ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಲ್ಲಿ ವಿಳಂಬ ಬೇಡ: ಸಿ.ಎನ್‌.ಶ್ರೀಧರ್

ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಲ್ಲಿ ವಿಳಂಬ ಬೇಡ: ಸಿ.ಎನ್‌.ಶ್ರೀಧರ್ There should be no delay in providing facilities to eligible beneficiaries: C.N. Sridhar

ಜಿಲ್ಲಾ ಮಟ್ಟದ ಪ.ಜಾ/ ಪ.ಪಂ.ಜಿಲ್ಲಾ ಜಾಗೃತ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆ 

ಗದಗ 19 : ಅರ್ಹ ಪರಿಶಿಷ್ಟ ಜಾತಿ/ ಪಂಗಡದ ಫಲಾನುಭವಿಗಳಿಗೆ  ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ತಿಳಿಸಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ  ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜಿಲ್ಲಾ ಜಾಗೃತ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪ.ಜಾ/ಪ.ಪಂ. ಸಮುದಾಯದವರ  ದೌರ್ಜನ್ಯ  ಪ್ರತಿಬಂಧಕ  ಕಾಯ್ದೆಗಳ ಬಗ್ಗೆ  ಜಾಗೃತಿ ಮೂಡಿಸುವ ಕಾರ್ಯಾಗಾರಗಳನ್ನು  ಹಮ್ಮಿಕೊಳ್ಳಬೇಕು.  ಪ.ಜಾ/ಪ.ಪಂ. ದೌರ್ಜನ್ಯ  ಪ್ರಕರಣದಡಿ  ಅರ್ಹ ಸಂತ್ರಸ್ಥರಿಗೆ  ಪರಿಹಾರ ಧನ ಒದಗಿಸುವಲ್ಲಿ  ವಿಳಂಬವಾಗಬಾರದು. ಅಧಿಕಾರಿಗಳು  ಅರ್ಹರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ  ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದರು.    

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ  ಜಿಲ್ಲೆಯಲ್ಲಿ  20-3-2025 ರಿಂದ 17-6-2025 ರವರೆಗೆ   9  ದೌರ್ಜನ್ಯ ಪ್ರಕರಣಗಳು ನಡೆದಿದ್ದು  15 ಸಂತ್ರಸ್ತರಿಗೆ ( ಎಫ್‌.ಐ,ಆರ್ ಹಂತದಲ್ಲಿ) 5 ಲಕ್ಷ ರೂ  ಪರಿಹಾರ ಧನ ವಿತರಿಸಲಾಗಿದೆ.  2025-26 ನೇ ಸಾಲಿನಲ್ಲಿ  ( ಮೇ-2025 )  ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದವರ ಕಲ್ಯಾಣಕ್ಕಾಗಿ  122 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 18.04 ಲಕ್ಷ ರೂ ವೆಚ್ಚ ಮಾಡಲಾಗಿದೆ ಎಂದು  ಸಭೆಗೆ ತಿಳಿಸಿದರು.    

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ ಎಸ್‌ಸಿಎಸ್‌ಟಿ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳು ಇರುವಂತೆ ಕ್ರಮ ವಹಿಸಬೇಕು. ಎಸ್‌ಸಿಪಿ / ಟಿಎಸ್‌ಪಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿಗಳ ಕೂಲಂಕುಷ ಪರೀಶೀಲನೆ ಮಾಡುವುದು ಸಂಬಂಧಿತ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್‌.ನೇಮಗೌಡ ಅವರು ಮಾತನಾಡಿ  ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪೊಲೀಸ ಇಲಾಖೆಯು ಕಟಿಬದ್ಧವಾಗಿದೆ.  ಪ್ರಕರಣಗಳಿಗೆ ಸಂಬಂದಿಸಿದಂತೆ ಸಾಕ್ಷಾಧಾರಗಳ ಸಂಗ್ರಹವೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.  

ಸಭೆಯಲ್ಲಿ  ಎಸ್‌ಸಿ ಎಸ್‌ಟಿ  ಕಾಲೋನಿಗಳಲ್ಲಿ  ಸಿಸಿ ರಸ್ತೆ ಕಾಮಗಾರಿ, ಜೆ ಜೆ ಎಂ ಕಾಮಗಾರಿ, ಎಸ್ ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ, ಹಾಸ್ಟೆಲ್ ಗಳಲ್ಲಿ ಮೂಲಭೂತ ಸೌಲಭ್ಯ  ಕುರಿತು ಚರ್ಚಿಸಲಾಯಿತು.      

ಸಭೆಯಲ್ಲಿ  ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ, ಎಚ್,  ನಗರಾಭಿವೃದ್ಧಿ  ಕೋಶದ ಯೋಜನಾ ನಿರ್ದೇಶಕ ಬಸವನಗೌಡ ಕೊಟ್ಟೂರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್‌.ಎಸ್‌.ನೀಲಗುಂದ,   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ  ಪದ್ಮಾವತಿ ಜಿ,  ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ , ಶರೀಫ್ ಬಿಳೆಯಲಿ, ವಿನಾಯಕ ಬಳ್ಳಾರಿ, ಶ್ರೀನಿವಾಸ ದ್ಯಾವನೂರು ಸೇರಿದಂತೆ ನಾಮನಿರ್ದೇಶಿತ ಸದಸ್ಯರು,  ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು  ಹಾಜರಿದ್ದರು.