ಸಾಮಾಜಿಕ ಸಮಾನತೆಗೆ ಮೀಸಲಾತಿ ಅಗತ್ಯ: ಡಾ. ಡಿ. ಜೀವನ್ ಕುಮಾರ್

ಸಾಮಾಜಿಕ ಸಮಾನತೆಗೆ ಮೀಸಲಾತಿ ಅಗತ್ಯ: ಡಾ. ಡಿ. ಜೀವನ್ ಕುಮಾರ್  Reservation is necessary for social equality: Dr. D. Jeevan Kumar

ಲೋಕದರ್ಶನ ವರದಿ 

ಬೆಳಗಾವಿ 20: ಪ್ರಜಾಸತ್ತಾತ್ಮಕ ನ್ಯಾಯ, ಸಾಮಾಜಿಕ ಪುನರ್‌ರಚನೆ ಹಾಗೂ ನೈತಿಕ ಪುನರುಜ್ಜೀವನಕ್ಕೆ ಡಾ. ಬಿ.ಆರ್‌. ಅಂಬೇಡ್ಕರ್ ಅವರ ರಾಜಕೀಯ ಚಿಂತನೆ ದೃಢವಾದ ಅಡಿಪಾಯವಾಗಿದೆಯೆಂದು ಮಹಾತ್ಮ ಗಾಂಧಿ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ವಿಶ್ವವಿದ್ಯಾಲಯ, ಗದಗದ ಗೌರವ ಪ್ರಾಧ್ಯಾಪಕರಾದ ಡಾ. ಡಿ. ಜೀವನ್ ಕುಮಾರ್ ಹೇಳಿದರು.  

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ. ಬಿ.ಆರ್‌. ಅಂಬೇಡ್ಕರ್ ಅಧ್ಯಯನ ಪೀಠ, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಡಾ. ಬಿ.ಆರ್‌. ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಬೆಂಗಳೂರು  ಇವರ ಸಹಯೋಗದಲ್ಲಿ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ “ಡಾ. ಬಿ.ಆರ್‌. ಅಂಬೇಡ್ಕರ್ ಅವರ ರಾಜಕೀಯ ಚಿಂತನೆ ಮತ್ತು ಅದರ ಸಮಕಾಲೀನ ಪ್ರಸ್ತುತತೆ” ವಿಷಯದ ಒಂದು ದಿನದ ವಿಚಾರಸಂಕಿರಣದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.  

ಡಾ. ಅಂಬೇಡ್ಕರ್ ಅವರು ಅಂತರಶಾಸ್ತ್ರೀಯ ಪಂಡಿತರೂ ವಿಶಿಷ್ಟ ನಾಯಕರು ಆಗಿದ್ದು, ಮೀಸಲಾತಿ ಪ್ರಜಾಸತ್ತಾತ್ಮಕ ನ್ಯಾಯ, ತಿದ್ದುಪಡಿ ನ್ಯಾಯ ಹಾಗೂ ಸಾಮಾಜಿಕ ಪ್ರತಿನಿಧಿತ್ವದ ಸಾಧನವಾಗಿದ್ದು, ಸಮಾಜದಲ್ಲಿ ಸಮಾನತೆ ಸಾಧಿಸಲು ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಸಂತೋಷ ಕಾಮಗೌಡ ಕೆ.ಎ.ಎಸ್‌. ಅವರು, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಂವಿಧಾನಾತ್ಮಕ ನೈತಿಕತೆ ಕುರಿತ ಆದರ್ಶಗಳು ಸಮಾವೇಶಾತ್ಮಕ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಅತ್ಯಂತ ಪ್ರಸ್ತುತವಾಗಿವೆ ಎಂದು ಹೇಳಿದರು.  

ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ. ಪ್ರಕಾಶ್ ಕಟ್ಟಿಮಣಿ ಸ್ವಾಗತಿಸಿದರು. ಡಾ. ಬಿ.ಆರ್‌. ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಅಶೋಕ್ ಎ. ಡಿ’ಸೂಜಾ ಪ್ರಸ್ತಾವಿಕ ಮಾತನಾಡಿದರು. ಅತಿಥಿಗಳನ್ನು ಪ್ರೊ. ಕಮಲಾಕ್ಷಿ ಜಿ. ತಡಸದ್ ಪರಿಚಯಿಸಿದರು.  

ಪ್ರೊ. ಡಿ. ಎನ್‌. ಪಾಟೀಲ್, ಮೌಲ್ಯಮಾಪನ ಅಧಿಕಾರಿ, ಹಾಗೂ ಪ್ರೊ. ವೈ. ಎಸ್‌. ಬಾಳವಂತಗೋಳ, ರಾಜ್ಯಶಾಸ್ತ್ರ ವಿಭಾಗ ಉಪಸ್ಥಿತರಿದ್ದರು.. ವಿವಿಧ ವಿಭಾಗಗಳ ಅಧ್ಯಕ್ಷರು, ಡೀನ್, ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಹನಮಂತಪ್ಪ ಡಿ. ಜಿ. ವಂದನಾರೆ​‍್ಣ ಸಲ್ಲಿಸಿದರು.