ಭಗವಾನ್ ಮಹಾವೀರರು ಮನುಕುಲಕ್ಕೆ ಸಾರಿದ ಸತ್ಯ, ಅಹಿಂಸೆಯಂತಹ ಮೌಲ್ವಿಕ ತತ್ವಗಳು ಸಾರ್ವಕಾಲಿಕ: - ಬಸವರಾಜ ಹೆಗ್ಗನಾಯಕ

ಭಗವಾನ್ ಮಹಾವೀರರು ಮನುಕುಲಕ್ಕೆ ಸಾರಿದ ಸತ್ಯ, ಅಹಿಂಸೆಯಂತಹ ಮೌಲ್ವಿಕ ತತ್ವಗಳು ಸಾರ್ವಕಾಲಿಕ:  - ಬಸವರಾಜ ಹೆಗ್ಗನಾಯಕ The moral principles like truth and non-violence preached by Lord Mahavira to humanity are timeless:

ಲೋಕದರ್ಶನ ವರದಿ

ಬೆಳಗಾವಿ 31:    ಭಗವಾನ್ ಮಹಾವೀರರು ಮನುಕುಲಕ್ಕೆ ಸಾರಿದ ಸತ್ಯ, ಅಹಿಂಸೆಯಂತಹ ಮೌಲ್ವಿಕ ತತ್ವಗಳು ಸಾರ್ವಕಾಲಿಕವಾಗಿದ್ದು, ಅವರ ಸಂದೇಶಗಳನ್ನು ಯುವಕರು ಅರ್ಥೈಸಿಕೊಂಡು ಆದರ್ಶ ಜೀವನ ನಡೆಸುವಂತೆ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ (ಮಾ.31 ) ರಂದು ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಶ್ರೀ ಮಹಾವೀರ  ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಅಹಿಂಸೆಯ ಪಾಠ ಹೇಳಿಕೊಟ್ಟ ಭಗವಾನ್ ಮಹಾವೀರರು, ಅಹಿಂಸೆ ಆಚರಣೆಯ ಮಾರ್ಗದಲ್ಲಿ ಜೀವನದ ಸಾಕ್ಷಾತ್ಕಾರದ ಪಥ ತೋರಿಸಿದ ಮಹಾನ್ ಯುಗ ಪುರುಷ. ಭಗವಾನ್ ಮಹಾವೀರರು ಎಲ್ಲರಿಗೂ ಒಳಿತನ್ನು ಬಯಸುವ ಮೂಲಕ ಜಗತ್ತಿಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು. 

ಮಹಾವೀರರು ಬೋಧಿಸಿದ ಪ್ರತಿ ಸಂದೇಶದಲ್ಲಿ ಅಪಾರ ಅನುಭವವಿದೆ. ಶಾಂತಿಮಂತ್ರ ಅನುಸರಿಸುವ ಮೂಲಕ ಜೀವನದ ಓಚಿತ್ಯದ ಮಹತ್ವ ಸಾರಿದ್ದಾರೆ. ಹಾಗಾಗಿ  ಮಹಾವೀರ ಅವರು ಅಹಿಂಸೆ, ತ್ಯಾಗ ಹಾಗೂ ವೈರಾಗ್ಯದ ಸಾಕಾರ ಮೂರ್ತಿಯಾಗುವ ಮೂಲಕ ತಮ್ಮ ಕೀರ್ತಿಯನ್ನು ಜಗತ್ತಿಗೆ ಸಾರಿದ್ದಾರೆ. 

ಭಗವಾನ್ ಮಹಾವೀರರು, ನೀನು ಜೀವಿಸು,  ಇತರರಿಗೂ ಜೀವಿಸಲು ಅವಕಾಶ ನೀಡು, ಸತ್ಯವನ್ನೇ ನುಡಿ, ಕಳ್ಳತನ ಮಾಡಬೇಡ, ಸುಳ್ಳು ಹೇಳಬೇಡ, ಅಹಿಂಸೆಯೇ ಪರಮೋಧರ್ಮ ಎಂಬ ವಿಚಾರಗಳನ್ನು ಪ್ರತಿಪಾದಿಸುವ ಮೂಲಕ ಈ ಜಗತ್ತಿಗೆ ನೀಡಿದ ಮೌಲಿಕ ಕೊಡುಗೆ ಅಪಾರವಾಗಿದೆ ಎಂದು ಭಗವಾನ್ ಮಹಾವೀರರ ವ್ಯಕ್ತಿತ್ವವನ್ನು ಬಣ್ಣಿಸಿ, ಭಗವಾನ್ ಮಹಾವೀರರು ಶಾಂತಿ ಪ್ರಿಯರಾಗಿದ್ದರು ಎಂದು ಬಸವರಾಜ ಹೆಗ್ಗನಾಯಕ ಅವರು ತಿಳಿಸಿದರು. 

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರತನಚಂದ ನೇಮಿನಾಥ ಕೋಟಿ ಅವರು ಮಾತನಾಡಿ ಜೈನ ಧರ್ಮದ ಮೂಲಮಂತ್ರವಾದ ಅಹಿಂಸಾ ಪರಮೋ ಧರ್ಮ ಎಂಬಂತೆ ಜಗತ್ತಿನ ಯಾವುದೇ ಪ್ರಾಣಿಗಳಿಗೂ ಹಿಂಸೆ ನೀಡದೆ ಜೀವನ ಸಾಗಿಸುವುದು. ಸಮ್ಯಕ ದರ್ಶನದಿಂದ ಒಳ್ಳೆಯ ವಿಶ್ವಾಸ ಜ್ಞಾನ, ಉತ್ತಮ ನಡವಳಿಕೆ ಹೊಂದುವ ಮೂಲಕ ಅಮರ ತತ್ವದ ಕಡೆಗೆ ಹೋಗುವುದನ್ನು ಕಲಿಸುತ್ತದೆ. ಐದು ಪರಮ ತತ್ವಗಳನ್ನು ಮಹಾವೀರರು ನೀಡಿದ್ದು, ಅವರ ಆತ್ಮದಿಂದ ಹೇಳಿದ ನುಡಿಗಳಲ್ಲಿ ನಡೆದು ಸಾರ್ಥಕ ಜೀವನ ನಡೆಸೋಣ ಎಂದರು. 

ಮನಸ್ಸಿನ ಮಾತು ಕೇಳುವವರು ಸನ್ಯಾಸಿಗಳು, ಆತ್ಮದ ಮಾತು ಕೇಳುವವರು ಸಂಸಾರಿಗಳಾಗಿರುತ್ತಾರೆ. ತಪ್ಪು ನಂಬಿಕೆಗಳನ್ನು ಕೈ ಬಿಟ್ಟು ಆತ್ಮವನ್ನು ಹೋರತು ಪಡಿಸಿ ಬೇರೆ ಯಾವುದು ನನ್ನದಲ್ಲಾ ಎಂದು ಬದುಕಬೇಕು. ಪ್ರತಿಯೋಬ್ಬರು ಸತ್ಯ, ಅಹಿಂಸೆ, ಒಳ್ಳೆ ಜ್ಞಾನ, ನಂಬಿಕೆ, ನಡತೆಗಳನ್ನು ಅಳವಡಿಸಿಕೊಳ್ಳಬೇಕು. ಜೈನ ಧರ್ಮವು ಅಹಿಂಸೆಯಲ್ಲಿ ಅತ್ಯಂತ ನಂಬಿಕೆಯನ್ನು ಹೊಂದಿದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರು, ಗಣ್ಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. ತದ ನಂತರ ಜೈನ್ ಧರ್ಮದ ಕುರಿತು ನಾಟಕಗಳು ಪ್ರದರ್ಶನಗೊಂಡವು.