ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಅಭಿಯೋಜಕರ ಪಾತ್ರ ಬಹುಮುಖ್ಯವಾದುದು

ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಅಭಿಯೋಜಕರ ಪಾತ್ರ ಬಹುಮುಖ್ಯವಾದುದು The role of prosecutors in the criminal justice system is crucial

       

ಬಳ್ಳಾರಿ 13:  ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಅಭಿಯೋಜಕರ ಪಾತ್ರ ಬಹುಮುಖ್ಯವಾಗಿದೆ ಎಂದು ಬಳ್ಳಾರಿ ವಲಯ ಪೊಲೀಸ್ ಉಪ ಮಹಾನೀರೀಕ್ಷಕರಾದ ವರ್ತಿಕಾ ಕಟಿಯಾರ್ ಅವರು ಹೇಳಿದರು. ಶನಿವಾರ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಬೆಂಗಳೂರು ಇವರ ಆಶ್ರಯದಲ್ಲಿ ನಗರದ ಹಳೆಯ ನ್ಯಾಯಾಲಯ ಆವರಣದ ಅಭಿಯೋಜಕ ಭವನದಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನೂತನ ಕಾನೂನು ಅಧಿಕಾರಿ (ಹಿರಿಯ) ಯವರ ಬಳ್ಳಾರಿ ವಿಭಾಗೀಯ ಕಚೇರಿಯ ಉದ್ಘಾಟನೆ ನೆರವೇರಿಸಿ ಬಳಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಅಭಿಯೋಜಕರು ಮತ್ತು ತನಿಖಾಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸಬೇಕು. ತನಿಖಾಧಿಕಾರಿಗಳು ಯಾವ ರೀತಿಯಾಗಿ ದೋಷರೋಪಣಾ ಪಟ್ಟಿ ತಯಾರಿಸಬೇಕು. ಅದಕ್ಕಿರುವ ಕಾನೂನು ಕ್ರಮ ಹಾಗೂ ಇತರೆ ಕುರಿತಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಕಾನೂನು ಹಿರಿಯ ಅಧಿಕಾರಿಗಳು ಚರ್ಚಿಸಿದ್ದು, ಮುಂದೆಯೂ ನಿರಂತರ ಚರ್ಚಿಸುವರು. ಇದರಿಂದ ಜನಸಾಮಾನ್ಯರಿಗೆ ನ್ಯಾಯ ದೊರಕಿಸಲು ಅಭಿಯೋಜಕರ ಪಾತ್ರದೊಂದಿಗೆ ಪರಿಣಾಮಕಾರಿಯಾಗಿ ಸಾಧ್ಯವಾಗಲಿದೆ ಎಂದು ಹೇಳಿದರು. 

ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಮಾತನಾಡಿ, ಪ್ರಸ್ತುತದ ರಾಜ್ಯ ಸರ್ಕಾರವು ಅಸ್ತಿತ್ವಕ್ಕೆ ಬಂದಮೇಲೆ ಕಾನೂನು ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಸಂತ್ರಸ್ತರು ಇರುವಲ್ಲಿಯೇ ನ್ಯಾಯ ಅವರ ಹತ್ತಿರವಾಗುತ್ತಿದೆ ಎಂದು ಹೇಳಿದರು. 

ಈ ಹಿಂದೆ ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಬಹಳಷ್ಟು ಅಂತರವಿತ್ತು. ಈಗ ಯಾವುದೇ ಪ್ರಕರಣವಿರಲಿ ತ್ವರಿತವಾಗಿ ಪತ್ತೆಮಾಡಿ ಇತ್ಯರ್ಥಗೊಳಿಸುವ ಮೂಲಕ ಪೊಲೀಸ್ ಇಲಾಖೆಯು ಸಾರ್ವಜನಿಕರೊಂದಿಗೆ ಉತ್ತಮ ಭಾಂದವ್ಯ ಹೊಂದಿ ಜನಸ್ನೇಹಿ ಆಡಳಿತ ಸೇವೆ ನೀಡುತ್ತಿದೆ ಎಂದು ಅಭಿಮತ ವ್ಯಕ್ತಪಡಿಸಿದರು. 

ನೊಂದ ಜನರಿಗೆ ಸಂತ್ವಾನದ ಮಾತು ಮುಖ್ಯ. ಯಾವುದೇ ಪ್ರಕರಣ ಕೋರ್ಟ್‌ ಮೆಟ್ಟಿಲೇರುವ ಮೊದಲೇ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಬೇಕು. ಅಪರಾಧಿಗೆ ಶಿಕ್ಷೆಯಾದಾಗ ಮಾತ್ರ ಭಯ ಬರಲಿದೆ. ಅಪರಾಧಿಯೊಬ್ಬ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತೆ ಆಗಬಾರದು. ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಅಭಿಯೋಜಕರ ಕರ್ತವ್ಯವಾಗಿದೆ ಎಂದು ಕಿವಿಮಾತು ಹೇಳಿದರು. 

ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ ಅವರು ಮಾತನಾಡಿ, ವಕೀಲರು ಮತ್ತು ಕಕ್ಷಿದಾರರು ಪಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನೂತನ ಕಾನೂನು ಅಧಿಕಾರಿ (ಹಿರಿಯ) ಯವರ ಬಳ್ಳಾರಿ ವಿಭಾಗೀಯ ಕಚೇರಿಯು ನಾಲ್ಕು ಜಿಲ್ಲೆಗಳಿಗೆ ಕೇಂದ್ರಸ್ಥಾನವಾಗಿ ಆರಂಭಗೊಂಡಿರುವುದು ನಮ್ಮ ಜಿಲ್ಲೆಯ ಸೌಭಾಗ್ಯವಾಗಿದೆ. ಇಲಾಖೆಗೆ ಬೇಕಾದ ಸೌಲಭ್ಯಗಳನ್ನು ಮಹಾನಗರ ಪಾಲಿಕೆಯಿಂದ ಒದಗಿಸಿಕೊಡಲಾಗುವುದು ಎಂದು ಹೇಳಿದರು. 

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ಹಸಿವಿನಿಂದ ಬಳಲುವವರಿಗೆ ಅನ್ನಭಾಗ್ಯ, ಕತ್ತಲೆಯಲ್ಲಿ ವಾಸ ಮಾಡುವವರಿಗೆ ಬೆಳಕು ನೀಡುವ ಗೃಹಜ್ಯೋತಿ, ಕೇವಲ ಮನೆಗೆ ಸೀಮಿತರಾಗಿದ್ದ ಮಹಿಳೆಯರನ್ನು ಇಡೀ ರಾಜ್ಯಾದಾದ್ಯಂತ ಸಂಚರಿಸಲು ಶಕ್ತಿ, ಮಹಿಳೆ ಸ್ವಾವಲಂಬಿಯಾಗಲು ಗೃಹಲಕ್ಷ್ಮಿ ಮತ್ತು ನಿರುದ್ಯೋಗ ಯುವ ಸಮುದಾಯಕ್ಕೆ ಸಹಾಯಧನದ ಅಸ್ತ ನೀಡಲು ನಮ್ಮ ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದು ನೊಂದವರಿಗೆ ನ್ಯಾಯ-ನಮ್ಮ ಸರ್ಕಾರದ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು. 

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌.ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಬುರಗಿ ವಿಭಾಗದ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ವಿಜಯನಗರ ಸೇರಿ ನಾಲ್ಕು ಜಿಲ್ಲೆಗಳಿಗೆ ಬಳ್ಳಾರಿ ವಲಯ ಕಚೇರಿ ಸೇವೆ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೇವಲ 2 ತಿಂಗಳಲ್ಲಿ ಕಟ್ಟಡ ಗುರುತಿಸಿ ಅದನ್ನು ಆರಂಭಿಸಿರುವುದು ಕಾನೂನು ಹಿರಿಯ ಅಧಿಕಾರಿಯವರ ಕಾರ್ಯ ವೈಖರಿ ಪ್ರತಿಬಿಂಬಿಸುತ್ತಿದೆ ಎಂದರು. 

ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ನ್ಯಾಯಸೇವೆ ಒದಗಿಸಲು ‘ನೊಂದವರಿಗೆ ನ್ಯಾಯ’ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಅಧೀನದ ನೊಂದವರಿಗೆ ನ್ಯಾಯ ಒದಗಿಸುವ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು. 

ಮುಂಬರುವ ದಿನಗಳಲ್ಲಿ ಅಭಿಯೋಜಕರ ವೃತ್ತಿ ಕೌಶಲ ಅಭಿವೃದ್ಧಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಲಾಗಿದೆ. ಅಭಿಯೋಜಕರು ನಿರಂತರ ಓದು, ಪ್ರಸಕ್ತ ಕಾನೂನು ಜ್ಞಾನದ ಮೂಲಕ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯ. ಇದಕ್ಕೆ ತಂತ್ರಜ್ಞಾನದ ಸಹಾಯವನ್ನೂ ಪಡೆದುಕೊಳ್ಳಬೇಕು. ಪ್ರಕರಣಗಳ ವಿಚಾರಣೆ ವೇಳೆ, ಅಭಿಯೋಜಕರು ಸರಿಯಾದ ಸಿದ್ಧತೆ ಹೊಂದಬೇಕು ಎಂದು ಕಿವಿಮಾತು ಹೇಳಿದರು. 

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಬೆಂಗಳೂರಿನ ನಿರ್ದೇಶಕರಾದ ಅಂಜಲಿದೇವಿ ಅವರು ಮಾತನಾಡಿ, ಜನಸೇವೆಗಾಗಿಯೇ ನಮ್ಮ ಇಲಾಖೆ ಇರುವುದಾಗಿದ್ದು, ಸರ್ಕಾರಿ ಅಭಿಯೋಜಕರು ಮತ್ತು ಪೊಲೀಸರು ಸಮನ್ವಯದಿಂದ ಕೆಲಸ ಮಾಡಿದಾಗ ಮಾತ್ರ ನ್ಯಾಯದಾನ ಪ್ರಕ್ರಿಯೆ ಸರಿಯಾದ ಸಮಯಕ್ಕೆ ಆಗುತ್ತದೆ. ಹಾಗಾಗಿ ಪೊಲೀಸ್ ಇಲಾಖೆಯ ಸಹಭಾಗಿತ್ವ  ಮಹತ್ವದ್ದಾಗಿದೆ ಎಂದು ತಿಳಿಸಿದರು.  

ಬಳ್ಳಾರಿ ವಿಭಾಗೀಯ ಕಚೇರಿಯ ನೂತನ ಕಾನೂನು ಅಧಿಕಾರಿ(ಹಿರಿಯ) ಬಿ.ಎಸ್‌.ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಗೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನೂತನ ಕಾನೂನು ಅಧಿಕಾರಿ (ಹಿರಿಯ) ಯವರ ಬಳ್ಳಾರಿ ವಿಭಾಗೀಯ ಕಚೇರಿಯು 2022 ರಲ್ಲಿಯೇ ಕಲಬುರಗಿ ವಿಭಾಗದಿಂದ ಬೇರ​‍್ಪಟಟು ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳು ಒಳಗೊಂಡು ವಿಭಾಗೀಯ ಕಚೇರಿ ಮಂಜೂರಾಗಿತ್ತು. ಸ್ಥಳದ ಕೊರತೆಯಿಂದ ಆರಂಭಗೊಂಡಿರಲಿಲ್ಲ. ಅದು ಈಗ ಕೂಡಿಬಂದಿದ್ದು, ನಾಲ್ಕು ಜಿಲ್ಲೆಗಳ ವಿಶೇಷಾಸಕ್ತಿ ವಹಿಸಲು ಸರ್ಕಾರ ಅವಕಾಶ ನೀಡಿದೆ ಎಂದು ಗಣ್ಯರನ್ನು ಸ್ವಾಗತಿಸಿದರು. 

ಬಳಿಕ ಕಾರ್ಯಕ್ರಮದಲ್ಲಿ ‘ನೊಂದವರಿಗೆ ನ್ಯಾಯ’ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.  ‘ನ್ಯಾಯ ಜ್ಯೋತಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು ಮತ್ತು ಬಳ್ಳಾರಿ ವಿಭಾಗೀಯ ಕಚೇರಿಯ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು.  

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ, ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಜಾಹ್ನವಿ., ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ಬಾಬು, ಲೋಕೋಪಯೋಗಿ ಇಲಾಖೆ ವಿಭಾಗದ ಕಾರ್ಯಪಾಲಕ ಅಭಿಯಂತರ ಹೇಮರಾಜ.ಕೆ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಬ್ರಹ್ಮಂ ಸೇರಿದಂತೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಅಧಿಕಾರಿಗಳು, ವಕೀಲರು ಸೇರಿದಂತೆ ಇತರರು ಉಪಸ್ಥಿತರಿದ್ದರು.