ಧಾರವಾಡ, 14 : ನಗರದ ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಆಯುಕ್ತರ ಕಚೇರಿಯಲ್ಲಿ ಚಿತ್ರಕಲಾ ಹಿರಿಯ ವಿಷಯ ಪರೀವೀಕ್ಷಕ ಹುದ್ದೆಯಿಂದ ಇತ್ತೀಚೆಗಷ್ಟೇ ವಯೋನಿವೃತ್ತಿ ಹೊಂದಿದ ಪಿ. ಆರ್. ಬಾರಕೇರ ಅವರನ್ನು ಜಿಲ್ಲೆಯ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರ ಬಳಗ ಆತ್ಮೀಯವಾಗಿ ಗೌರವಿಸಿ ಬೀಳ್ಕೊಟ್ಟಿತು.
ಆಯುಕ್ತರ ಕಚೇರಿಯ ಮೂಲಕ ‘ಶಾಲಾ ಮಕ್ಕಳ ವಿದ್ಯಾ ವಿಕಾಸ’, ‘ಗಾಂಧೀಜಿ-150 : ಕುಂಚ ನಮನ’ ಹಾಗೂ ‘ಪರೀಕ್ಷೆಗಳಲ್ಲಿ ನಕಲು ತಡೆಗಟ್ಟುವುದು’ ಮುಂತಾದ ಪ್ರಧಾನ ಆಶಯಗಳಲ್ಲಿ ಹಲವಾರು ಚಿತ್ರಕಲಾ ರಚನಾ ಶಿಬಿರಗಳನ್ನು ಹಮ್ಮಿಕೊಂಡು ಕಲಾ ಅಭಿವ್ಯಕ್ತಿಗೆ ಸೂಕ್ತ ವೇದಿಕೆಗಳನ್ನು ಪಿ.ಆರ್. ಬಾರಕೇರ ಅವರು ಒದಗಿಸಿದ್ದರು. ಈ ಶಿಬಿರಗಳಲ್ಲಿ ಗಮನಸೆಳೆಯುವ ಚಿತ್ರಕಲಾ ಕೃತಿಗಳು ಹೊರಬಂದವು. ಜೊತೆಗೆ ಬೆಳಗಾವಿ ವಿಭಾಗ ಮಟ್ಟದ ಹಾಗೂ ರಾಜ್ಯ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆಗಳನ್ನೂ ಅಚ್ಚುಕಟ್ಟಾಗಿ ಸಂಘಟಿಸುವಲ್ಲಿ ಬಾರಕೇರ ಯಶಸ್ವಿಯಾಗಿದ್ದರು ಎಂದು ಚಿತ್ರಕಲಾ ಶಿಕ್ಷಕರು ನೆನಪುಗಳನ್ನು ಹಂಚಿಕೊಂಡರು.
ಚಿತ್ರಕಲಾ ಶಿಕ್ಷಕರುಗಳಾದ ಎಸ್.ಎ.ಕೇಸರಿ, ಸಿ.ಪಿ.ಗೋಪಾಲ, ಬಿ.ಆರ್.ಜಕಾತಿ, ರಾಜು ಬೇಡಗೌಡರ, ಆರ್.ಬಿ.ಹಳ್ಳೂರ, ಎಂ.ಬಿ.ಹುಬ್ಬಳ್ಳಿ, ಬಾಬಾಜಾನ್ ಮುಲ್ಲಾ, ಎಂ.ಎಂ.ಹೂಗಾರ, ಡಿ.ಎಂ.ಬಡಿಗೇರ, ರವಿ ಗೋಡಕೆ, ಎನ್.ಬಿ.ಪತ್ತಾರ, ಹರಿಚಂದ್ರ ಹಲಗತ್ತಿ ಇದ್ದರು.