ್ನಿಟ್ಟುಕೊಂಡು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ. ಈ ವಿಷಯವು ಯುವಜನರ ಸ್ವಾಯತ್ತತೆ, ಪುನರುತ್ಪಾದನಾ ಹಕ್ಕುಗಳು ಮತ್ತು ಲಿಂಗ ಸಮಾನತೆಗಳ ಮಹತ್ವವನ್ನು ಸೂಚಿಸುತ್ತದೆ.. ಈ ಆಚರಣೆಯ ಮೂಲಕ ಸರ್ಕಾರಗಳು ಹಾಗೂ ಸಂಘ-ಸಂಸ್ಥೆಗಳು ಯುವಜನರ ಭವಿಷ್ಯ ನಿರ್ಮಾಣಕ್ಕೆ ನೆರವಾಗುವ ಉತ್ತಮ ಗುಣಮಟ್ಟದ ಶಿಕ್ಷಣ, ಆಧುನಿಕ ಕೌಶಲಗಳು, ಆರೋಗ್ಯ ಸೇವೆಗಳು, ಉದ್ಯೋಗಾವಕಾಶಗಳು ಮತ್ತು ಸಮಗ್ರ ಕುಟುಂಬ ಯೋಜನೆಯ ಸೇವೆಗಳಲ್ಲಿ ಹೂಡಿಕೆಯನ್ನು ಮಾಡಲು ಉತ್ಯೇಜಿಸಲಾಗುತ್ತದೆ. ಇದರಿಂದ ಇಂದಿನ ಯುವಕರು ಸಾಮಾಜಿಕ ಅಶಾಂತಿ, ಅಸಹಿಷ್ಣುತೆ, ಆರ್ಥಿಕ ಅನಿಶ್ಚಿತತೆ, ಹವಾಮಾನ ಬದಲಾವಣೆ ಹಾಗೂ ಜನಸಂಖ್ಯಾ ಪರಿವರ್ತನೆಯ ಸಮಯದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರಂತೆ ವಿವಾಹ ಮತ್ತು ಸಂತಾನೋತ್ಪತ್ತಿ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಜ್ಞಾನವನ್ನು ಯುವಕರಿಗೆ ನೀಡುವುದರಿಂದ ಮುಂದಿನ ತಲೆಮಾರಿಗೆ ನ್ಯಾಯ, ಸುರಕ್ಷತೆ ಮತ್ತು ಭರವಸೆಯ ಜೀವನವನ್ನು ಖಚಿತಪಡಿಸಕೊಳ್ಳಲು ಸಾಧ್ಯ. ಅಲ್ಲದೆ ವಿಶ್ವ ಜನಸಂಖ್ಯಾ ದಿನ ಆಚರಣೆಯ ಓಚಿತ್ಯವೇನಂದರೆ ಇದರ ಅನೇಕ ಕಾರ್ಯಚಟುವಟಿಕೆಗಳು ಸಂಯುಕ್ತ ರಾಷ್ಟ್ರದ ಸುಸ್ಥಿರ ಅಭಿವೃದ್ಧಿ ಗುರಿಗಳಾದ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ (ಗುರಿ 3), ಲಿಂಗ ಸಮಾನತೆ (ಗುರಿ 5), ಅಸಮಾನತೆಗಳ ಕಡಿತ (ಗುರಿ 10) ಮತ್ತು ಜವಾಬ್ದಾರಿಯುತ ಅನುಭೋಗ ಮತ್ತು ಉತ್ಪಾದನೆ (ಗುರಿ 12) ಇವುಗಳ ಸಾಧನೆಗೆ ನೇರವಾದ ಸಂಬಂಧಿವಿದೆ.
ಒಟ್ಟು ಜನಸಂಖ್ಯೆಯು ಕ್ರಮೇಣವಾಗಿ ಅಧಿಕವಾಗುತ್ತಿದ್ದರೆ, ಅದರ ಬೆಳವಣಿಗೆಯ ವೇಗ ಕುಸಿಯುತ್ತಿದೆ. ಆದರೆ ಯುವ ಜನಸಂಖ್ಯೆಯ ಪಾಲು ಬಹಳಷ್ಟು ಹೆಚ್ಚಾಗುತ್ತಿದೆ. ಸಂಯುಕ್ತ ರಾಷ್ಟ್ರ ಸಂಸ್ಥೆಯ ಪ್ರಕಾರ, 2025ರಲ್ಲಿ ಜಾಗತಿಕ ಒಟ್ಟು ಜನಸಂಖ್ಯೆ ಸುಮಾರು 8.1 ಬಿಲಿಯನ್ಗೆ ತಲುಪಲಿದೆ ಎಂದು ನೀರೀಕ್ಷಿಸಲಾಗಿದೆ. ಆದರೆ 2050ರ ವೇಳೆಗೆ ಇದು 9.6 ಬಿಲಿಯನ್ಗೆ ಹೆಚ್ಚಾಗಲಿದೆೆ. ಇದರಲ್ಲಿ ಹೆಚ್ಚಿನ ಜನಸಂಖ್ಯೆ ಬೆಳವಣಿಗೆ ಅಭಿವೃದ್ಧಿಶೀಲ ಪ್ರದೇಶಗಳಲ್ಲಿ ಸಂಭವಿಸುವ ಸಾಧ್ಯತೆ ಇದೆ. ಸಂಯುಕ್ತರಾಷ್ಟ್ರ ಸಂಸ್ಥೆಯ ಪ್ರಕಾರ, ಪ್ರಪಂಚದ ಜನಸಂಖ್ಯೆಯಲ್ಲಿ ಶೇ.16ರಷ್ಟು (1.3 ಬಿಲಿಯನ್) 15-24ರ ವಯೋವರ್ಗದಲ್ಲಿ ಮತ್ತು ಶೇ.23ರಷ್ಟು (1.8 ಬಿಲಿಯನ್) 15-29ರ ವಯೋವರ್ಗದಲ್ಲಿ ಯುವಕರಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಶೇಕಡಾವಾರು ಪ್ರಮಾಣ ಗಣನೀಯವಾಗಿದ್ದರೂ, ಜಾಗತಿಕ ಜನಸಂಖ್ಯೆ ವಯಸ್ಸಾಗುತ್ತಿರುವ ಕಾರಣ, ಯುವಜನರ ಪ್ರಮಾಣ ಕುಸಿಯುತ್ತಿದೆ. ಹೆಚ್ಚಿನ ಸಂಖ್ಯೆಯ ಯುವಕರು ಅಭಿವೃದ್ಧಿಶೀಲ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಜಗತ್ತಿನ ಯುವಕರಲ್ಲಿ ಶೇ.60ರಷ್ಟಕ್ಕೂ ಹೆಚ್ಚು ಮಂದಿ ಏಷ್ಯಾ-ಪೆಸಿಫಿಕ್ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ.
ಅದರಂತೆ ಭಾರತದ ಜನಸಂಖ್ಯೆ ಸುಮಾರು 1.46 ಬಿಲಿಯನ್ಗೆ ತಲುಪಿದೆ. 2050ರ ವೇಳೆಗೆ ಇದು ಸುಮಾರು 1.65 ರಿಂದ 1.7 ಬಿಲಿಯನ್ಗೆ ತಲುಪುವ ಸಾಧ್ಯತೆ ಇದೆ. ಜನಸಂಖ್ಯೆ ಹೆಚ್ಚಳ ಮುಂದುವರಿಯುವ ನೀರೀಕ್ಷೆ ಇದ್ದರೂ ಬೆಳವಣಿಗೆಯ ದರ ಕಡಿಮೆಯಾಗುತ್ತಿದೆ, 2025ರಲ್ಲಿ, ಭಾರತದ ಒಟ್ಟು ಜನಸಂಖ್ಯೆಯ ಶೇ.26ರಷ್ಟು 15-24ರ ವಯೋಮಿತಿಯೊಳಗೆ ಮತ್ತು ಶೇ.37.5ರಷ್ಟು (46.4 ಕೋಟಿ) 15-29ರ ವಯೋಮಿತಿಯೊಳಗೆ ಯುವಜನರಿದ್ದಾರೆ. ಒಟ್ಟು ಜನಸಂಖ್ಯೆಯ ಶೇ. 65ರಷ್ಟು ಜನರು 35ಕ್ಕಿಂತ ಕಡಿಮೆ ವಯೋಮಿತಿಯೊಳಗೆ ಇದ್ದಾರೆ. ಭಾರತದ ಒಟ್ಟು ಜನಸಂಖ್ಯೆ ಸುಮಾರು 1.46 ಬಿಲಿಯನ್ಗೆ ಹೆಚ್ಚಾಗುವ ನೀರೀಕ್ಷೆಯಿದ್ದರೂ, ಯುವಜನಸಂಖ್ಯೆ ಇನ್ನೂ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಯುವ ಶಕ್ತಿ ನಿಜವಾಗಿಯೂ ಈ ದೇಶದ ಆಸ್ತಿ, ಸಂಪತ್ತು ಮತ್ತು ವಿಕಸಿತ ಭಾರತದ ಹರಿಕಾರರು. ಇವರ ಅಭಿವೃದ್ಧಿಗಾಗಿ ಶಿಕ್ಷಣ, ಕೌಶಲ, ಆರೋಗ್ಯ ಸೇವೆ ಮತ್ತು ಉದ್ಯೋಗಗಳಲ್ಲಿ ಹೂಡಿಕೆಮಾಡಿದರೆೆ ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಯನ್ನು ಸಾಧಿಸುವುದರ ಮೂಲಕ ಜನಸಾಂಖ್ಯಿಕ ಲಾಭ (ಆಜಟಠಡಿಚಿಠಿಛಿ ಆತಜಜಟಿಜ) ಪಡೆಯಲು ಸಾಧ್ಯ. ಇಲ್ಲವಾದರೆ ಅದು ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳಿಗೆ ಕಾರಣವಾಗುತ್ತದೆ.
ಭಾರತವನ್ನು ಜಾಗತಿಕ ಕೌಶಲ ರಾಜಧಾನಿಯನ್ನಾಗಿ ಮಾಡಲು ವಿಶೇಷವಾಗಿ ಕೇಂದ್ರ ಸರ್ಕಾರವು ಯುವಜನರ ಕೌಶಲ ಅಭಿವೃದ್ಧಿಗಾಗಿ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ, ಆಜೀವಿಕಾ ಕೌಶಲ ಅಭಿವೃದ್ಧಿ ಕಾರ್ಯಕ್ರಮ, ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ, ಉದ್ಯಮ ಮೌಲ್ಯ ವೃದ್ಧಿಗಾಗಿ ಕೌಶಲ ಬಲವರ್ಧನೆ, ಜೀವನೋಪಾಯ ಉತ್ತೇಜನಕ್ಕಾಗಿ ಕೌಶಲ್ಯ ಅರಿವು ಮತ್ತು ಜ್ಞಾನ ಜಾಗೃತಿ ಯೋಜನೆ, ಉನ್ನತ ಶಿಕ್ಷಣದಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆ ಇವೆ ಮುಂತಾದ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.
ಈ ದಿಶೆಯಲ್ಲಿ ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಘಗಳು, ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕಲಿಕಾ ಕೇಂದ್ರಗಳು, ಶೈಕ್ಷಣಿಕ ತರಬೇತಿ ಕೇಂದ್ರಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸಮುದಾಯ ಸಂಘಟನೆಗಳು ಜನಸಂಖ್ಯಾ ಪ್ರವೃತ್ತಿ, ರಚನೆ, ಕುಟುಂಬ ಯೋಜನೆ, ಪುನರುತ್ಪಾದನಾ ಆರೋಗ್ಯ, ಸಂಬಂಧಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ಮತ್ತು ವಿವಿಧ ಕೌಶಲ ಅಭಿವೃದ್ಧಿಯ ಯೋಜನೆಗಳ ಕುರಿತಾಗಿ ಸಾಮಾನ್ಯ ಜನರಿಗೆ ಜಾಗೃತಿ ಮೂಡಿಸುವಲ್ಲಿ ಬೃಹತ್ ಪ್ರಮಾಣದ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕಿದೆ.
ಪ್ರೊ. ಆರ್. ಆರ್. ಬಿರಾದಾರ
ಕುಲಸಚಿವರು
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 