ಗಂಧದ ಮರದ ತುಂಡು ಮಾರಾಟ ಮಾಡುತ್ತಿದ್ದವನ ಬಂಧನ

ಗಂಧದ ಮರದ ತುಂಡು ಮಾರಾಟ ಮಾಡುತ್ತಿದ್ದವನ ಬಂಧನ

ಬೆಂಗಳೂರು,  ಜ 30  ಗಂಧದ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು  ಸಿಸಿಬಿ ಪೊಲೀಸರು ಬಂಧಿಸಿ, 6 ಕೆಜಿ ತೂಕದ ತುಂಡನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ ಮೂಲದ ಅರ್. ಸಿ. ಜಯಣ್ಣ (37) ಬಂಧಿತ ಆರೋಪಿ‌.  ನಗರದ  ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಪಾಳ್ಯ ಲ್ಲಿರುವ ವಿವಿಎಸ್ ಇಂಟರ್ ನ್ಯಾಷನಲ್  ಸ್ಕೂಲ್ ಪಕ್ಕದ ಮನೆಯೊಂದರಲ್ಲಿ ಗಂಧದ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ  ಮೇರೆಗೆ ಸಿಸಿಬಿ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 6 ಕೆಜಿ ತೂಕದ ಹಾಗೂ ಸುಮಾರು 37 ಸೆಂ.ಮೀ ಉದ್ದದ ಮರದ ತುಂಡನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರೀಶ್  ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಆರೋಪಿಗಳಾದ ಜಯಣ್ಣ ಹಾಗೂ ಹರೀಶ್, ಅಧಿಕ ಹಣ ಗಳಿಸಿ  ಜೀವನ ಸಾಗಿಸಲು ಈ ವ್ಯವಹಾರಕ್ಕೆ ಕೈ ಹಾಕಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ  ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.