ಜಡಿಮಠ ದೇವಸ್ಥಾನ ಅಭಿವೃದ್ಧಿಗೆ 1ಲಕ್ಷ ರೂ ಸಹಾಯಧನ

Rs 1 lakh subsidy for the development of Jadi Matha Temple

ದೇವರಹಿಪ್ಪರಗಿ 29: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ದೇವಸ್ಥಾನ, ವ್ಯಕ್ತಿ, ಕುಟುಂಬ ಮತ್ತು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಂದಗಿ ತಾಲೂಕ ಯೋಜನಾಧಿಕಾರಿ ಬಿನೋಯಿ ತಿಳಿಸಿದರು.  

ಪಟ್ಟಣದಲ್ಲಿ ಗುರುವಾರದಂದು ಜಡಿಮಠದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 1ಲಕ್ಷ ರೂ ಸಹಾಯಧನ ಚೆಕ್ ನನ್ನು ದೇವಸ್ಥಾನದ ಸಮಿತಿಗೆ ವಿತರಿಸಿ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸಂಸ್ಥೆಯಿಂದ ಸಾವಿರಾರು ಸ್ವ-ಸಹಾಯ ಸಂಘಗಳ ರಚನೆ, ಉಳಿತಾಯದ ಮನೋಭಾವನೆ, ಸಂಘಗಳಿಗೆ ಬ್ಯಾಂಕ್‌ನಿಂದ ಆರ್ಥಿಕ ಸಾಲ ಸೌಲಭ್ಯ, ಕೃಷಿಗೆ ಪೂರಕವಾದ ಮಾಹಿತಿ, ಅಧ್ಯಯನ ಪ್ರವಾಸ, ವಿಚಾರಗೋಷ್ಠಿ, ಅನುದಾನ, ಶೌಚಾಲಯ ರಚನೆ, ಸೋಲಾರ್ ಹಾಗೂ ಗೋಬರ್ ಗ್ಯಾಸ್, ಶುದ್ಧ ಗಂಗಾ ಕುಡಿಯುವ ನೀರಿನ ಘಟಕಗಳಿಗೆ ಪ್ರೋತ್ಸಾಹ ಧನ, ಅಸಹಾಯಕರಿಗೆ ಮಾಸಾಶನ, ದೇವಾಲಯಗಳ ಅಭಿವದ್ದಿಗೆ ಸಹಾಯ ಧನ, ಎಂಪಿಸಿಎಸ್ ಸಂಘಗಳಿಗೆ ಸಹಾಯಧನ, ಸರಕಾರಿ ಶಾಲೆಗಳ ಮೂಲ ಸೌಲಭ್ಯಗಳಿಗೆ ಸಹಾಯಧನ, ಸರಕಾರಿ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ಒದಗಿಸಲಾಗುವುದು ಎಂದರು.  

ಜಡಿಮಠದ ಜಡಿ ಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ, ನೂತನ ಜಡಿಮಠದ ಜೀರ್ಣೋದ್ದಾರಕ್ಕೆ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಧನಸಹಾಯ ನೀಡಿದ್ದಾರೆ. ಮಠದ ಉಳಿವು ಮತ್ತು ಜೀರ್ಣೋದ್ಧಾರದಿಂದ ಧಾರ್ಮಿಕ ಶ್ರದ್ಧೆಗೆ ಸಹಕಾರಿಯಾಗಿದೆ ಎಂದರು.  

ಮುಖಂಡರುಗಳಾದ ಡಾ.ಆರ್‌.ಆರ್‌.ನಾಯಿಕ, ನೀಲಮ್ಮ ಬಿರಾದಾರ ಹಾಗೂ ಪಂಚಾಕ್ಷರಿ ಮಿಂಚಿನಾಳ ಅವರು ಮಾತನಾಡಿ ಧರ್ಮಸ್ಥಳದ ಗ್ರಾಮ ಅಭಿವೃದ್ಧಿ ಸಂಸ್ಥೆಯಿಂದ ರಾಜ್ಯದಲ್ಲಿ ಸಾಕಷ್ಟು ಕಾರ್ಯಕ್ರಮಗಳು ಜನಪರ ಕೆಲಸಗಳು ಆಗುತ್ತಿವೆ ಅದೇ ರೀತಿ ಪಟ್ಟಣದ ಶ್ರೀ ಮಠಕ್ಕೆ ಸಹಾಯಧನ ನೀಡಿದ್ದು ಶ್ರೀಮಠದಲ್ಲಿ ಧಾರ್ಮಿಕ ಕೆಲಸಗಳನ್ನು ಹೆಚ್ಚು ಹೆಚ್ಚು ಮಾಡಲು ಇನ್ನು ಹೆಚ್ಚಿನ ಸಹಾಯಧನ ಮಾಡಿದರೆ ಸಹಕಾರಿಯಾಗುತ್ತದೆ ಎಂದು ಹೇಳಿದರು.   

ಪ್ರಾಸ್ತಾವಿಕವಾಗಿ ದೇವರಹಿಪ್ಪರಗಿ ವಲಯದ ಮೇಲ್ವಿಚಾರಕರಾದ ವಿಶ್ವನಾಥ ಸದಲಗ ಮಾತನಾಡಿ ಸಂಸ್ಥೆಯಿಂದ ಈ ಭಾಗದಲ್ಲಿ ಕೈಗೊಂಡ ಕೆಲಸಗಳ ಬಗ್ಗೆ ವಿವರಿಸಿದರು.  

ಪ.ಪಂ ಅಧ್ಯಕ್ಷರ ಪ್ರತಿನಿಧಿ ಬಸವರಾಜ ದೇವಣಗಾಂವ, ಸದಸ್ಯರಾದ ಶಾಂತಯ್ಯ ಜಡಿಮಠ, ಸೋಮು ದೇವೂರ, ಮುಖಂಡರುಗಳಾದ ಸೋಮಶೇಖರ ಹಿರೇಮಠ, ವೀರೇಶ ಕುದರಿ, ಉಮಾಕಾಂತ ಸೊನ್ನದ, ಮಲ್ಲಿಕಾರ್ಜುನ ಜಡಿಮಠ, ಸೇವಾ ಪ್ರತಿನಿಧಿಗಳಾದ ರೇಣುಕಾ ಬಿರಾದಾರ, ಕಮಲಾಬಾಯಿ ಬಾಗೇವಾಡಿ ಸೇರಿದಂತೆ ಪಟ್ಟಣದ ಪ್ರಮುಖರು, ಮುಖಂಡರು ಹಾಗೂ ಇತರರು ಹಾಜರಿದ್ದರು.