ಕಂದಾಯ ಸಚಿವ ಕೃಷ್ಣ ಬೈರೇಗೌಡರ ಹೇಳಿಕೆ ಖಂಡಿಸಿ ರಸ್ತೆ ತಡೆ ನಡೆಸಿ ಮುಷ್ಕರ
ಮಹಾಲಿಂಗಪುರ 20: ಮಹಾಲಿಂಗಪುರ ನೂತನ ತಾಲೂಕು ರಚನೆಯ ಮನವಿಯನ್ನು ವಿಲೇವಾರಿ ಮಾಡಲಾಗಿದೆ ಎಂಬ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಮುಂಗಾರು ಅಧಿವೇಶನದ ಹೇಳಿಕೆಯನ್ನು ಖಂಡಿಸಿ ಬುಧವಾರ ಚೆನ್ನಮ್ಮ ವೃತ್ತದಲ್ಲಿ ದಿಢೀರ್ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಮತ್ತು ಸಚಿವರಿಗೆ ಧಿಕ್ಕಾರ ಕೂಗಿ ಹೋರಾಟಗಾರರು ಮುಷ್ಕರ ನಡೆಸಿದರು.
ವೃತ್ತದಲ್ಲಿ ಸೇರಿದ ಅವರು ಮಾನವ ಸರಪಳಿ ನಿರ್ಮಿಸಿ, ಕೆಲ ಕಾಲ ವಾಹನಗಳನ್ನು ತಡೆದು ಸರ್ಕಾರದ ವಿರುದ್ಧ ಪ್ರತಿಭಟಿಸಿದರು.ಸೋಮವಾರ ಮುಂಗಾರು ಅಧಿವೇಶನದ ವೇಳೆ ಸದನದಲ್ಲಿ ತೇರದಾಳ ಶಾಸಕ ಸಿದ್ದು ಸವದಿಯವರು, ಮಹಾಲಿಂಗಪುರ ತಾಲೂಕು ಹೋರಾಟ (1227ನೇಯ ದಿನ) ನಾಲ್ಕನೇ ವರ್ಷದಲ್ಲಿ ಮುಂದುವರಿದಿದೆ.
ಭೌಗೋಳಿಕ ಹಿನ್ನೆಲೆ ಹೊಂದಿದ್ದು, ತಾಲೂಕಾಗಲು ಯೋಗ್ಯವಿದೆ ಸರ್ಕಾರ ನೂತನ ತಾಲೂಕು ರಚನೆಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಭಾಪತಿಯವರಿಗೆ ಮನವಿ ಮಾಡುವ ಸಂದರ್ಭದಲ್ಲಿ, ಮಧ್ಯ ಪ್ರವೇಶಿಸಿದ ಕಂದಾಯ ಸಚಿವರು, ಆ ಮನವಿಯನ್ನು ವಿಲೇವಾರಿ ಮಾಡಲಾಗಿದೆ ಎಂದರು.ಈ ಹಾರಿಕೆ ಉತ್ತರಕ್ಕೆ ಸ್ಥಳೀಯ ಹೋರಾಟಗಾರರು ಸಭೆ ಸೇರಿ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಕೈಗೊಂಡು, ಮುಷ್ಕರ ನಡೆಸಲು ನಿರ್ಧರಿಸಿದರು.
ಈ ಸಂದರ್ಭದಲ್ಲಿ ರೈತ ನಾಯಕ ಮತ್ತು ತಾಲೂಕು ಹೋರಾಟ ಸಮಿತಿ ಪ್ರಮುಖ ಗಂಗಾಧರ ಮೇಟಿ ಮಾತನಾಡಿ, ಹೋರಾಟ ಸಮಿತಿ ಮೂರು ವರ್ಷಗಳನ್ನು ಮೀರಿ ನಾಲ್ಕನೇ ವರ್ಷದಲ್ಲಿ ತಾಲೂಕಿಗೆ ಹೋರಾಟ ನಡೆಸಿದೆ.ಈ ಮಧ್ಯೆ ಎಲ್ಲ ಪಕ್ಷಗಳ ನೇತಾರರು, ಕಾರ್ಯಕರ್ತರು ವೇದಿಕೆಗೆ ಬಂದು ಸಮಸ್ಯೆ ಆಲಿಸಿ, ಮಹಾಲಿಂಗಪುರ ನೂತನ ತಾಲೂಕಾಗಲು ಸಂಪೂರ್ಣ ಅರ್ಹತೆ ಇದೆ. ನಾವೂ ಸಹಿತ ನಿಮ್ಮ ಹೋರಾಟಕ್ಕೆ ಕೈ ಜೋಡಿಸುತ್ತೇವೆ ಎಂದು ಭರವಸೆ ನೀಡಿ ಹೋಗಿದ್ದಾರೆ.
ಭಾಜಪ ಸರ್ಕಾರವಿದ್ದಾಗ ವಿರೋಧ ಪಕ್ಷದಲ್ಲಿದ್ದ ಸಿಎಂ ಸಿದ್ದರಾಮಯ್ಯರಿಗೂ ನಿಯೋಗ ಭೇಟಿಯಾದಾಗ, ನಮ್ಮ ಸರ್ಕಾರ ಬಂದಾಗ ಮಹಾಲಿಂಗಪುರವನ್ನು ತಾಲೂಕು ಘೋಷಣೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದರು. ಇವತ್ತು ಕಾಂಗ್ರೆಸ್ ಸರ್ಕಾರದ ಕಂದಾಯ ಸಚಿವ ಕೃಷ್ಣ ಭೈರೇಗೌಡರೆ 'ಮನವಿ ವಿಲೇವಾರಿ' ಹೇಳಿಕೆ ನೀಡಿದ್ದು, ಈ ವಿಪರ್ಯಾಸದ ಹೇಳಿಕೆಗೆ ಸ್ಥಳೀಯ ಹೋರಾಟಗಾರರು ಕೆರಳಿ ಸಚಿವರ ನಡೆಯನ್ನು ಖಂಡಿಸಿದ್ದಾರೆ.
ತಾಲೂಕಾಢಳಿತ ಮತ್ತು ಉಪ ವಿಭಾಗಾಧಿಕಾರಿಗಳು ತಯಾರಿಸಿದ ಮಹಾಲಿಂಗಪುರ ನೂತನ ತಾಲೂಕು ರಚನೆಗಿರುವ ಭೌಗೋಳಿಕ ಹಿನ್ನೆಲೆ ದಾಖಲಾತಿಗಳು ಜಿಲ್ಲಾಧಿಕಾರಿಗಳಿಗೆ ಮತ್ತು ಅಲ್ಲಿಂದ ರಾಜ್ಯ ಕಂದಾಯ ಇಲಾಖೆಗೂ ರವಾನೆಯಾಗಿದೆ. ಸಚಿವರು ಕಂದಾಯ ಇಲಾಖೆಯಲ್ಲಿರುವ ಮಾಹಿತಿ ಆಧರಿಸಿ ಸದನದಲ್ಲಿ ಹೇಳಿಕೆ ನೀಡಬೇಕಾಗಿತ್ತೆ ಹೊರತು ಹಾರಿಕೆ ಉತ್ತರವಲ್ಲ ಇದು ದುರದೃಷ್ಟಕರ, ಸಚಿವರ ಹೇಳಿಕೆಗೆ ಮಹತ್ವ ನೀಡದೆ ಹೋರಾಟ ಮುಂದುವರಿಯಲಿದೆ ಎಂದರು. ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾನಿಯವರು ತಾಲೂಕು ಹೋರಾಟ ಸಮಿತಿಯ ಖಂಡನಾ ನಿರ್ಣಯದ ಪ್ರತಿಯನ್ನು ಸ್ವೀಕರಿಸಿದ ನಂತರ ಹೋರಾಟಗಾರರು ಮುಷ್ಕರ ಹಿಂಪಡೆದರು.
ಪೋಲೀಸ್ ಮತ್ತು ಹೋರಾಟಗಾರರಲ್ಲಿ ಕೆಲ ಕಾಲ ವಾಗ್ವಾದ ನಡೆದಾಗ, ಸಿಪಿಆಯ್ ಸಂಜೀವ ಬಳಿಗಾರ್ ಮಧ್ಯೆ ಪ್ರವೇಶಿಸಿ ಹೋರಾಟಗಾರರನ್ನು ಸಮಾಧಾನಪಡಿಸಿದರು. ಅಧ್ಯಕ್ಷ ಸಂಗಪ್ಪ ಹಲ್ಲಿ, ವಿರೇಶ ಆಸಂಗಿ, ಸಿದ್ದುಗೌಡ ಪಾಟೀಲ್, ಶಿದ್ದು ಶಿರೋಳ, ಪಂಡಿತ ಪೂಜಾರ, ಜಯರಾಂ ಶೆಟ್ಟಿ, ಬಂದು ಪಕಾಲಿ, ರಫೀಕ್ ಮಾಲದಾರ, ಹಣಮಂತ ಜಮಾದಾರ, ಶಿವನಗೌಡ ಪಾಟೀಲ, ಈಶ್ವರ್ಪ ಮುರಗೋಡ, ವೀರಭದ್ರ್ಪ ಮುಗಳ್ಯಾಳ,ತಿಪ್ಪು ಬಂಡಿವಡ್ಡರ, ಡಾ! ಡಿ.ಬಿ.ನಾಗನೂರ, ಮಾರುತಿ ಕರೋಶ, ರಾಜೇಂದ್ರ ಮಿರ್ಜಿ, ಮುನಾಫ್ ಖಾಜಿ, ಕರೆಪ್ಪ ಮೇಟಿ, ವಿಶೇಷ ಚೇತನ ಸಂಘದ ಬಸವರಾಜ ಹೋಳಿಗಿ,ಪರಸಪ್ಪ ಕೊಣ್ಣೂರ, ರಾಜು ತೇರದಾಳ, ದುಂಡಪ್ಪ ಚನ್ನಾಳ,ಮತ್ತು ಮುತ್ತು ಕೊಣ್ಣೂರ, ಸೇರಿದಂತೆ ಹಲವರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 