ಯಶಸ್ವಿ ಬದುಕಿಗಾಗಿ ಭಗವದ್ಗೀತೆಯ ಓದು ಅಗತ್ಯ: ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ

ಯಶಸ್ವಿ ಬದುಕಿಗಾಗಿ ಭಗವದ್ಗೀತೆಯ ಓದು ಅಗತ್ಯ: ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ Reading the Bhagavad Gita is essential for a successful life: Additional District Magistrate Geetha

ಧಾರವಾಡ ಆ.16: ಭಗವದ್ಗೀತೆಯ 18 ಅಧ್ಯಾಯವು ತ್ಯಾಗದಿಂದ ಆಗಿರುವ ಒಂದು ಪುಸ್ತಕ. ಅದನ್ನು ಓದಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಭಗವದ್ಗೀತೆಯನ್ನು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ವಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರು ಹೇಳಿದರು. 

ಅವರು ಇಂದು (ಆ.16) ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಿದ ಭಗವಾನ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. 

ಭಾರತ ದೇಶದ ಸಾಂಸ್ಕೃತಿಕ ಪರಂಪರೆಯಲ್ಲಿ ಅನೇಕ ಹಬ್ಬಗಳಿವೆ. ಪ್ರತಿಯೊಂದು ಹಬ್ಬವೂ ತನ್ನದೇ ಆದ ವಿಶೇಷತೆ, ಪೌರಾಣಿಕತೆ ಹಾಗೂ ಆಧ್ಯಾತ್ಮಿಕ ಸಂದೇಶವನ್ನು ಹೊಂದಿದೆ. ಅವುಗಳಲ್ಲಿ ಅತ್ಯಂತ ಪವಿತ್ರ ಹಾಗೂ ಭಕ್ತಿಯಿಂದ ಆಚರಿಸಲಾಗುವ ಹಬ್ಬವೆಂದರೆ ಶ್ರೀಕೃಷ್ಣ ಜಯಂತಿ. ಈ ಹಬ್ಬವು ಕೇವಲ ಧಾರ್ಮಿಕ ಆಚರಣೆಯಾಗಿಯೇ ಸೀಮಿತವಾಗಿಲ್ಲ, ಅದು ಜೀವನದ ಮೌಲ್ಯಗಳನ್ನು ನೆನಪಿಸುವ ಒಂದು ಆತ್ಮಸ್ಪರ್ಶಿ ಸಂಭ್ರಮವಾಗಿದೆ. 

ಭಗವಾನ ಶ್ರೀ ಕೃಷ್ಣನ ಸಂದೇಶಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಯ ಆಚರಣೆ ಸಾರ್ಥಕವಾಗುತ್ತದೆ. ದುರ್ನಡತೆಯನ್ನು ಬಿಟ್ಟು ಸನ್ನಡತೆಯಲ್ಲಿ ನಡೆಯುವವರ ಪರವಾಗಿ ಇರುವುದನ್ನು ಮಹಾಭಾರತದ ಚರಿತ್ರೆ ಹೇಳುತ್ತದೆ. ಅದೇ ರೀತಿ ಒಳ್ಳೆಯತನಕ್ಕೆ ಯಾವಾಗಲೂ ಜಯ ಸಿಗುವುದು ಎಂದು ಮಹಾಭಾರತವೂ ನಮಗೆ ತಿಳಿಸಿಕೊಡುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರು ಹೇಳಿದರು. 

ದಾವಣಗೇರಿ ವಿನ್ನರ್ಸ್‌ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾಗರಾಜ ಎಸ್‌. ಅವರು ಭಗವಾನ ಶ್ರೀ ಕೃಷ್ಣ  ಅವರ  ಕುರಿತು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. 

ಕಾರ್ಯಕ್ರಮದಲ್ಲಿ ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ಅವರು ಕಾರ್ಯಕ್ರಮ  ನಿರೂಪಿಸಿ, ವಂದಿಸಿದರು.  

ಜಿಲ್ಲಾ ಗೊಲ್ಲ,ಯಾದವ ಸಮಾಜದ ಅಧ್ಯಕ್ಷ ಕೆ.ಕೆ.ರಂಗಸ್ವಾಮಿ, ಕಾರ್ಯದರ್ಶಿ ಎಚ್‌.ಪರಮೇಶ್ವರ​‍್ಪ, ಕಾರ್ಯಾಧ್ಯಕ್ಷೆ ನೇತ್ರಾವತಿ ಗೊಲ್ಲರ, ನಿಕಟಪೂರ್ವ ಗೌರವ ಅಧ್ಯಕ್ಷ  ಮಹದೇವ್ ದಂಡಿನ, ಮಂಡಿಹಾಳ ಗ್ರಾಮ ಪಂಚಾಯತ್ ಅಧ್ಯಕ್ಷ  ವಿಶಾಲ ಗೌಳಿ, ಬಾಬು ಬುರಾನ ಗೌಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ  ಗುರು ಹಿರಿಯರು, ಪ್ರಾಧ್ಯಾಪಕರು, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.