ಪತ್ರಕರ್ತರ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿಗೆ ಪರಶುರಾಮ ಶಿವಶರಣ ಆಯ್ಕೆ

ಪತ್ರಕರ್ತರ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿಗೆ ಪರಶುರಾಮ ಶಿವಶರಣ ಆಯ್ಕೆ Parashuram Shivasharan selected for district-level annual award for journalists

ವಿಜಯಪುರ 18: ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ ಭಾಜನರಾಗಿದ್ದಾರೆ. ಪರಶುರಾಮ ಶಿವಶರಣ ಅವರು ರಾಜ್ಯ ಮಟ್ಟದ ಕನ್ನಡ ದಿನ ಪತ್ರಿಕೆ ಹೊಸ ದಿಗಂತದ ವಿಜಯಪುರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ತಾವು ತೊಡಗಿಸಿಕೊಂಡು, ನಿರ್ಭಿತಿಯಾಗಿ ಜನಮುಖಿ, ಸಮಾಜಮುಖಿ ವರದಿಗಳನ್ನು ಮಾಡುತ್ತ ಖ್ಯಾತಿ ಪಡೆದವರು. 

ಪರಶುರಾಮ ಶಿವಶರಣ ಅವರು ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವುದರ ಜೊತೆಗೆ ಸಾಹಿತಿಗಳು ಆಗಿದ್ದಾರೆ. ಈಗಾಗಲೇ ಹಲವು ಕೃತಿಗಳನ್ನು ಹೊರ ತಂದಿದ್ದು,  ಜೀವಪೀಠ, ನೀಲಿ ಮಿಂಚು ಕವನ ಸಂಕಲನ, ರಾಣಿ ಬಗೀಚ್ ಕಥಾ ಸಂಕಲನ ಹಾಗೂ ವಾರ ನೋಟ ಅಂಕಣ ಸಂಕಲನಗಳನ್ನು ಹೊರ ತಂದಿದ್ದಾರೆ. ಇವರ ಕೃತಿಗಳು ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಗಿವೆ. ಅದರಂತೆ ಶಿವಶರಣ ಅವರ ವಿರಚಿತ ‘ಜೀವ ಪೀಠ’ ಕೃತಿಗೆ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡುವ ‘ಅರಳು ಪ್ರತಿಭೆ’ ಪ್ರಶಸ್ತಿ ದೊರೆತಿದೆ. 

ವಿವಿಧ ಸಂಘ, ಸಂಸ್ಥೆಗಳು ಕೊಡಮಾಡುವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.  ಜು. 19 ರಂದು ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಹಿರಿಯ ಪತ್ರಕರ್ತ ಪರಶುರಾಮ ಶಿವಶರಣ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೋಂ) ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಪತ್ರಕರ್ತರ ದಿನಾಚರಣೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.