ಕ್ಷೇತ್ರದಲ್ಲಿ 150 ದೇವಸ್ಥಾನಗಳ ಜೀರ್ಣೋದ್ಧಾರ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಕ್ಷೇತ್ರದಲ್ಲಿ 150 ದೇವಸ್ಥಾನಗಳ ಜೀರ್ಣೋದ್ಧಾರ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್  Sai Mandir inaugurated at Sai Nagar in Muthaga village

ಮುತಗಾ ಗ್ರಾಮದ ಸಾಯಿ ನಗರದಲ್ಲಿ ಸಾಯಿ ಮಂದಿ ಉದ್ಘಾಟನೆ  

ಬೆಳಗಾವಿ 05: ನಾನು ಕ್ಷೇತ್ರದಲ್ಲಿ ಆರಿಸಿ ಬಂದ ಬಳಿಕ ಸಕಲ ದೇವಾನು ದೇವತೆಗಳ ಆಶೀರ್ವಾದಿಂದಾಗಿ ಈವರೆಗೆ 150 ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ್ದೇನೆ ಎಂದು ಮಹಿಳಾ  ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.  

ಮುತಗಾ ಗ್ರಾಮದ ಸಾಯಿ ನಗರ, ಪೊಲೀಸ್ ಕಾಲೋನಿಯಲ್ಲಿ ನಿರ್ಮಾಣಗೊಂಡಿರುವ ನೂತನ ಶ್ರೀ ಸಾಯಿ ಮಂದಿರ ಕಟ್ಟಡದ ಉದ್ಘಾಟನೆ, ವಾಸ್ತುಶಾಂತಿ ಹಾಗೂ ಮೂರ್ತಿಯ ಪ್ರಾಣಷ್ಠಾಪನೆ, ಕಳಸಾರೋಹಣ ನೆರವೇರಿಸಿ ಮಾತನಾಡಿದ ಸಚಿವರು, ಸಾಯಿಬಾಬಾ ಅವರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸೋಣ ಎಂದರು.  

ಅಧಿಕಾರ ಇದ್ದಾಗ ಸಮಾಜಮುಖಿ ಕಾರ್ಯ ಮಾಡಬೇಕು. ಚುನಾವಣೆ ಬಂದಾಗಷ್ಟೆ ಬಂದು ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. 2 ಬಾರಿ ಸೋತರೂ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಮನೆ ಮಗಳೆಂದು ಆರಿಸಿ ಕಳಿಸಿದ್ದೀರಿ. ನಿಮ್ಮೆಲ್ಲರ ಸೇವೆ ಮಾಡುವುದೇ ನನ್ನ ಭಾಗ್ಯ, ಗ್ರಾಮೀಣ ಕ್ಷೇತ್ರವನ್ನು ರಾಜ್ಯದ ಯಾವ ಭಾಗಕ್ಕೆ ಪ್ರವಾಸ ಹೋದರೂ ಮರೆಯುವುದಿಲ್ಲ. ಪ್ರತಿಯೊಂದು ಭಾಷಣದಲ್ಲೂ ಕ್ಷೇತ್ರವನ್ನು ಉಲ್ಲೇಕಿಸುತ್ತೇನೆ ಎಂದು ಸಚಿವರು ಹೇಳಿದರು.  

ನಾನು ಆದ್ಯಾತ್ಮಿಕ ಜೀವಿ, ದೇವರು, ಮಠಗಳೆಂದರೆ ಭಕ್ತಿ, ಆದ್ಯಾತ್ಮಿಕ ಸ್ಥಳಗಳು ಇರುವುದರಿಂದಲೇ ದೇಶದಲ್ಲಿ ಶಾಂತಿ ನೆಲೆಸಿದೆ. ಅಧಿಕಾರ ಸಿಕ್ಕಿದಾಗ ಶಾಶ್ವತವಾದ ಕೆಲಸ ಮಾಡಬೇಕು. ಜಾತ್ಯತೀತ ತತ್ವದ ಮೇಲೆ ಕೆಲಸ ಮಾಡಬೇಕು. ಜಾತಿ ನೋಡದೆ ಕೆಲಸ ಮಾಡಬೇಕು. ಯಾರೂ ಬೆರಳು ಮಾಡಿ ತೋರಿಸದಂತೆ ಕೆಲಸ ಮಾಡುತ್ತಿದ್ದೇನೆ. ಆದರೆ ಕೆಲವರು ಚುನಾವಣೆಗೆ ನಾಲ್ಕು ತಿಂಗಳಿರುವಾಗ ಪೋಸ್ಟರ್ ಹಿಡಿದು ಬರುತ್ತಾರೆ. ಏನೂ ಕೆಲಸ ಮಾಡುವುದಿಲ್ಲ, ಜಾತಿ, ಧರ್ಮ ಎಂದು ಮತ ಕೇಳುತ್ತಾರೆ. ಅಂತವರ ಮಾತಿಗೆ ಮರುಳಾಗಬೇಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.  

ಅಭಿವೃದ್ಧಿ ಪರ್ವ ನಿರಂತರ, ಇದು ನಿಲ್ಲಬಾರದು. ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಗ್ರಾಮಗಳಲ್ಲಿ ಜಾತ್ರೆ ನಡೆದರೆ 5-6 ಕೋಟಿ ರೂ. ಕೊಟ್ಟು ಕೆಲಸ ಮಾಡಿಸುತ್ತಿದ್ದೇನೆ. ಪಕ್ಷಾತೀತ ನಾಯಕಿಯಾಗಿ ರಾಜ್ದ ಸೇವೆ ಮಾಡುತ್ತಿದ್ದೇನೆ, ನನಗೆ ಮುಂದೆಯೂ ಆಶೀರ್ವಾದ ಮಾಡಿ, ನಿಮ್ಮ ಆಶಿರ್ವಾದವೇ ಕೆಲಸ ಮಾಡಲು ನನಗೆ ಸ್ಫೂರ್ತಿ ಎಂದರು.  

ಕಾರ್ಯಕ್ರಮದಲ್ಲಿ ಈರಣ್ಣ ತಳವಾರ, ರಮೇಶ್ ಕಮತಗೌಡರ್, ಬಸವರಾಜ ಜೀರಗೆ, ಜಯಸಿಂಗ್ ರಜಪೂತ, ಎಂ.ಪಿ.ಘಟವಾಳಿಮಠ್, ಎ.ಡಿ.ಮಗದುಮ್, ನಾಗೇಶ್ ದೇಸಾಯಿ, ರಮೇಶ್ ಪವಾರ್, ಪ್ರದೀಪ್ ಕೊಚೇರಿ ಮುಂತಾದವರು ಉಪಸ್ಥಿತರಿದ್ದರು.