ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪನೆ: ಪ್ರಧಾನಿ ನರೇಂದ್ರ ಮೋದಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಯುವಕರು ಪ್ರಜಾಪ್ರಭುತ್ವದಲ್ಲಿ ಮತ್ತೆ ವಿಶ್ವಾಸವಿಟ್ಟಿದ್ದಾರೆ ಮತ್ತು ತಮ್ಮ ಮತವು ಬದಲಾವಣೆ ತರಬಹುದು ಎಂದು ಭಾವಿಸುತ್ತಿದ್ದಾರೆ. ಇದು ಅವರ ಸಬಲೀಕರಣದ ಮೊದಲ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಶ್ರೀನಗರದ ಶೇರ್-ಎ-ಕಾಶ್ಮೀರ ಸ್ಟೇಡಿಯಂನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವ ಭರವಸೆಯನ್ನು ಬಿಜೆಪಿ ಈಡೇರಿಸುತ್ತದೆ ಎಂದು ಹೇಳಿದರು.

"ಜಮ್ಮು ಮತ್ತು ಕಾಶ್ಮೀರದ ಯುವಕರು ಇನ್ನು ಅಸಹಾಯಕರಲ್ಲ. ಅವರು ಮೋದಿ ಸರ್ಕಾರದ ಅಡಿಯಲ್ಲಿ ಅಧಿಕಾರ ಪಡೆಯುತ್ತಿದ್ದಾರೆ. ಬಿಜೆಪಿಯು ಯುವಕರ ಉದ್ಯೋಗಕ್ಕಾಗಿ ಬೃಹತ್ ಘೋಷಣೆಗಳನ್ನು ಮಾಡಿರುವುದರಿಂದ ನನಗೆ ಸಂತೋಷವಾಗಿದೆ. ಅವರ ಕೌಶಲ್ಯ ಅಭಿವೃದ್ಧಿಯಾಗಲಿ ಎಂದರು.

ಇದೇ ವೇಳೆ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಈ ಮೂರು ಪಕ್ಷಗಳು ತಮ್ಮ ಕುಟುಂಬಗಳ ಲಾಭಕ್ಕಾಗಿ ಪ್ರಜಾಪ್ರಭುತ್ವ ಮತ್ತು ಕಾಶ್ಮೀರವನ್ನು ತುಳಿದು ಹಾಕಿವೆ ಎಂದು ಆರೋಪಿಸಿದರು.

"1980ರ ದಶಕದಲ್ಲಿ ಅವರು ಮಾಡಿದ್ದೇನು ಎಂಬುದು ನಿಮಗೆ ನೆನಪಿದೆಯೇ? ಅವರು ಜಮ್ಮು ಮತ್ತು ಕಾಶ್ಮೀರದ ರಾಜಕೀಯವನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಂಡರು. ಅವರು ತಮ್ಮ ಕುಟುಂಬವನ್ನು ಹೊರತುಪಡಿಸಿ ಯಾರೂ ಮುಂದೆ ಬರಲು ಬಯಸಲಿಲ್ಲ? ಇಲ್ಲದಿದ್ದರೆ, ಅವರು ಪಂಚಾಯತ್, ಡಿಡಿಸಿ ಮತ್ತು ಬಿಡಿಸಿ ಚುನಾವಣೆಗಳನ್ನು ಏಕೆ ನಿಲ್ಲಿಸಿದರು? ಎಂದು ಪ್ರಧಾನಿ ಪ್ರಶ್ನಿಸಿದರು.

ತಮ್ಮ ಸ್ವಾರ್ಥದ ಫಲವಾಗಿ ಈ ಮೂರು ಕುಟುಂಬಗಳು ಮಾತ್ರ ಅಧಿಕಾರಕ್ಕೆ ಬರುತ್ತವೆ ಎಂದು ಭಾವಿಸಿದ ಯುವಕರು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಆದರೆ ಕಳೆದ ಐದು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯು ಸಾಕಷ್ಟು ಬದಲಾಗಿದೆ. ಯುವಕರು ಮತ್ತೆ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ವಿಶ್ವಾಸವಿಟ್ಟಿದ್ದಾರೆ ಎಂದು ಹೇಳಿದರು.