ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ವಿವಿಧ ವಿಷಯಗಳ ಪ್ರಗತಿ ಪರೀಶೀಲನೆ ಸಭೆ

ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ವಿವಿಧ ವಿಷಯಗಳ ಪ್ರಗತಿ ಪರೀಶೀಲನೆ ಸಭೆ Progress review meeting on various issues at the Zilla Panchayat Sabha Bhavan

       ಗದಗ   14: ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿಕೆಗಾಗಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ಅವಶ್ಯಕವಾಗಿರುವ ಬೇಡಿಕೆಗಳನ್ನು ಪಟ್ಟಿ ಮಾಡಿ ಸಲ್ಲಿಸಬೇಕು.  ಕಚೇರಿಯಲ್ಲಿರುವ ಸಮಸ್ಯೆ ಹಾಗೂ ಬೇಕಾಗಿರುವ ಅನುದಾನ ಕುರಿತು ಚರ್ಚಿಸಿ ಜಿಲ್ಲೆಗೆ ಬೇಕಾಗಿರುವ ಅನುದಾನ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ತಿಳಿಸಿದರು. 

       ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ವಿವಿಧ ವಿಷಯಗಳ ಬಗ್ಗೆ  ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಮುಂದಿನ ವಾರ  ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ  ಜಿಲ್ಲಾ ಯೋಜನಾ ಸಮಿತಿ ಸಭೆ ನಡೆಯಲಿದ್ದು ಆ ಸಭೆಗೆ  ಸಂಬಂಧಿತ ಎಲ್ಲ ಇಲಾಖೆಯವರು ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿಕೆಗಾಗಿ  ಪಟ್ಟಿ ಸಲ್ಲಿಸಬೇಕಾಗುತ್ತದೆ.  ವಿವಿಧ ಇಲಾಖೆ ಅಧಿಕಾರಿಗಳು  ತಾಲೂಕಾವಾರು ಜನಸಂಖ್ಯೆಗನುಗುಣವಾಗಿ ಸದ್ಯ ಲಭ್ಯವಿರುವ ಅನುದಾನ ಹೊರತುಪಡಿಸಿ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕಾಗಿ ಬೇಕಾಗುವ ಅನುದಾನದ ವಿವರವನ್ನು ಮತ್ತು ಬೇಡಿಕೆಗಳ ಪಟ್ಟಿಯನ್ನು  ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.     

      ಈ ಸಂದರ್ಭದಲ್ಲಿ 2026-27 ನೇ ಸಾಲಿಗೆ ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಕರಡು ವಾರ್ಷಿಕ ಕರಡು ಆಯವ್ಯಯ, 2026-27 ನೇ ಸಾಲಿಗೆ ಕೆಳಹಂತದಿಂದ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿಕೆ, 2025-26 ನೇ ಸಾಲಿನ ಅಕ್ಟೋಬರ್ 2025 ರ ಮಾಹೆಯ ಅಂತ್ಯದವರೆಗಿನ ಪ್ರಗತಿ ಪರೀಶೀಲನೆ  ಕುರಿತು ಚರ್ಚಿಸಲಾಯಿತು.     ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್‌.ಮುಂಡರಗಿ,   ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ.ಕಂಬಾಳಿಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.