ಪ್ರವಾಹ, ಸಾಂಕ್ರಾಮಿಕ ರೋಗಗಳ ಮುಂಜಾಗ್ರತೆ ಕ್ರಮ ವಹಿಸಿ: ಸುಭಾಸ ಸಂಪಗಾಂವಿ

Take precautionary measures against floods and infectious diseases: Subhas Sampagaonvi

ರಾಯಬಾಗ 27: ಈ ವರ್ಷ ಮುಂಗಾರು ಮಳೆ ಬೇಗನೆ ಪ್ರಾರಂಭವಾಗಿದ್ದು, ತಾಲೂಕಿನ ಎಲ್ಲ ಅಭಿವೃದ್ಧಿ ಅಧಿಕಾರಿಗಳು ಮುಂಜಾಗೃತ ಕ್ರಮವಾಗಿ ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು. ರಾಜ್ಯ ಮತ್ತು ನೆರೆ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿ ನೀರಿನ ಮಟ್ಟದ ಹೆಚ್ಚುತ್ತಿದ್ದು, ನದಿ ತೀರದ ಜನರಿಗೆ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿ, ಸುರಕ್ಷಿತರ ಪ್ರದೇಶಗಳಿಗೆ ತೆರಳಲು ಸಲಹೆ ಸೂಚನೆ ನೀಡಬೇಕೆಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಸ ಸಂಪಗಾಂವಿ ಅವರು ಸೂಚನೆ ನೀಡಿದರು. 

ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಎಸಿ ಸುಭಾಷ ಸಂಪಗಾಂವಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ತಾಲೂಕಾ ಮಟ್ಟದ ಟಾಸ್ಕ್‌ ಪೋರ್ಸ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಎಸ್‌.ಪಾಟೀಲ ಮಾತನಾಡಿ, ಮಳೆಗಾಲದಲ್ಲಿ ನಿಂತ ನೀರಿನಿಂದ ಹರಡುವ ಡೆಂಗಿ, ಚಿಕುನ್ ಗುನ್ಯಾ, ಮಲೇರಿಯಾ ರೋಗಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ನಮ್ಮ ಸುತ್ತಮುತ್ತ ಪರಿಸರ, ಮನೆಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ನೀರಿನ ಮೇಲೆ ಭದ್ರವಾಗಿ ಮುಚ್ಚಳವನ್ನು ಹಾಕಬೇಕೆಂದು ಸಲಹೆ ನೀಡಿದರು. ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಉಪಚಾರ ಪಡೆದುಕೊಳ್ಳಬೇಕು. ಕಾಸಿ ಆರಿಸಿದ ಬಿಸಿ ನೀರನ್ನು ಕುಡಿಯಬೇಕು. ಕೋವಿಡ್‌-19 ಬಗ್ಗೆ ಮುಂಜಾಗ್ರತೆಯನ್ನು ವಹಿಸಬೇಕೆಂದರು.   

ತಹಶೀಲ್ದಾರ ಸುರೇಶ ಮುಂಜೆ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಕದ್ದು, ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್‌.ಎಮ್‌.ಪಾಟೀಲ ಹಾಗೂ ತಾಲೂಕಾ ಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳು, ಪುರಸಭೆ, ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.  

ಪತ್ರಕರ್ತರನ್ನು ಹೊರಗಿಟ್ಟು ಟಾಸ್ಕಪೋರ್ಸ ಸಭೆ ನಡೆಸಿದ ಚಿಕ್ಕೋಡಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರವರ ನಡೆಯನ್ನು ಸ್ಥಳೀಯ ಪತ್ರಕರ್ತರು ಖಂಡಿಸಿದ್ದಾರೆ.