ವಕ್ರತುಂಡು ಯುವಕ ಮಂಡಳಿಯಿಂದ ಗಣಪತಿಗೆ ವಿಶೇಷ ಪೂಜೆ

ವಕ್ರತುಂಡು ಯುವಕ ಮಂಡಳಿಯಿಂದ ಗಣಪತಿಗೆ ವಿಶೇಷ ಪೂಜೆ  Special puja for Lord Ganesha by the Vakratunda Yuvaka Mandala


ಲಕ್ಷ್ಮೇಶ್ವರ, ಸೆ.19: ಪಟ್ಟಣದ ಬಸತಿ ಬಡಾವಣೆಯ ನೀಲಗಾರಪೇಟೆ ಓಣಿ ಕಾಮನಕಟ್ಟೆಯಲ್ಲಿ ವಕ್ರತುಂಡು ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಗೆ ಶನಿವಾರ ವಿಶೇಷ ಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮ ನಡೆಯಿತು.  

ಓಣಿಯ ಗುರುಹಿರಿಯರ ಸಲಹೆ, ಸಹಕಾರದೊಂದಿಗೆ ಸುಂದರ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಯುವಕರು ಶ್ರದ್ಧಾ-ಭಕ್ತಿಯಿಂದ ಗಣೇಶೋತ್ಸವ ಆಚರಿಸುತ್ತಿರುವುದು ವಿಶೇಷವಾಗಿತ್ತು.  

ಯುವಕರು ಯಾವುದೇ ಗದ್ದಲ ಮಾಡದೆ ಶಾಂತಿ, ಸಹನೆಯಿಂದ ಒಗ್ಗಟ್ಟಾಗಿ ಗಣೇಶೋತ್ಸವ ಆಚರಿಸುತ್ತಿರುವುದಕ್ಕೆ ಓಣಿಯ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದರು. ಗಣಪತಿ ಹಬ್ಬವು ಯುವಕರಲ್ಲಿ ಏಕತೆ ಹಾಗೂ ಸಹಬಾಳ್ವೆಯ ಸಂದೇಶ ಮೂಡಿಸುತ್ತಿದೆ ಎಂದು ಪ್ರಶಂಸಿಸಿದರು.  

ವಕ್ರತುಂಡು ಯುವಕ ಮಂಡಳಿಯವರು ದಳಪತಿ ಪ್ರತಿಷ್ಠಾಪನೆ ಮಾಡಿ, ಎಲ್ಲರೂ ಒಗ್ಗೂಡಿ ಮಹಾಪ್ರಸಾದ ಸ್ವೀಕರಿಸುವ ಮೂಲಕ ಕಾರ್ಯಕ್ರಮ ನೆರವೇರಿಸಿದರು. ಭಾನುವಾರ ಗಣಪತಿ ವಿಸರ್ಜನೆ ನಡೆಯಲಿದೆ ಎಂದು ಮಂಡಳಿಯವರು ತಿಳಿಸಿದ್ದಾರೆ.  

ಕಾರ್ಯಕ್ರಮದಲ್ಲಿ ಚರಂತಯ್ಯ ಹೊಸಮಠ, ಕೋಟ್ರೇಶ ಅಳವಂಡಿ, ದೇವಪ್ಪ ಉಳಟ್ಟಿ, ದೇವಪ್ಪ ಹುಬ್ಬಳ್ಳಿ, ಶಂಕ್ರಣ್ಣ ಓದು, ಲಕ್ಷ್ಮಣ ನಾವಿ, ವೀರಣ್ಣ ಹಡಪದ, ಮುತ್ತಪ್ಪ ಗುಡಗುಂಟಿ, ಯಲ್ಲಪ್ಪ ಹಡಪದ, ಸತೀಶ್ ಉಳಟ್ಟಿ ಸೇರಿದಂತೆ ಓಣಿಯ ಗುರುಹಿರಿಯರು, ಮಹಿಳೆಯರು, ಮಕ್ಕಳು ಹಾಗೂ ಯುವಕರು ಪಾಲ್ಗೊಂಡಿದ್ದರು.