ಪದವಿ ಕಾಲೇಜುಗಳ ಸ್ವಯಂ ಪ್ರೇರಿತ ತರಗತಿ ಬಹಿಷ್ಕಾರ

ಪದವಿ ಕಾಲೇಜುಗಳ ಸ್ವಯಂ ಪ್ರೇರಿತ ತರಗತಿ ಬಹಿಷ್ಕಾರ  Voluntary class boycott of degree colleges

ಧಾರವಾಡ 25: ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲವನ್ನು ಬಗೆಹರಿಸಲು ಆಗ್ರಹಿಸಿ ಸೆಪ್ಟೆಂಬರ್ 27ರಂದು ನಡೆಯುತ್ತಿರುವ ಪದವಿ ಕಾಲೇಜುಗಳ ಸ್ವಯಂ ಪ್ರೇರಿತ ತರಗತಿ ಬಹಿಷ್ಕಾರದ ಕುರಿತು ಇಂದು ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಮಹಿಳಾ ಕಾಲೇಜುಗಳ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಲಾಯಿತು. ಮತ್ತು ವಿದ್ಯಾರ್ಥಿಗಳ ನಡುವೆ ಪ್ರಚಾರ ನಡೆಸಲಾಯಿತು. 

ಈ ಸಂದರ್ಭದಲ್ಲಿ ಎಐಡಿಎ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ ಈ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಆಗಿರುವ ಗೊಂದಲದಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಯುಜಿಸಿ ನಿಯಮಗಳು ಒಂದೆಡೆಯಾದರೆ, ಕೋರ್ಟಿನಲ್ಲಿ ನಡೆಯುತ್ತಿರುವ ಮೊಕದ್ದಮೆ ಇನ್ನೊಂದೆಡೆ. ಇದರ ನಡುವೆ ವಿದ್ಯಾರ್ಥಿಗಳು ಶೈಕ್ಷಣಿಕ ನಷ್ಟ ಅನುಭವಿಸುವಂತಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮುಂದುವರೆದು, ದಿನಗಳು ಉರುಳುತ್ತಾ ಇದ್ದರೂ ಈ ಸಮಸ್ಯೆ ಪರಿಹಾರವಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. 

ಆದ್ದರಿಂದ, ಕೂಡಲೇ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳು ಎದುರಿಸುತ್ತಿರುವ ಶೈಕ್ಷಣಿಕ ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ. ಈಗಾಗಲೇ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಈಗ ಮುಂದುವರೆದು, ಸೆಪ್ಟೆಂಬರ್ 27ರಂದು ರಾಜ್ಯಾದ್ಯಂತ ಪದವಿ ಕಾಲೇಜುಗಳ ತರಗತಿ ಬಹಿಷ್ಕಾರ ನಡೆಸಲಾಗುತ್ತಿದೆ ಎಂದು ತಿಳಿಸಿದರು. 

ವಿದ್ಯಾರ್ಥಿಗಳಿಗೆ ರಾಜ್ಯವಾಪಿ ನಡೆಯುತ್ತಿರುವ ಪದವಿ ಕಾಲೇಜುಗಳ ತರಗತಿ ಬಹಿಷ್ಕಾರದಲ್ಲಿ ಭಾಗವಹಿಸಿ ಐಕ್ಯತೆಯನ್ನು ಪ್ರದರ್ಶಿಸಲು ಕರೆ ನೀಡಲಾಯಿತು.