ಬೇಸಿಗೆ ಅವಧಿಯಲ್ಲಿ 60 ದಿನಗಳ ನಿರಂತರ ನರೇಗಾ ಕೂಲಿ ಕೆಲಸ ನಿರ್ವಹಿಸಿ: ಪ್ರಕಾಶ ವಿ.

Perform 60 days of continuous NAREGA wage work during the summer season: Prakash V.

ಹಲಗೇರಿ ಗ್ರಾ.ಪಂ ಕೆರೆ ಹೂಳೆತ್ತುವ, ಕೂಸಿನ ಮನೆ ಹಾಗೂ ಮೊರನಾಳ ದತ್ತು ಗ್ರಾಮದ ಕಾಮಗಾರಿ ಪರೀಶೀಲನೆ 

ಕೊಪ್ಪಳ 23: ಪ್ರಸ್ತುತ ಬೇಸಿಗೆ ಇರುವದರಿಂದ ಪ್ರತಿಯೊಂದು ಕುಟುಂಬವು ಗ್ರಾಮ ಪಂಚಾಯತಿಯಿಂದ ನೀಡುವ ನರೇಗಾ ಕೆಲಸದಲ್ಲಿ ಭಾಗವಹಿಸಿ 60 ದಿನಗಳ ಕೂಲಿ ಕೆಲಸ ನಿರ್ವಹಿಸಿರೆಂದು ಕೊಪ್ಪಳ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಪ್ರಕಾಶ್ ವಿ. ಅವರು ಕರೆ ನೀಡಿದರು. 

ಅವರು ಮಂಗಳವಾರ ಹಲಗೇರಿ ಗ್ರಾಮ ಪಂಚಾಯತಿಯಿಂದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಹಲಗೇರಿ ಗ್ರಾಮದ ಪುಟ್ಟಪ್ಪನ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ಪರೀಶೀಲಿಸಿ ಮಾತನಾಡಿದರು.  

ನರೇಗಾ ಯೋಜನೆಯು ಗ್ರಾಮೀಣ ಭಾಗದ ಕೂಲಿಕಾರರಿಗೆ ಕೂಲಿ ಕೆಲಸ ಒದಗಿಸುವ ಯೋಜನೆಯಾಗಿದ್ದು, ಇಲ್ಲಿ ಕೆಲಸದಲ್ಲಿ ನಿರತರಾದ ಪ್ರತಿ ಕುಟುಂಬವು 60 ದಿನಗಳ ನಿರಂತರವಾಗಿ ಕೂಲಿ ಕೆಲಸ ನಿರ್ವಹಿಸಬಹುದು. ಪ್ರತಿಯೊಬ್ಬರು ರೂ.370 ಕೂಲಿ ಬರುವಂತೆ ಕೂಲಿ ಕೆಲಸ ನಿರ್ವಹಿಸಬೇಕು. ಪ್ರಸ್ತುತ ಬೇಸಿಗೆ ಇರುವದರಿಂದ ಕೆಲಸದ ಪ್ರಮಾಣದಲ್ಲಿ ಶೇ.30ರಷ್ಟು ವಿನಾಯಿತಿ ನೀಡಲಾಗಿದೆ. ಕಳೆದ ಸಾಲಿನಲ್ಲಿ ರೂ.349 ಇದ್ದ ಕೂಲಿ ಮೊತ್ತವನ್ನು ಪ್ರಸ್ತುತ ರೂ.370 ಕ್ಕೆ ಹೆಚ್ಚಿಸಿದ್ದು, ನಿಮಗೆ ನೀಡಿರುವ ಅಳತೆಗನುಗುಣವಾಗಿ ಕೆಲಸ ನಿರ್ವಹಿಸಬೇಕೆಂದರು.  

ಬಿಸಲಿನ ಪ್ರಮಾಣದ ಬಹಳಷ್ಟು ಇರುವದರಿಂದ ಕೂಲಿ ಕೆಲಸಕ್ಕೆ ಬರುವ ಎಲ್ಲಾ ಪಾಲಕರು ತಮ್ಮ 6 ತಿಂಗಳಿನಿಂದ 3 ವರ್ಷದೊಳಗಿ ಮಕ್ಕಳನ್ನು ಕಾಮಗಾರಿ ಸ್ಥಳಕ್ಕೆ ಕರೆದುಕೊಂಡು ಬರದೇ ಗ್ರಾಮದಲ್ಲಿರುವ ಕೂಸಿನ ಮನೆಗೆ ಮಕ್ಕಳನ್ನು ಸೇರೆ​‍್ಡ ಮಾಡಬೇಕು. ಪ್ರತಿಯೊಬ್ಬರಿಗೂ 6 ಪೂಟ್ ಉದ್ದ, 6 ಅಗಲ, 1 ಪೂಟ್ ಆಳ ಕೆಲಸ ನಿರ್ವಹಿಸಿದಲ್ಲಿ ಎಲ್ಲರಿಗೂ ರೂ.370 ಕೂಲಿ ಬರುತ್ತದೆ ಎಂದು ಹೇಳಿದರು. 

ಮಹಿಳಾ ಕೂಲಿಕಾರರೊಂದಿಗೆ ಸಂವಾದ: ಕೆರೆ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಕೂಲಿಕಾರರೊಂದಿಗೆ ಜಿ.ಪಂ ಯೋಜನಾ ನಿರ್ದೇಶಕರು ಸಂವಾದ ನಡೆಸಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ಹಾಜರಾಗಿ ಮಹಿಳಾ ಭಾಗವಹಿಸುವಿಕೆ ಹೆಚ್ಚಳವಾಗಬೇಕು ಎಂದರು. ಬಳಿಕ ಕೆರೆ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿರುವ ಕುರಿತು ಎನ್‌.ಎಂ.ಎಂ.ಎಸ್ ನಲ್ಲಿ ಹಾಜರಾತಿಯನ್ನು ಸೆರೆ ಹಿಡಿದು ಅಪಲೋಡ್ ಮಾಡಿರುವ ಕುರಿತು ಆನ್‌ಲೈನ್ ಹಾಜರಾತಿಯನ್ನು ಖುದ್ದಾಗಿ ಪರೀಶೀಲಿಸಿದರು. 

ಹಲಗೇರಿ ಕೂಸಿನ ಮನೆ ಪರೀವೀಕ್ಷಣೆ: ಹಲಗೇರಿ ಗ್ರಾಮದ ಕೂಸಿನ ಮನೆಗೆ ಜಿ.ಪಂ ಯೋಜನಾ ನಿರ್ದೇಶಕರು ಭೇಟಿ ನೀಡಿದರು. ಮಕ್ಕಳು ದಾಖಲಾಗಿರುವ ಕುರಿತು ಕೆರ್ ಟೆಕರ​‍್ಸ‌ಗಳು ಮಾಹಿತಿ ನೀಡಿದರು. ಪ್ರಸ್ತುತ 15 ಮಕ್ಕಳು ಪ್ರತಿ ದಿನ ಕೂಸಿನ ಮನೆಗೆ ಬರುತ್ತಿದ್ದು, ಬೆಳಿಗ್ಗೆ ಹಾಲು, ಬಾಳೆಹಣ್ಣು, ದಾಲ್ ಖಿಚಡಿ, ಹೆಸರು ಬೆಳೆ ಪಾಯಸ, ಶಾವಿಗೆ ಪಾಯಸ, ಮೊಟ್ಟೆ ನೀಡುತ್ತಿರುವ ಕುರಿತು ವಿವರಿಸಿದರು. ಮಕ್ಕಳ ಆರೋಗ್ಯ ತಪಾಸಣೆ ಜರುಗಿಸಬೇಕೆಂದು ಜಿ.ಪಂ ಯೋಜನಾ ನಿರ್ದೇಶಕರು ಹೇಳಿದರು. 

ಬಿಸರಳ್ಳಿ ಗ್ರಾಮ ಪಂಚಾಯತಿ ಹಾಗೂ ನರೇಗಾ ದತ್ತು ಗ್ರಾಮ ಮೊರನಾಳಕ್ಕೆ ಭೇಟಿ: ಬಿಸರಳ್ಳಿ ಗ್ರಾಮ ಪಂಚಾಯತಿಗೆ ಜಿ.ಪಂ ಯೋಜನಾ ನಿರ್ದೇಶಕರು ಭೇಟಿ ನೀಡಿ, ನರೇಗಾ ಕೂಲಿಕಾರರಿಗೆ ಕೂಲಿ ಕೆಲಸ ನೀಡುವಂತೆ ಗ್ರಾ.ಪಂ ಅಧಿಕಾರಿಗಳಿಗೆ ಸೂಚಿಸಿದರು. ಪ್ರಧಾನಮಂತ್ರಿ ಆವಾಸ್ ಪ್ಲಸ್ ಸಮೀಕ್ಷೆಯನ್ನು ವಸತಿ ರಹಿತ ಯಾವುದೇ ಕುಟುಂಬವು ಹೊರಗುಳಿಯದಂತೆ ಜಿ.ಪಿ.ಎಸ್ ಮಾಡಬೇಕೆಂದು ಗಣಕಯಂತ್ರ ನಿರ್ವಾಹಕರಿಗೆ ಸೂಚಿಸಿದರು.  

ಬಳಿಕ ಸಂಸದರ ನರೇಗಾ ದತ್ತು ಗ್ರಾಮ ಮೋರನಾಳ ಗ್ರಾಮಕ್ಕೆ ಭೇಟಿ ನೀಡಿ, ನರೇಗಾ ಯೋಜನೆಯ ಶಾಲಾ ಕಂಪೌಂಡ, ಶಾಲಾ ಶೌಚಾಲಯ, ಅಡುಗೆ ಕೋಣೆ ಮತ್ತು ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆಯಿಂದ ಅನುಷ್ಠಾನಿಸುತ್ತಿರುವ ಪ್ರಗತಿಯಲ್ಲಿರುವ ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿಗಳನ್ನು ವೀಕ್ಷಿಸಿದರು.  

ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಬಿಸರಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರಮೇಶರಡ್ಡಿ, ಹಲಗೇರಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಶೋಕ ರಾಂಪುರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರ, ಗ್ರಾಮ ಪಂಚಾಯತ ಕಾರ್ಯದರ್ಶಿ ದೊಡ್ಡನಗೌಡ, ತಾಂತ್ರಿಕ ಸಹಾಯಕ ಪ್ರವೀಣ ಗದಗ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.