ಮಹಿಳೆಯರ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಶಾಸಕ ಆಸೀಫ್ ಸೇಠ್

ಮಹಿಳೆಯರ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಶಾಸಕ ಆಸೀಫ್ ಸೇಠ್ Women's talent needs encouragement: MLA Asif Sait

ಲೋಕದರ್ಶನ ವರದಿ 

ಬೆಳಗಾವಿ 06: ಮಹಿಳೆಯರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆ ಎತ್ತಿಹಿಡಿಯಲು ವಿವಿಧ ರೀತಿಯ ಸಾಂಸ್ಕೃತಿಕ ಹಾಗೂ ನೃತ್ಯ ಸ್ಪರ್ಧೆಗಳನ್ನು ಆಯೋಜಿಸುವುದು ಅಗತ್ಯವಾಗಿದೆ. ಇಂತಹ ಸೃಜನಶೀಲ ಕಾರ್ಯಕ್ರಮಗಳಿಗೆ ನನ್ನ ಕಡೆಯಿಂದ ಎಲ್ಲ ರೀತಿಯ ಸಹಕಾರ ಮತ್ತು ಪ್ರೋತ್ಸಾಹ ಸದಾ ಇರಲಿದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್(ರಾಜು) ಸೇಠ್ ಭರವಸೆ ನೀಡಿದರು. 

ನಗರದ ಮಹಾಂತೇಶ್ ನಗರದ ಮಹಾಂತ ಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಸ್ಫೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್‌’ನ 12ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮ ಕಲೆ, ಕೌಶಲ್ಯ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಇಂತಹ ಸಂಸ್ಥೆಗಳು ಅತ್ಯುತ್ತಮ ವೇದಿಕೆಯಾಗಲಿವೆ. ಸಂಸ್ಥೆಯ ಪದಾಧಿಕಾರಿಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯತ್ನ ಶ್ಲಾಘನೀಯ ಎಂದ ಅವರು, ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ರಾಜ್ಯ ಮಟ್ಟದ ಸಾಂಸ್ಕೃತಿಕ, ನೃತ್ಯ ಹಾಗೂ ಗಾಯನ ಸ್ಪರ್ಧೆಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಮುಖ ಸುದ್ದಿ ನಿರೂಪಕಿ ಭಾವನಾ ಮಾತನಾಡಿ, ಸಮಾಜದಲ್ಲಿ ಇತ್ತೀಚೆಗೆ ನಡೆದ ಟ್ವಿಶಾ ಶರ್ಮಾ ಹಾಗೂ ಸಿಯಾ ಪ್ರಕರಣಗಳನ್ನು ಪ್ರಸ್ತಾಪಿಸಿ ಭಾವುಕರಾದರು. ಹೆಣ್ಣುಮಕ್ಕಳು ತಮ್ಮ ಹೆತ್ತವರನ್ನು ಒಪ್ಪಿಸಲು ಸಾಧ್ಯವಾಗದೆ ಅಥವಾ ತಮ್ಮ ನೋವನ್ನು ಹಂಚಿಕೊಳ್ಳಲಾಗದೆ ಆತ್ಮಹತ್ಯೆ ಮತ್ತು ಕೊಲೆಯಂತಹ ದಾರಿಗಳಿಗೆ ಸಿಲುಕುತ್ತಿರುವುದು ಅತ್ಯಂತ ದುಃಖದ ಸಂಗತಿ ಎಂದರು. 

ನಾವು ಹೆಣ್ಣುಮಕ್ಕಳಿಗೆ ಉತ್ತಮ ಮಗಳಾಗಲು, ಸೊಸೆಯಾಗಲು, ತಾಯಿಯಾಗಲು ಸಂಸ್ಕಾರವನ್ನೇನೋ ಕಲಿಸುತ್ತಿದ್ದೇವೆ. ಆದರೆ, ಅವರು ತಮಗೋಸ್ಕರ ಸ್ವತಂತ್ರವಾಗಿ ಹೇಗೆ ಬದುಕಬೇಕು ಎನ್ನುವುದನ್ನು ಕಲಿಸಿಕೊಡುತ್ತಿದ್ದೇವಾ? ಎಂದು ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪೋಷಕರೇ ನಿಮ್ಮ ಹೆಣ್ಣುಮಕ್ಕಳ ಬೆನ್ನೆಲುಬು. ಮದುವೆಯಾದ ಬಳಿಕ ನಿನ್ನ ಸಮಸ್ಯೆಯನ್ನು ತವರಿಗೆ ತರಬೇಡ ಎಂದು ಬೇಲಿ ಹಾಕಿ, ಮಕ್ಕಳ ಆಸೆಗಳನ್ನು ಹತ್ತಿಕ್ಕಿದಾಗ ನಾವು ನಮ್ಮ ಮಕ್ಕಳನ್ನು ನಾವೇ ಕೊಂದಂತಾಗುತ್ತದೆ. ಹೆಣ್ಣುಮಕ್ಕಳಿಗೆ ಸದಾ ಪೋಷಕರು ಬೆಂಬಲವಾಗಿ ನಿಲ್ಲಬೇಕು ಎಂದು ತಿಳಿಸಿದರು. 

ಸಂಸ್ಥೆಯ ಅಧ್ಯಕ್ಷ ಜ್ಯೋತಿ ಭಾವಿಕಟ್ಟಿ ಮಾತನಾಡಿ, ನಮ್ಮ ಸಂಸ್ಥೆಯು ಕೇವಲ ಆಟ ಮತ್ತು ಸಂಭ್ರಮಕ್ಕೆ ಸೀಮಿತವಾಗಿಲ್ಲ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಕುಂಕುಮಾರ್ಚನೆಯಂತಹ ಲಲಿತಾ ಪೂಜೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಮತ್ತು ಅವರು ತಯಾರಿಸುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ವಸ್ತು ಪ್ರದರ್ಶನಗಳನ್ನು ಏರಿ​‍್ಡಸಲಾಗುತ್ತಿದೆ. ಇದರೊಂದಿಗೆ ಅನಾಥ ಮಕ್ಕಳಿಗೆ ಸೈಕಲ್ ವಿತರಣೆ ಹಾಗೂ ಜೈಲಿನಲ್ಲಿರುವ ಮಹಿಳಾ ಕೈದಿಗಳ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ಒದಗಿಸುವ ಮೂಲಕ ಸಾಮಾಜಿಕ ಕಳಕಳಿಯನ್ನೂ ಮೆರೆದಿದ್ದೇವೆ. ಮಹಿಳೆಯರೆಲ್ಲರೂ ಒಗ್ಗಟ್ಟಿನಿಂದ ಆರ್ಥಿಕವಾಗಿ ಬೆಳೆಯಬೇಕೆಂಬುದೇ ಸಂಸ್ಥೆಯ ಮುಖ್ಯ ಉದ್ದೇಶವಿದೆ ಎಂದರು. 

ಇನ್ನೊಬ್ಬ ಅತಿಥಿ ಶೈಲಜಾ ಭಿಂಗೆ ಮಾತನಾಡಿ, ಸಂಸ್ಥೆಯು ಸಮಾಜದಲ್ಲಿ ಮಹಿಳೆಯರ ಅಸ್ಮಿತೆ ಹಾಗೂ ಉನ್ನತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು. ಮುತ್ತುಗಳು ಚದುರಿ ಹೋಗುವುದು ಸಹಜ, ಆದರೆ ದಾರವು ಅವುಗಳನ್ನು ಒಟ್ಟಿಗೆ ಹಿಡಿದಿಡುತ್ತದೆ. ನಾವೆಲ್ಲರೂ ಆ ದಾರದಂತೆ ಒಟ್ಟಾಗಿ ನಿಂತು ಈ ಮಹಿಳಾ ವೇದಿಕೆಯನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಶಾಯರಿ ಮೂಲಕ ಕರೆ ನೀಡಿ ಸರ್ವೇ ಜನಾಃ ಸುಖಿನೋ ಭವಂತು ಮಂತ್ರದೊಂದಿಗೆ ಮಾತು ಮುಗಿಸಿದರು. 

ಪ್ರಮುಖರಾದ ಸಂಜೀವ್ ಎಸ್‌. ಪಟ್ಟಣಶೆಟ್ಟಿ, ರೇಷ್ಮಾ ನೇರ್ಲಿ, ಲತಾ ಕರಡಿಗುದ್ದಿ, ಗೀತಾ ಮಲ್ಲಾಪುರ್, ಪ್ರೇಮಾ ದೇಶನೂರ, ಉಷಾ ಶೆಟ್ಟರ್, ಸವಿತಾ ಕಳಸಣ್ಣವರ್, ಅಶ್ವಿನಿ ಪಾಟೀಲ್, ಅಂಜನಾ ಹಿರೇಮಠ, ನಿಶಾ ಝೆಂಡ, ಶ್ವೇತಾ ಪಾಟೀಲ್, ಅನಿತಾ ಚಟ್ಟೇರ್ ಸೇರಿದಂತೆ ಸಲಹಾ ಸಮಿತಿಯ ಬಳಗ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಿಂದ ನಡೆದ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು