ನ್ಯಾಯದಾನ ಮಾಡುವ ಕಾರ್ಯ ದೇವರ ಕೆಲಸಕ್ಕೆ ಸಮ: ಉಪಲೋಕಾಯುಕ್ತ ನ್ಯಾ. ಕೆ.ಫಣೀಂದ್ರ

ಗದಗ 26:  ಅರ್ಹರಿಗೆ  ನ್ಯಾಯದಾನ ಮಾಡುವ ವ್ಯವಸ್ಥೆ ದೇವರ ಕೆಲಸಕ್ಕೆ ಸಮವಾದದ್ದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರು ಹೇಳಿದರು. 

ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ರವಿವಾರ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಮತ್ತು ಕಾನೂನು ಸೇವೆಗಳ  ಪ್ರಾಧಿಕಾರದ ಪಾತ್ರ ಕುರಿತು ನಡೆದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ  ಪ್ರಾಧಿಕಾರದವನ್ನು ಬೇರೆ ಇಲಾಖೆಗಳಿಗೆ ಹೋಲಿಸಿದರೆ ತುಂಬಾ ವ್ಯತ್ಯಾಸವಿದ್ದು  ಸಾರ್ವಜನಿಕರು ಇದನ್ನು ಗೌರವ ಮತ್ತು ವಿಶ್ವಾಸದಿಂದ ಕಾಣುವರು  ಅದನ್ನು ಉಳಿಸಿಕೊಳ್ಳುವ ಜವಬ್ದಾರಿ ನಮ್ಮ ಮೇಲಿದೆ. ಯಾರಿಗೂ ಅನ್ಯಾಯವಾಗದಂತೆ ಕೂಲಂಕಷವಾಗಿ ಪರೀಶೀಲಿಸಿ ಅರ್ಹರಿಗೆ ನ್ಯಾಯ ದಾನ ಮಾಡೋಣ ಎಂದು ಹೇಳಿದರು. 

ಕಾನೂನು ಸೇವಾ ಪ್ರಾಧಿಕಾರವನ್ನು ಬಳಸಿಕೊಂಡು ಅನೇಕ ಅಸಹಾಯಕ ಅರ್ಹರಿಗೆ ನ್ಯಾಯಕೊಡಿಸಲು ಸರ್ಕಾರ ನ್ಯಾಯಾಂಗಕ್ಕೆ ಗುರುತರ ಜವಾಬ್ದಾರಿಯನ್ನು ನೀಡಿದ್ದು ಅದನ್ನು ಸಮರ್ಥವಾಗಿ ನಿರ್ವಹಿಸೋಣ ಎಂದರು. 

ಈಗಾಗಲೇ ಲೋಕ ಅದಾಲತ್ ಮೂಲಕ ಹಲವಾರು ಸಮಸ್ಯೆ ಗಳಿಗೆ ಪರಿಹಾರ ಸಿಕ್ಕು ಅನೇಕ ಅರ್ಹರಿಗೆ ನ್ಯಾಯ ಒದಗಿದೆ. ಕಾನೂನು ಸೇವಾ ಪ್ರಾಧಿಕಾರದಿಂದ ಜರಗುವ ಕಾನೂನು ಅರಿವು ಕಾರ್ಯಕ್ರಮದ ಮೂಲಕ ಜನರಿಗೆ ಕಾನೂನಿನ ಜಾಗೃತಿ ಮೂಡಿಸಿ ಅನೇಕ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿದೆ ಎಂದರು. 

ಸಮಸ್ಯೆಗಳು ಹೇಗೆ ಉದ್ಭವಿಸುತ್ತವೆ ಎಂದು ಮೂಲವನ್ನು ಕಂಡುಹಿಡಿದು ಪರಿಹಾರ ಹೇಗೆ ನೀಡಬಹುದು ಎಂದು ತಿಳಿಯಲು ಸಹಕಾರಿಯಾಗಿದೆ. 

ಇಲಾಖೆಗಳು ಹಲವಾರು ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳುತ್ತವೆ. ಅದರಿಂದ ಸಾರ್ವಜನಿಕರು ಪ್ರಯೋಜನ ಪಡೆದು ಉತ್ತಮ ಜೀವನ ನಡೆಸಲಿ, ಕಾಮಗರಿಯ ಅನುಷ್ಟಾನ ದಲ್ಲಿ ಭ್ರಷ್ಟಾಚಾರ ಅಥವಾ ಕಳಪೆ ಕಾಮಗಾರಿ ನಡೆದಲ್ಲಿ ಕಾನೂನು ಸೇವಾ ಪ್ರಾಧಿಕಾರವು ಇಲಾಖೆಗಳ ದೂರುಗಳನ್ನು ಸಹ ತನಿಖೆ ಮಾಡಿ ಸೂಚನೆ ನೀಡಲು ಅವಕಾಶವಿದೆ ಎಂದರು. 

ಯಾವುದೇ ಒಂದು ಪ್ರಕರಣದಲ್ಲಿ ಒಂದು ಕುಟುಂಬಕ್ಕೆ ಸಕಾಲದಲ್ಲಿ ಸರಿಯಾಗಿ ಪರಿಹಾರ ದೊರೆಯದಿದ್ದರೆ ಅಂತಹ ಕುಟುಂಬಗಳು ಬೀದಿಗೆ ಬರಬಹುದು ಅಥವಾ ಕುಟುಂಬದ ನಿರ್ವಹಣೆಗೆ ಅಡ್ಡದಾರಿ ಹಿಡಿಯಬಹುದು ಹಾಗಾಗಿ ಲೋಕಾಯುಕ್ತ ಮತ್ತು ಕಾನೂನು ಸೇವಾ ಪ್ರಾಧಿಕಾರದ ದೂರಿನ ಅನ್ವಯ ತನಿಖೆ ನಡೆಸಿ ಸರಿಪಡಿಸಲು ಅವಕಾಶವಿದೆ, ತಪ್ಪು ಮಾಡಿದ ಅಧಿಕಾರಿಗಳಿಗೆ ದಂಡ ಮತ್ತು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಹೇಳಿದರು. 

ಕಾನೂನು ಸೇವಾ ಪ್ರಾಧಿಕಾರದಿಂದ ಲೋಕಾಯುಕ್ತ ಕಾನೂನು ಕುರಿತು ಜಿಲ್ಲಾ, ತಾಲೂಕು ಮಟ್ಟದಲ್ಲಿ ಅರಿವು ಮೂಡಿಸಿ ಯಾವುದೇ ಅರ್ಜಿ ಬಂದಲ್ಲಿ ಪರಿಹಾರ ನೀಡಿ, ಸಾಧ್ಯವಾಗದಿದ್ದಲ್ಲಿ ಲೋಕಾಯುಕ್ತ ಕಚೇರಿಗೆ ಕಳುಹಿಸಿ ಎಂದರು. 

ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ  ಪ್ರಾಧಿಕಾರವು ಸಮಸ್ಯೆ ಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು. 

ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಸವರಾಜ ಅವರು ಮಾತನಾಡಿ, ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ  ಪ್ರಾಧಿಕಾರದ ವ್ಯಾಪ್ತಿಯು ಅಪರಿಮಿತವಾಗಿದ್ದು ಅದನ್ನು ಸರಿಯಾಗಿ ಸದ್ಬಳಕೆ ಮಾಡಿ ಸಮನ್ವಯದಿಂದ ಕಾರ್ಯನಿರ್ವಹಿಸಿ ದೂರುಗಳಿಗೆ ಶಿಘ್ರ ಪರಿಹಾರ ಕಂಡುಕೊಂಡು ದೇಶದ ಉನ್ನತಿಗೆ ಶ್ರಮಿಸೋಣ ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಕರ್ನಾಟಕ ಲೋಕಾಯುಕ್ತ  ಸಂಪನ್ಮೂಲ ಅಧಿಕಾರಿ ಪ್ರಕಾಶ ಎಲ್ ನಾಡಗೇರ,   ಕರ್ನಾಟಕ ಲೋಕಾಯುಕ್ತ ಉಪನಿಬಂಧಕರಾದ ಅಮರನಾರಾಯಣ ಕೆ,  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್‌. ಶಿವನಗೌಡರ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ ಪಿ.ಎಂ.ಪಾಟೀಲ, ಕರ್ನಾಟಕ ಲೋಕಾಯುಕ್ತ  ಗದಗ ಕಚೇರಿಯ ಪೊಲೀಸ ಅಧೀಕ್ಷಕರಾದ ಸತೀಶ ಚಿಟಗುಬ್ಬಿ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಜಿ. ಎಸ್‌. ಪಲ್ಲೇದ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತ  ತಾಲ್ಲುಕುಗಳ ನ್ಯಾಯಾಧೀಶರು ಹಾಜರಿದ್ದರು. ಕಾರ್ಯಕ್ರಮವನ್ನು ಬಸವರಾಜ ಕುಕನೂರು ನಿರ್ವಹಿಸಿದರು.