ದೇವರಹಿಪ್ಪರಗಿ 25: ‘ಆಪರೇಷನ್ ಸಿಂಧೂರ’ದ ಮೂಲಕ ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರ ಸದೆಬಡಿದ ಯೋಧರ ಆತ್ಮಸ್ಥೈರ್ಯ ಹೆಚ್ಚಿಸಲು ಮೇ 26ರಂದು ಪಟ್ಟಣದಲ್ಲಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಈ ಬಗ್ಗೆ ಹಲವು ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೋಮವಾರದಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಮೊಹರೆ ವೃತ್ತದಿಂದ ಆರಂಭಗೊಳ್ಳುವ ಯಾತ್ರೆಯು ಬಸ್ ನಿಲ್ದಾಣದ ಮೂಲಕ ಸಂಚರಿಸಿ ಡಾ. ಅಂಬೇಡ್ಕರ್ ವೃತ್ತದಲ್ಲಿ ತಲುಪಿದ ಬಳಿಕ ಬಹಿರಂಗ ಸಭೆ ನಡೆಯಲಿದೆ.‘ಪೆಹಲ್ಗಾಮ್ನಲ್ಲಿ 26 ಜನರನ್ನು ಕೊಂದ ಉಗ್ರರಿಗೆ ನಮ್ಮ ಸೈನಿಕರು ತಕ್ಕ ಉತ್ತರ ನೀಡಿ ಇಡೀ ಪ್ರಪಂಚಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ. ದೇಶದ ಅಖಂಡತೆ ಮತ್ತು ಭದ್ರತೆಗೆ ಧಕ್ಕೆ ಉಂಟಾದಾಗ ನಮ್ಮ ಸೈನಿಕರು ಎದೆಯೊಡ್ಡಿ ದೇಶವನ್ನು ಕಾಯುತ್ತಾರೆ. ಅವರಿಗೆ ಗೌರವ ಸಲ್ಲಿಸಲು ಈ ಯಾತ್ರೆ ಆಯೋಜಿಸಲಾಗಿದೆ. ಪಕ್ಷಾತೀತವಾಗಿ ಸಾರ್ವಜನಿಕರು ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.‘ಯಾತ್ರೆಯಲ್ಲಿ ತಾಲೂಕಿನ ಮಠಾಧಿಪತಿಗಳು, ಮಾಜಿ ಸೈನಿಕರು, ಬಿಜೆಪಿ ತಾಲ್ಲೂಕು ಮಂಡಲ ಪದಾಧಿಕಾರಿಗಳು, ಹಿಂದೂಪರ ಸಂಘಟನೆಗಳು, ಕಾಲೇಜು ವಿದ್ಯಾರ್ಥಿಗಳು, ಪ್ರಗತಿಪರ ಮುಖಂಡರು, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು,ರೈತ ಸಂಘ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.
ಬಿಜೆಪಿ ಮಂಡಲದ ಅಧ್ಯಕ್ಷರಾದ ಅವ್ವನಗೌಡ ಗ್ವಾತಗಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಭುಗೌಡ ಬಿರಾದಾರ ಅಸ್ಕಿ, ಪ.ಪಂ ಉಪಾಧ್ಯಕ್ಷರು ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ರಮೇಶ ಮಸಿಬಿನಾಳ ಅವರು ಮಾತನಾಡಿ,ಪಟ್ಟಣದಲ್ಲಿ ನಡೆಯುವ ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಎಲ್ಲಾ ಕಾರ್ಯಕರ್ತರ ಕೈಯಲ್ಲಿ ರಾಷ್ಟ್ರಧ್ವಜ ಮಾತ್ರ ಇರಬೇಕು, ಎಲ್ಲರೂ ಬರುವಾಗ ರಾಷ್ಟ್ರಧ್ವಜ ತರೋಣ, ನಮ್ಮ ವೀರ ಯೋಧರ ಪರವಾಗಿ ಘೋಷಣೆಗಳನ್ನು ಕೂಗೋಣ. ಈ ತಿರಂಗಾ ಯಾತ್ರೆ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿದ್ದು ಎಲ್ಲರೂ ಭಾಗವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲದ ಪ್ರ.ಕಾ ಗಳಾದ ಮಹಾಂತೇಶ ಬಿರಾದಾರ, ಪ್ರಕಾಶ ದೊಡಮನಿ, ಮುಖಂಡರುಗಳಾದಸೋಮಶೇಖರ ಹಿರೇಮಠ, ಸೋಮು ದೇವೂರ, ಭೀಮನಗೌಡ ಲಚ್ಯಾಣ, ಕಲ್ಮೇಶ ಬುದ್ನಿ, ದಾವೂದ ಇನಾಂದಾರ, ಶರಣು ದಳವಾಯಿ, ಸಂಜು ಹರವಾಳ, ರಮೇಶ ಇಂಗಳಗೇರ, ರಮೇಶ ಹಂಚಲಿ, ಶಿವಾನಂದ ಹುಲ್ಲೂರ, ಸತೀಶ ಹಣಮಂತ್ರಾಯ ಗುಣಕಿ, ಮಲ್ಲು ಗುಂಡಣ್ಣವರ, ಪಿಂಟು ಬಾಸುತ್ಕಾರ್, ಜಕ್ಕು ದೊಡ್ಡಿಣಿ, ಸುರೇಶ ಕುಠಾರ, ಅಭಿಷೇಕ್ ಅಂಬಲಗಿ,ಚಿನ್ನು ದಾನಗೊಂಡ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.