ಬೆದವಟ್ಟಿ ಶ್ರೀಗಳ ಅಗಲಿಕೆಗೆ ರಂಭಾಪುರಿ ಜಗದ್ಗುರುಗಳ ಸಂತಾಪ

Rambhapuri Jagadgurus condole the passing of Bedavatti Sri

ಕೊಪ್ಪಳ 29:   ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೆದವಟ್ಟಿ ಹಿರೇಮಠ ಶ್ರೀಶೈಲ ಪೀಠ ಪರಂಪರೆಯ ಶಾಖಾ ಮಠವಾಗಿದ್ದು ಈ ಮಠದ ಪಟ್ಟಾಧಿಕಾರಿಗಳಾದ   ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ತಮ್ಮ 87ನೇ ವಯಸ್ಸಿನಲ್ಲಿ ಮೇ 28 ರಂದು ಬುಧವಾರ ಲಿಂಗೈಕ್ಯರಾದ ವಿಷಯ ತಿಳಿದು ಅತ್ಯಂತ ವಿಷಾದವಾಯಿತು ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. 

ಸರಳ ಸಾತ್ವಿಕ ಗುಣಗಳನ್ನು ಹೊಂದಿದ ಶ್ರೀಗಳವರು ಪಂಚಪೀಠದ ಅಭಿಮಾನಿಗಳಾಗಿದ್ದು ಆ ಭಾಗದಲ್ಲಿ ವೀರಶೈವ ಧರ್ಮ ಸಂಸ್ಕೃತಿ ಆದರ್ಶ ಪರಂಪರೆ ಉಳಿಸಿ ಬೆಳೆಸುವಲ್ಲಿ ಬಹಳಷ್ಟು ಶ್ರಮಿಸಿದ್ದನ್ನು ಮರೆಯಲಾಗದು. ತಮ್ಮ ಜೀವಿತಕಾಲದಲ್ಲಿ ಬೆದವಟ್ಟಿ ಹಿರೇಮಠಕ್ಕೆ ಒಂದು ಹೊಸ ಆಯಾಮವನ್ನು ತಂದುಕೊಟ್ಟ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಆಚಾರ ವಿಚಾರಗಳನ್ನು ಬದುಕಿನುದ್ದಕ್ಕೂ ಕಾಪಾಡಿಕೊಂಡ ಬಂದ ಹಿರಿಯ ಜೀವ ಅವರ ಅಗಲಿಕೆಯಿಂದ ಬೆದವಟ್ಟಿ ಹಿರೇಮಠದ ಶಿಷ್ಯ ಸದ್ಭಕ್ತರಿಗೆ ಅಪಾರ ದುಃಖವನ್ನು ಉಂಟುಮಾಡಿದೆ. ಅಗಲಿದ ಅವರ ಪವಿತ್ರ ಆತ್ಮಕ್ಕೆ ಪರಮಾತ್ಮ ಚಿರಶಾಂತಿಯಿತ್ತು ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು   ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಹಾಗೂ ಕ್ಷೇತ್ರನಾಥ   ವೀರಭದ್ರಸ್ವಾಮಿ ಸರ್ವರಿಗೂ ಅನುಗ್ರಹಿಸಲಿ ಎಂದು   ರಂಭಾಪುರಿ ಜಗದ್ಗುರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.