ಸರ್ಕಾರ ನೆರವಿಗೆ ಧಾವಿಸದಿದ್ದರೆ ಕಾರ್ಮಿಕರ ವೇತನ ಕಡಿತ, ವಜಾ ಅನಿವಾರ್ಯ

 ಸರ್ಕಾರ ನೆರವಿಗೆ  ಧಾವಿಸದಿದ್ದರೆ ಕಾರ್ಮಿಕರ ವೇತನ ಕಡಿತ, ವಜಾ  ಅನಿವಾರ್ಯ

ನವದೆಹಲಿ, ಏ 15,ಲಾಕ್ಡೌನ್   ಸಂಕಷ್ಟ  ಸನ್ನಿವೇಶದಲ್ಲಿ ಸಣ್ಣ ಮತ್ತು  ಇತರೆ ಉದ್ದಿಮೆದಾರರ ನೆರವಿಗೆ   ಸರ್ಕಾರ ಮುಂದಾಗದಿದ್ದರೆ ಉದ್ಯೋಗಿಗಳ ವೇತನ ಕಡಿತ ಮತ್ತು ವಜಾ ಅನಿವಾರ್ಯ ಎನ್ನುವ  ಹತಾಶ ಪರಿಸ್ಥಿತಿ  ಕೈಗಾರಿಕಾ ಮಾಲೀಕರಲ್ಲಿ  ಮನೆ ಮಾಡಿದೆ. ದೇಶದಲ್ಲಿ ಮೇ 3ರವರೆಗೆ ಲಾಕ್ಡೌನ್ ಮುಂದುವರಿದಿದ್ದರಿಂದ ಬಹುತೇಕ ಎಲ್ಲಾ ಉದ್ಯಮಗಳು ಮತ್ತಷ್ಟು ಆಘಾತ  ಜೊತೆಗೆ ಭಾರಿ  ನಷ್ಟ ಅನುಭವಿಸಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನೆರವನ್ನು ಎದುರು ನೋಡುತ್ತಿರುವುದಾಗಿ ಅನೇಕ ಮಾಲೀಕರು  ಬಹಿರಂಗವಾಗಿಯೇ ನೋವು, ಅಸಹಾಯಕತೆ ತೋಡಿಕೊಂಡಿದ್ದಾರೆ. ಲಾಕ್ಡೌನ್ ಕಾರಣ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಬೇಡಿ, ವೇತನ ಕಡಿತಗೊಳಿಸಬೇಡಿ, ಕಾರ್ಮಿಕರಿಗೆ ಅಗತ್ಯ ನೆರವು ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಉದ್ದಿಮೆ ಮತ್ತು ಕೈಗಾರಿಕಾ ವಲಯಕ್ಕೆ ಮನವಿ ಮಾಡಿದ್ದರು.

ಆದರೆ ಸರ್ಕಾರದ ಹಣಕಾಸಿನ ನೆರವು ದೊರೆಯದಿದ್ದರೆ ಪ್ರಧಾನಿ ಮಾತುಪಾಲನೆ ಮಾಡುವುದು  ಬಹಳ ಕಷ್ಟಕರವಾಗಲಿದೆ ಎಂದು ಅನೇಕ ಮಾಲೀಕರು ಕೈ ಚೆಲಿದ್ದಾರೆ ಎಂದೂ ವರದಿಯಾಗಿದೆ. 21 ದಿನಗಳ ಲಾಕ್ಡೌನ್ ಜೊತೆಗೆ ಮತ್ತೆ  19 ದಿನಗಳ ವಿಸ್ತರಣೆಯಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಉದ್ದಿಮೆಗಳಿಗೆ ಯಾವುದೆ ವರಮಾನವೇ ಇಲ್ಲದಂತಾಗಿದೆ. ವಾಸ್ತವ ಪರಿಸ್ಥಿತಿ ಅರಿಯಲು ಕೈಗಾರಿಕಾ ಸಂಘಟನೆಗಳು ಸರ್ಕಾರದ ಗಮನಕ್ಕೆ ತಂದಿವೆ. ತಮ್ಮಿಂದ ವೇತನ ನೀಡಲು ಸಾಧ್ಯವಾಗದ ಕಾರಣಕ್ಕೆ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದು ಅನಿವಾರ್ಯ ಎಂದೂ ಅನೇಕ  ಮಾಲೀಕರು ಅಳಲು ತೋಡಿಗೊಂಡಿದ್ದಾರೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಕನಿಷ್ಟ ಆರು ತಿಂಗಳ ವರೆಗೆ ಶೇಕಡ 50 ರಷ್ಟು ವೇತನ ಪಾವತಿಸಬೇಕು ಇಎಸ್ಐ ಹಾಗೂ ಪಿಎಫ್ ಹಣವನ್ನೂ ಸರ್ಕಾರವೇ ಭರಿಸಬೇಕು ಎಂದೂ  ಸರ್ಕಾರಕ್ಕೆ ಮಾಲಿಕರು ದುಂಬಾಲು  ಬಿದ್ದಿದ್ದಾರೆ