ವಿಶ್ವ ಏಡ್ಸ್‌ ಜಾಗೃತಿ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥಾ-2025

ವಿಶ್ವ ಏಡ್ಸ್‌ ಜಾಗೃತಿ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥಾ-2025 Public awareness rally on the occasion of World AIDS Awareness Day-2025

 ಗದಗ 1 : ವಿಶ್ವ ಏಡ್ಸ್‌ ಜಾಗೃತಿ ದಿನಾಚರಣೆ ಪ್ರಯುಕ್ತ  ಜನಜಾಗೃತಿ ಜಾಥಾ  ಕಾರ್ಯಕ್ರಮಕ್ಕೆ  ಸೋಮವಾರ  ನಗರದ ದುಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆ ಆವರಣದಲ್ಲಿ  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಸಿ.ಎಸ್‌. ಶಿವನಗೌಡ್ರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. 

ನಂತರ ಅವರು ಮಾತನಾಡಿ  ಹೆಚ್‌ಐವಿ ಏಡ್ಸ್‌ ನಿಯಂತ್ರಣದಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು, ಯುವಕರು ಕಾಲೇಜ ವಿದ್ಯಾರ್ಥಿಗಳು, ಗ್ರಾಮೀಣ ಜನತೆಗೆ ತಿಳುವಳಿಕೆ ಮೂಡಿಸಿ, ಹೆಚ್‌ಐವಿ ಮುಕ್ತ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಬೇಕೆಂದು ಕರೆ ನೀಡಿದರು. 

ಸಮಾಜದಲ್ಲಿ ಹೆಚ್‌ಐವಿ ಸೋಂಕಿತರಿಗೆ ಮತ್ತು ಬಾಧಿತರರಿಗೆ ಆಗುವ ಅಸಮಾನತೆಯನ್ನು ತೋಲಗಿಸಲು ಮುಂದಾಗಬೇಕು. ನೊಂದವರಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕಾರ್ಯಪ್ರೌವೃತ್ತರಾಗಬೇಕೆಂದು ತಿಳಿಸಿ ಸಂಸತ್ತಿನಲ್ಲಿ ಹೆಚ್‌.ಐ.ವಿ. ಏಡ್ಸ್‌ ಮಸೂದೆ-2017 ಪಾಸಾಗಿದ್ದು, ಸೋಂಕಿತರಿಗೆ ಬಾಧಿತರಿಗೆ ತಾರತಮ್ಯ ಮಾಡಿದರೆ ಕೀಳಾಗಿ ನೋಡಿದರೆ ಹೆಚ್‌.ಐ.ವಿ. ಏಡ್ಸ್‌ ಮಸೂದೆಯಲ್ಲಿ ಅಂತಹವರಿಗೆ ಶಿಕ್ಷೆಯಾಗಿ ಒಂದು ಲಕ್ಷದವರೆಗೆ ದಂಡವನ್ನು ಹಾಗೂ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ತಿಳಿಸಿದರು.  

ಹೆಚ್‌.ಐ.ವಿ. ಬಗ್ಗೆ ಮಾಹಿತಿಯನ್ನು ಪದೇ ಪದೇ  ಸಮುದಾಯಕ್ಕೆ ತಿಳಿಸುವುದರೊಂದಿಗೆ ಸಮುದಾಯವನ್ನು ಬದಲಾವಣೆ ಮಾಡಲು ಸಾಧ್ಯವೆಂದು ತಿಳಿಸಿದರು. ಸಮುದಾಯ ಅವರೊಂದಿಗೆ ಕೈ ಜೋಡಿಸಿದರೆ ಸೋಂಕು ಮುಕ್ತ ನಾಡನ್ನು ಕಟ್ಟಬಹುದೆಂದು ತಿಳಿಸಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ  ಡಾ. ಎಸ್‌.ಎಸ್‌. ನೀಲಗುಂದ  ಮಾತನಾಡಿ ಜಿಲ್ಲೆಯಲ್ಲಿ 8 ಐಸಿಟಿಸಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಸ್ಥಿತಿಗತಿ 2004ರಲ್ಲಿ 1.01 ರಷ್ಟು ಪ್ರತಿಶತ ಇದ್ದು, 2024-25ರಲ್ಲಿ 0.19ಗೆ ಇಳಿದಿದ್ದು, ಗರ್ಭಿಣೀ ಸ್ತ್ರೀಯರಲ್ಲಿ 0.02ಗೆ ಇಳಿದಿದೆ. ಇನ್ನು ಹೆಚ್ಚಿನ ತಪಾಸಣೆ ಕೈಗೊಳ್ಳಲು ಸಂತೆಯಲ್ಲಿ ಮತ್ತು ಜಾತ್ರೆಗಳಲ್ಲಿ ಸಮುದಾಯ ಆಧಾರಿತ ತಪಾಸಣೆ ಕೈಗೊಳ್ಳುತ್ತಿದ್ದು, ಹಾಗೂ ಜಾನಪದ ಕಲೆ ಮೂಲಕ ರೆಡ್ ರಿಬ್ಬನ್ ಕಾಲೇಜುಗಳ ಮುಖಾಂತರ ಅರಿವು ಕಾರ್ಯಕ್ರಮ ಹಾಗೂ ಎಲ್ಲರಿಗೂ ಇಲಾಖೆ ವತಿಯಿಂದ ಉಚಿತ ಪರೀಕ್ಷೆ ಹಾಗು ಓಷಧೋಪಚಾರವನ್ನು ನೀಡಲಾಗುತ್ತಿದೆ ಎಂದರು. 

ಜಾಥಾ ಕಾರ್ಯಕ್ರಮದಲ್ಲಿ ಜೈ ಕಿಸಾನ ಕಲಾ ತಂಡದವರು  ಹೆಚ್‌.ಐ.ವಿ ಏಡ್ಸ ಕುರಿತು ಜಾನಪದ ಹಾಡುಗಳಿಂದ ಜಾಥಾ ಉದ್ದಕ್ಕೂ ಅರಿವು ಮೂಡಿಸುವ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ  ಡ್ಯಾಪ್ಕೂ  ಅಧಿಕಾರಿ ಡಾ. ಅರುಂಧತಿ ಕೆ, ತಾಲೂಕಾ ಆರೋಗ್ಯಾಧಿಕಾರಿ, ಪುಷ್ಪಾ ಪಾಟೀಲ, ಸಿದ್ದಪ್ಪ ಲಿಂಗದಾಳ, ರಾಜೇಂದ್ರ ಗಡಾದ, ಮಂಜುನಾಥ ಸಜ್ಜನರ ಹಾಗೂ ಇತರರು ಹಾಜರಿದ್ದರು.