ದೇಶ ಭಕ್ತಿಯೇ ಸಂಘದ ಮೂಲಧ್ಯೇಯ :ರಾಮಚಂದ್ರ ಏಡಕೆ

 ದೇಶ ಭಕ್ತಿಯೇ ಸಂಘದ ಮೂಲಧ್ಯೇಯ :ರಾಮಚಂದ್ರ ಏಡಕೆ Patriotism is the basic motto of the Sangh: Ramachandra Edake

ಲೋಕದರ್ಶನ ವರದಿ 

ದೇಶ ಭಕ್ತಿಯೇ ಸಂಘದ ಮೂಲಧ್ಯೇಯ :ರಾಮಚಂದ್ರ ಏಡಕೆ 

ಚಡಚಣ 11: ದೇಶ ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮವರ ಕುತಂತ್ರದಿಂದ ನಮ್ಮ ದೇಶವನ್ನು ಬ್ರಿಟಿಷರು ಆಳಿದರು. ಅಂದು ನಮ್ಮಲ್ಲಿ ದೇಶ ಪ್ರೇಮ, ಸಂಘಟನೆಯ ಕೊರತೆ ಎದ್ದು ಕಾಣುತ್ತಿತ್ತು. ದೇಶ ಪ್ರೇಮ ದೇಶಕ್ಕೋಸ್ಕರ ಸಂಘಟನೆ ಮಾಡುವದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉದ್ದೇಶ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ ಹೇಳಿದರು. 

  ಪಟ್ಟಣದ ಸಂಗಮೇಶ್ವರ ಕಾಲೇಜು ಮೈದಾನದಲ್ಲಿ ವಿಜಯದಶಮಿ ಪಥ ಸಂಚಲನ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು. 

   ದೇಶವನ್ನು ಬ್ರಿಟೀಷರಿಂದ ಸ್ವತಂತ್ರಗೊಳಿಸಲು ಭಾರತೀಯರಲ್ಲಿ ಏಕತೆ, ಸಂಘಟನೆಯನ್ನು ಒಗ್ಗೂಡಿಸಲು ಡಾ. ಕೇಶವ ಭೈರಾಪಂತ ಹೆಡಗೆವಾರ ಅವರ ನೇತೃದಲ್ಲಿ ವಿಜಯದಶಮಿಯಂದು 1925ರಲ್ಲಿ ನಾಗಪೂರದ ಒಂದು ಸಣ್ಣ ಕೊಠಡಿಯಲ್ಲಿ ಹುಟ್ಟಿಕೊಂಡಿತು.  

  ದುಷ್ಟ ಶಕ್ತಿಗಳ ಸಂಹಾರ, ಅನ್ಯಾಯ ಮೇಲೆ ಅನ್ಯಾಯದ ಜಯದ ದಿನವಾದ ವಿಜಯದಶಮಿಯಂದು ಸಂಘ ಹುಟ್ಟಿಕೊಂಡಿದೆ. ಸಂಘಕ್ಕೆ 100 ವರ್ಷದ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ನಾವು ಭಾಗ್ಯಶಾಲಿಗಳು ಎಂದರು.  

  ಸಂಘ ಆರಂಭಗೊಂಡ ದಿನ ಯಾವುದೇ ದೀಪ ಬೆಳಗಿಸಿಲ್ಲ, ರಿಬ್ಬನ್ ಕಟ್ ಮಾಡಿಲ್ಲ. ಅಧ್ಯಕ್ಷರು, ಪದಾಧಿಕಾರಿಗಳು ಇರಲಿಲ್ಲ. ಇಲ್ಲಗಳ ಮಧ್ಯೆ ಒಂದೇ ಒಂದು ಇತ್ತು. ದೇಶಭಕ್ತಿಯ ಜ್ವಾಲೆ ಧಗಧಗನೇ ಉರಿಯುತ್ತಿತ್ತು. ನಾವೆಲ್ಲ ಒಮ್ಮೆ ಹಿಂತಿರುಗಿ ನೋಡಿದರೆ ಸಂಘ ಬೆಳೆದು ಬಂದ ದಾರಿ ಸುಖಕರವಾಗಿರಲಿಲ್ಲ. ಹಲವಾರು ನೋವು, ಅವಮಾನ, ಟೀಕೆಗಳ ಮಧ್ಯೆ ಸಂಘ ಸಾಗಿ ಬಂದಿದೆ ಎಂದರು. 

    ಈ ದೇಶದಲ್ಲಿ ಭಗವಾ ಧ್ವಜ ಹಾರಲು ಬಿಡಲ್ಲ, ಸಂಘವನ್ನು ಬೆಳೆಯಲು ಬಿಡಲ್ಲ ಎಂದು ಕೆಲವರು ಘೋಷಿಸಿಕೊಂಡಿದ್ದರು. 1948ರಲ್ಲಿ ಸಂಘವನ್ನು ನಿಷೇಧಿಸಿದ್ದರು. ಸಾವಿರಾರು ಸ್ವಯಂ ಸೇವಕರನ್ನು ಜೈಲಿಗೆ ಹಾಕಿದ್ದರು. 1949ರ ಒಂದೇ ವರ್ಷದಲ್ಲಿ ಸಂಘ ನಿರ್ದೋಷಿ ಎಂದು ಮತ್ತೆ ಪುಟಿದೆದ್ದಿತು. ಇದಾಗ ಬಳಿಕ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿಯವರು ಸಂಘವನ್ನು ಮತ್ತೆ ನಿಷೇಧಿಸಿದರು. ಸುಮಾರು 1.30 ಲಕ್ಷ ಸ್ವಯಂ ಸೇವಕರನ್ನು ಜೈಲಿಗಟ್ಟಿದರು. ಸಂಘ ಮುಗಿಸಲು ಶತಾಯಗತಾಯ ಪ್ರಯತ್ನ ಮಾಡಿದರು. ಸಂವಿಧಾನದ ಮೆಲೇಯೆ ಸವಾರಿ ಮಾಡಿದರು. ಆದರೂ ಸಂಘ ಬಗ್ಗಲಿಲ್ಲ. ಸಂಘ ಮುಗಿಸುತ್ತೇನೆ ಅಂದವರ ವಂಶಗಳೇ ಉರುಳಿ ಹೋಗಿವೆ ಹೊರತು, ಸಂಘವನ್ನು ಮುಗಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಅದು ಯಾರಿಂದಲೂ ಸಾಧ್ಯವಿಲ್ಲ ಎಂದರು. 

  ಜಾತಿ ಕೇಳದ ಏಕೈಕ ಸಂಘ : ಸಂಘ ಎಂದರೆ ದೇಶಭಕ್ತಿ, ಸಂಘ ಎಂದರೆ ಸೇವೆ, ಸಂಘವೆಂದರೆ ಸಮಾಜಕ್ಕೆ ಸಂಕಟ ಬಂದಾಗ ಜೀವದ ಹಂಗು ತೊರೆದು ಸೇವೆ ಮಾಡುವದು, ಹಿಂದೂ ಸಮಾಜಕ್ಕೆ ಅಂಟಿದ ಅಸ್ಪಶೃತೆ ತೊಡೆದು ಹಾಕಲೆಂದೇ ಸಂಘ ಹುಟ್ಟಿತು. ಎಂದಿಗೂ ಜಾತಿ ಕೇಳದ ಸಂಘಟನೆಯೇ ಸಂಘ, ಭಗವಂತ ಜಾತಿ ಮಾಡಿಲ್ಲ, ಜನ್ಮದಿಂದ ನಾವೆಲ್ಲ ಶೂದ್ರರು, ಜಾತಿ ನಾವು ಮಾಡಿಕೊಂಡಿದ್ದೇವೆ. ಸಾಧನೆಯಿಂದ ದೊಡ್ಡವರಾಗಬೇಕೆ ಹೊರತು, ಜಾತಿಯಿಂದಲ್ಲ ಎಂದರು. 

ಹಾವಿನಾಳ ಗ್ರಾಮದ ಚರಮೂರ್ತಿ ಮಠದ ವಿಜಯಮಹಾಂತೇಶ ಶಿವಾಚಾರ್ಯರು ಆಶಿರ್ವಚನ ನೀಡಿದರು. 

  ಮೊದಲು ಸುಮಾರು 1000ಕ್ಕೂ ಅಧಿಕ ಗಣವೇಶಧಾರಿಗಳಿಂದ ಪಥಸಂಚಲನ ನಡೆಯಿತು. ಪಥಸಂಚಲನವು ಎಪಿಎಮ್ಸಿ ಇಂದ ಪ್ರಾರಂಭಗೊಂಡು ಬಸವೇಶ್ವರ ಸರ್ಕಲ್, ಬಜಾರ ರೋಡ, ಅಗಸಿ, ಎಸ್‌.ಬಿ.ಐ. ಬ್ಯಾಂಕ್, ಬಸವೇಶ್ವರ ಸರ್ಕಲ್, ಸರಕಾರಿ ದವಾಖಾನೆ, ಸಿಂಪಿ ಲಿಂಗಣ್ಣ ಸರ್ಕಲ್, ಜೇಸರ ದಾಸಿಮಯ್ಯ ಸರ್ಕಲ್, ನೇಕಾರ ಕಾಲನಿ ಮಾರ್ಗವಾಗಿ ಸಂಚರಿಸಿ, ಸಂಗಮೇಶ್ವರ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡಿತು.