ಹೊಸ ಪಡಿತರ ಚೀಟಿ ಪಡೆಯಲು ಕಾಯುತ್ತಿರುವ ಅರ್ಜಿದಾರರಿಗೆ ಪಂಚನಾಮೆ ಪ್ರಕ್ರಿಯೆ

ಹೊಸ ಪಡಿತರ ಚೀಟಿ ಪಡೆಯಲು ಕಾಯುತ್ತಿರುವ ಅರ್ಜಿದಾರರಿಗೆ ಪಂಚನಾಮೆ ಪ್ರಕ್ರಿಯೆ  Panchanama process for applicants waiting to get new ration cards

ಗದಗ 09: ತಾಲೂಕಿನಲ್ಲಿ ಹೊಸ ಪಡಿತರ ಚೀಟಿ ಪಡೆಯಲು ಕಾಯುತ್ತಿರುವ ಅರ್ಜಿದಾರರಿಗೆ ಪಂಚನಾಮೆ ಪ್ರಕ್ರಿಯೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗಬಾರದು ಎಂದು ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಅವರು ಮನವಿ ಮಾಡಿದ್ದಾರೆ.  

ಈ ಕುರಿತು ಪ್ರಕಟಣೆ ನೀಡಿರುವ ಅವರು, 2017ರಿಂದ 2025ರ ಅವಧಿಯಲ್ಲಿ ಹೊಸ ಪಡಿತರ ಚೀಟಿಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಾಗರಿಕರ ಮನೆಗೆ ಆಹಾರ ಮತ್ತು ನಾಗರಿಕ ಸರಬರಾಜು - ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡುತ್ತಿದ್ದಾರೆ. ಅರ್ಜಿದಾರರ ವಾಸಸ್ಥಳದ ಪರೀಶೀಲನೆ, ವಿಚಾರಣೆ ಹಾಗೂ ಪಂಚನಾಮೆ ನಡೆಸಿ, ಫಲಾನುಭವಿಗಳ ಭಾವಚಿತ್ರ ಮತ್ತು ಅಗತ್ಯ ಮಾಹಿತಿಯನ್ನು ಸ್ಥಳದಲ್ಲೇ ಸಂಗ್ರಹಿಸಲಾಗುತ್ತಿದೆ. ಇದು ಸರಕಾರದ ಅಧಿಕೃತ ಪ್ರಕ್ರಿಯೆಯಾಗಿದೆ.        

ಮಧ್ಯವರ್ತಿಗಳ ಹಾವಳಿ ಬಗ್ಗೆ ಎಚ್ಚರ: ಪಡಿತರ ಚೀಟಿ ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ತಾಲೂಕಿನ ಕೆಲವು ಮಧ್ಯವರ್ತಿಗಳು, ದಲ್ಲಾಳಿಗಳು ಹಾಗೂ ಆನ್ಲೈನ್ ಅಂಗಡಿಯವರು ಫಲಾನುಭವಿಗಳಿಂದ 5 ಸಾವಿರ ರೂ.ದಿಂದ 7,500 ರೂಪಾಯಿ ವರೆಗೆ ಹಣಕ್ಕೆ ಬೇಡಿಕೆ ಇಡುತ್ತಿರುವುದು ಕಂಡುಬಂದಿದೆ. ಪಡಿತರ ಚೀಟಿ ಪಡೆಯುವುದು ನಾಗರಿಕರ ಹಕ್ಕು, ಇದಕ್ಕಾಗಿ ಯಾರಿಗೂ ಒಂದು ರೂಪಾಯಿ ನೀಡುವ ಅಗತ್ಯವಿಲ್ಲ ಎಂದು ಅಶೋಕ ಮಂದಾಲಿ ಅವರು ಸ್ಪಷ್ಟಪಡಿಸಿದ್ದಾರೆ.      

ದೂರು ನೀಡಲು ಕರೆ: ಒಂದು ವೇಳೆ ಯಾರಾದರೂ ಹಣದ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ಭಯಪಡದೆ ದೂರು ನೀಡಬಹುದು. ಗದಗ ನಗರದ ಮುಳಗುಂದ ನಾಕಾ ಬಳಿಯ ಕೆ.ಎಸ್‌.ಆರಿ​‍್ಟ.ಸಿ. ಡಿಪೊ ಎದುರಿಗೆ ಇರುವ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿರುವ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯನ್ನು ಇಲ್ಲವೇ ಮೊಬೈಲ್ ಸಂಖ್ಯೆ 9449446313 ಸಂಪರ್ಕಿಸಿ ದೂರು ಸಲ್ಲಿಸುವಂತೆ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.