ಮಳೆ ಇಳಿಮುಖ :ರಾಷ್ಟ್ರೀಯ ಹೆದ್ದಾರಿ ಅನಮೂಡ್ ಬಳಿ ಭಯಾನಕ ಭೂಕುಸಿತ

ಮಳೆ ಇಳಿಮುಖ :ರಾಷ್ಟ್ರೀಯ ಹೆದ್ದಾರಿ ಅನಮೂಡ್ ಬಳಿ ಭಯಾನಕ ಭೂಕುಸಿತ Rainfall: Terrible landslide near National Highway Anamood

ಕಾರವಾರ 05: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದೆ. ಕರಾವಳಿಯಲ್ಲಿ ಮತ್ತು ಘಟ್ಟದಲ್ಲಿ ಬಿಸಿಲಿನ ದರ್ಶನವಾಗಿದೆ. ಇದರಿಂದ ಕೃಷಿ ಚಟುವಟಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. 

ಮತ್ತೊಂದೆಡೆ ಅನಮೂಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಭಯಾನಕ ಭೂ ಕುಸಿತವಾಗಿ ,ಸಂಚಾರ ವ್ಯವಸ್ಥೆಗೆ ದೊಡ್ಡ ಸವಾಲು ಒಡ್ಡಿದೆ. ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 4ಎ ಅಲ್ಲಿ ಭೂಕುಸಿತವಾಗಿದ್ದು, ಗೋವಾ ಮತ್ತು ಉತ್ತರ ಕನ್ನಡ ಮಧ್ಯೆ ಸಂಪರ್ಕ ಕೆಲ ದಿನ ಹದಗೆಡುವ ಲಕ್ಷಣಗಳಿವೆ.ಜೊಯಿಡಾ ತಾಲೂಕಿನ ರಾಮನಗರ ದಿಂದ ಗೋವಾಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಅನಮೂಡ್ ಸಮೀಪದ ಘಾಟ್ ನಲ್ಲಿ ರಸ್ತೆಯ ಅರ್ಧಭಾಗ ಸಹಿತ ಭೂ ಕುಸಿತ ಶನಿವಾರ ಮಧ್ಯಾಹ್ನ ಸಂಭವಿಸಿದೆ.ವಾಹನ ಸಂಚಾರ ಅನಮೂಡ ಹೆದ್ದಾರಿಯ ಭಾಗದಲ್ಲಿ ದುಸ್ತರವಾಗಿದೆ ಮತ್ತು ಆತಂಕಕಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯ 4 ಎ ಬದಲು, ಬೇರೆ ರಸ್ತೆ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಎಸ್ಪಿ ನಾರಾಯಣ ವಿನಂತಿಸಿದ್ದಾರೆ. ಶನಿವಾರ ಸಂಜೆ ವೇಳೆಗೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರುವ ಸಾಧ್ಯತೆ ಇದೆ. ಭಾರೀ ಮಳೆಯಿಂದ ನೆನೆದ ರಸ್ತೆ ಬದಿಯ ಭೂಭಾಗ ಅನಮೂಡ ಘಾಟ್ ನ ಹೆದ್ದಾರಿಯಲ್ಲಿ ಭಯಾನಕ ಭೂ ಕುಸಿತ ಸಂಭವಿಸಿದೆ.

ಶಿರೂರು ಭೂ ಕುಸಿತ ನೆನಪಿಸಿದ ಬಾಳೆಮನೆ :ಕದ್ರಾ -ಕೊಡಸಳ್ಳಿ ಮಧ್ಯೆ ಬಾಳೆಮನೆ ಎಂಬಲ್ಲಿ ಭೂ ಕುಸಿತದ ವ್ಯಾಪ್ತಿ ವಿಸ್ತಾರ ಕಳೆದ ವರ್ಷ ಜುಲೈ 16 ರಂದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶಿರೂರು ಬಳಿ ಸಂಭವಿಸಿದ ಭೂ ಕುಸಿತ ಹನ್ನೊಂದು ಜನರನ್ನು ಬಲಿ ತೆಗೆದುಕೊಂಡಿತ್ತು. 20 ದಿನಗ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು . ಅಲ್ಲಿ ಅಪಾರ ಪ್ರಮಾಣದ ಮಣ್ಣು ನದಿ ಸೇರಿತ್ತು. ಕದ್ರಾ ಕೊಡಸಳ್ಳಿ ಮಧ್ಯೆ ರಸ್ತೆಯಲ್ಲಿ ಆದ ಭೂ ಕುಸಿತ ಶಿರೂರು ಘಟನೆಯನ್ನು ನೆನಪಿಸಿದೆ. 2020ರಲ್ಲಿ ಅರಬೈಲ್ ಘಟ್ಟದ ರಸ್ತೆಯ ಭೂಕುಸಿತ, ಕಳಚೆಯಲ್ಲಿ ನಡೆದ ಭೂ ಕುಸಿತ ಪ್ರಕರಣ, ಸಿದ್ದಾಪುರ ಮನೆಮನೆ ಘಟ್ಟದ ಭೂ ಕುಸಿತ, ದೇವಿ ಮನೆ ಘಟ್ಟ, ಅಣಶಿ ಘಟ್ಟದ ಸಣ್ಣ ಪ್ರಮಾಣದ ಭೂ ಕುಸಿತಗಳು ಜಿಲ್ಲೆಯ ಸಂಚಾರದ ಬೆನ್ನೆಲುಬನ್ನು ಮುರಿದು ಹಾಕಿದ್ದವು. 

ಈ ಭೂ ಕುಸಿತದ ರಸ್ತೆಗಳನ್ನು ಸರಿದಾರಿಗೆ ತರುವ ಹೊತ್ತಿಗೆ ಪ್ರಸಕ್ತ ಮಳೆಗಾಲದಲ್ಲಿ ಕದ್ರಾ ಬಾಳೆಮನೆ ಹಾಗೂ ಅನಮೂಡ ಹೆದ್ದಾರಿಯಲ್ಲಿ ರಸ್ತೆ ಪಕ್ಕದ ಭೂ ಕುಸಿತಗಳು ಭಯಾನಕವಾಗಿವೆ. ಈ ರಸ್ತೆಗಳ ಅವಘಡ ಸರಿಪಡಿಸಲು ಇನ್ನು ತಿಂಗಳುಗಳ ಕಾಲ ಕಾಯಬೇಕಿದೆ.