ವಿಷಕಾರಿ ಹಾವು ಕಡಿತ: ನಾಗರಪಂಚಮಿ ದಿನವೇ ಮಹಿಳೆ ಸಾವು

ವಿಷಕಾರಿ ಹಾವು ಕಡಿತ: ನಾಗರಪಂಚಮಿ ದಿನವೇ ಮಹಿಳೆ ಸಾವು Woman Dies of Venomous Snakebite on Nagara Panchami

ರಾಯಬಾಗ, ಆ. 18: ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಸತ್ಯವ್ವ ಶಿವಪ್ಪ ಶಿಂಗೆ (42) ಎಂಬ ವಿವಾಹಿತ ಮಹಿಳೆ ವಿಷಕಾರಿ ಹಾವು ಕಡಿತದಿಂದ ಮೃತಪಟ್ಟ ಘಟನೆ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

ನಾಗರಪಂಚಮಿ ಹಬ್ಬದಂದು ರೈತರ ಹೊಲದಲ್ಲಿ ಕಸ ತೆಗೆಯಲು ತೆರಳಿದ್ದ ಸತ್ಯವ್ವ ಅವರಿಗೆ ವಿಷಕಾರಿ ಕೊಳಕು ಮಂಡಲ ಹಾವು ಕಡಿದಿದೆ ಎನ್ನಲಾಗಿದೆ. ಹಾವು ಕಡಿದ ತಕ್ಷಣ ತೀವ್ರ ಅಸ್ವಸ್ಥಗೊಂಡ ಅವರನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ.

ಕುಟುಂಬಕ್ಕೆ ಆಧಾರವಾಗಿದ್ದ ಸತ್ಯವ್ವ ಅವರ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನಾಗರಪಂಚಮಿ ಹಬ್ಬದ ದಿನವೇ ದುರ್ಘಟನೆ ಸಂಭವಿಸಿದ್ದರಿಂದ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.