ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್‌ಕುಮಾರ್ ರಮೇಶ್ ರವರ ಭಯಾನಕ ಅನುಭವ

The terrifying experience of Vishwas Kumar Ramesh, the sole survivor of the Ahmedabad plane crash

ನಾನು ಹೇಗೆ ಇಂತಹ ಮಹಾ ದುರಂತದಿಂದ ಬದುಕಿದೆನೋ ನನಗೆ ಗೊತ್ತಾಗುತ್ತಿಲ್ಲ, ಕಣ್ ಮುಚ್ಚಿ ಕಣ್ಣು ತೆರೆಯುವುದರಲ್ಲಿ ಎಲ್ಲವೂ ನಡೆದು ಹೋಗಿಬಿಟ್ಟಿತ್ತು ಎಂದು ಇದು ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್‌ಕುಮಾರ್ ರಮೇಶ್ ಅವರ ಭಯಾನಕ ಅನುಭವವನ್ನು ಹೊರಹಾಕಿದ್ದಾರೆ.

ಭಾರತ ಮೂಲದ ಇಂಗ್ಲೆಂಡ್ ಪ್ರಜೆ ವಿಶ್ವಾಸ್‌ಕುಮಾರ್ ಅವರು, ‘ನನ್ನ ಕಣ್ ಮುಂದೆಯೇ ಎಲ್ಲವೂ ನಡೆದು ಹೋಯಿತು, ನಾನು ಸತ್ತೇ ಹೋದೆ ಎಂದುಕೊಂಡಿದ್ದೆ ಎಂದು ಆ ಭೀಕರ ಘಟನೆಯ ನೋವನ್ನು ಗದ್ಗದಿತರಾಗಿ ಹೇಳಿದ್ದಾರೆ.

ನಾನು ಬಿಜಿನೆಸ್ ಕ್ಲಾಸ್‌ನ ಹಿಂಬದಿಯ ಎಕಾನಮಿ ಕ್ಲಾಸ್‌ನ 11ಎ ಸೀಟ್‌ನ ತುರ್ತು ನಿರ್ಗಮನದ ದ್ವಾರದ ಬಳಿ ಕೂತಿದ್ದೆ. ವಿಮಾನ ಟೇಕ್ ಆಫ್ ಆದ ನಂತರ ಕೆಲವೇ ಸೆಕೆಂಡುಗಳಲ್ಲಿ ಅಲುಗಾಡಲು ಆರಂಭವಾಯಿತು. ಎಲ್ಲರೂ ಚೀರಾಡಲು ಶುರು ಮಾಡಿದರು. ವಿಮಾನ ನಿಯಂತ್ರಣ ಕಳೆದುಕೊಂಡು ಯಾವುದೋ ಕಟ್ಟಡಕ್ಕೆ ಜೋರಾಗಿ ಅಪ್ಪಳಿಸಿಕೊಂಡು ನುಗ್ಗಿತು. ತಕ್ಷಣವೇ ಬೆಂಕಿ ಹೊತ್ತಿಕೊಂಡಿತು. ಆಗ ನಾನು ಸೀಟ್ ಬೆಲ್ಟ್‌ ತೆಗೆದಿದ್ದೆ. ಕ್ಷಣಾರ್ಧದಲ್ಲೇ ನಾನು ಕುಳಿತಿದ್ದ ವಿಮಾನದ ಭಾಗ ಕಟ್ಟಡದ ನೆಲಮಹಡಿಗೆ ಹೋಗಿ ಬಿದ್ದಿತು. ನಾನು ಗೋಡೆಯ ಆಚೆ ಹೋಗಿ ಬಿದ್ದಿದ್ದರಿಂದ ಮುಂದೆ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿತ್ತು. ಓಡಿಹೋಗಲು ಹಿಂದೆ ಜಾಗವಿತ್ತು. ತಕ್ಷಣವೇ ಭಾರಿ ಕಷ್ಟಪಟ್ಟು ದೂರ ಓಡಿ ಬಂದೆ. ನನ್ನ ಬಳಿ ಕೂತಿದ್ದ ಅಂಕಲ್, ಅಂಟಿ ಬೆಂಕಿಯಲ್ಲಿ ಹೊತ್ತಿ ಉರಿದರು’ ಎಂದು 40 ವರ್ಷದ ವಿಶ್ವಾಸ್‌ಕುಮಾರ್ ಎದೆ ಝಲ್ಲೆನಿಸುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

‘ವಿಮಾನದ ಬಾಲ ಮತ್ತು ಮಧ್ಯಭಾಗ ಸ್ಫೋಟ ಸಂಭವಿಸಿದ ತಕ್ಷಣವೇ ಛಿದ್ರ ಛಿದ್ರವಾಗಿ ಹೊತ್ತಿ ಉರಿದಿವೆ. ಆದರೆ, ವಿಶ್ವಾಸ್‌ಕುಮಾರ್ ಕೂತಿದ್ದ ಮುಂದಿನ ಸ್ವಲ್ಪ ಭಾಗಕ್ಕೆ ಬೆಂಕಿ ಹೊತ್ತಿಕೊಳ್ಳುವ ಮುನ್ನ ಮುರಿದು ಬಿದ್ದಿರುವುದು ಪತ್ತೆಯಾಗಿದೆ.

ಆದರೆ, ಸೀಟ್ ನಂಬರ್ 11ಜೆ ನಲ್ಲಿ ಕೂತಿದ್ದ ವಿಶ್ವಾಸ್‌ಕುಮಾರ್ ಅವರ ಸಹೋದರನಿಗೆ ವಿಶ್ವಾಸ್‌ಕುಮಾರ್ ರೀತಿ ಅದೃಷ್ಟ ಇರಲಿಲ್ಲ ಎನಿಸುತ್ತದೆ. ಹಾಗಾಗಿ ಅವರು ದುರಂತದಲ್ಲಿ ಪ್ರಾಣ ಬಿಟ್ಟಿದ್ದಾರೆ.

ವಿಶ್ವಾಸ್‌ಕುಮಾರ್ ಅವರು ಲಂಡನ್‌ನಲ್ಲಿ ಉದ್ಯಮಿಯಾಗಿದ್ದಾರೆ. ಕೆಲಸದ ಸಲುವಾಗಿ ಅಹಮದಾಬಾದ್‌ಗೆ ಬಂದಿದ್ದ ಅವರು ಸಹೋದರನ ಹೊತೆ ವಾಪಸ್ ಲಂಡನ್‌ಗೆ ಹೊರಟಿದ್ದರು.

ಅಹಮದಾಬಾದ್‌ನ ಸಿವಿಲ್ ಹಾಸ್ಪಿಟಲ್‌ನಲ್ಲಿ ಬಿಗಿ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ವಾಸ್‌ಕುಮಾರ್ ಅವರನ್ನು ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.