ಹೊನ್ನಾವರ ಗೋಹತ್ಯೆ ಪ್ರಕರಣದಲ್ಲಿ ಭಟ್ಕಳ ಮೂಲದವರಿಲ್ಲ : ತನ್ಜಿಂ ಸ್ಪಷ್ಟನೆ
ಕಾರವಾರ 31 : ಹೊನ್ನಾವರ ತಾಲ್ಲೂಕಿನ ಸಾಲ್ಕೋಡು ಗ್ರಾಮದ ವ್ಯಾಪ್ತಿಯಲ್ಲಿ ನಡೆದ ಗೋ ಹತ್ಯೆ ಪ್ರಕರಣವನ್ನ ಇಡೀ ಸಮಾಜದ ಪರವಾಗಿ ಖಂಡಿಸುತ್ತೇವೆ ಎಂದು ತನ್ಜೀಂ ಸಂಘಟನೆ ಅಧ್ಯಕ್ಷ ಇನಾಯಿತುಲ್ಲಾ ಶಾಬಾಂದ್ರಿ ಹೇಳಿದರು.ಕಾರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಗೋ ಹತ್ಯೆ ಪ್ರಕರಣದಲ್ಲಿ ಭಟ್ಕಳದ ಹೆಸರು ಬರುತ್ತಿದೆ. ಗೋ ಹತ್ಯೆ ಮಾಡಿದವರು ಭಟ್ಕಳದವರು ಎಂಬುದನ್ನು ನಾವು ಒಪ್ಪುವುದಿಲ್ಲ. ಗೋಹತ್ಯೆಯಲ್ಲಿ ಭಟ್ಕಳ ಮೂಲದ ಆರೋಪಿಗಳಿಲ್ಲ ಎಂದು ಇನಾಯತ್ ಸ್ಪಷ್ಟವಾಗಿ ಹೇಳಿದರು.ಈ ಹಿಂದೆಯೋ ರಿಯಾಜ್ ಭಟ್ಕಳ ಎಂದು ಭಟ್ಕಳದ ಹೆಸರು ಸೇರಿಸಿದ ಕೆಲವರು ಭಟ್ಕಳದ ಹೆಸರು ಹಾಳು ಮಾಡಿದ್ದರು. ಇದರ ಹಿಂದೆ ಪಿತೂರಿ ಇತ್ತು . ಸಮುದಾಯದ ಹೆಸರು ಕೆಡಿಸಲು ಹಾಗೆ ಮಾಡಿದ್ದರು.ಈಗ ಭಟ್ಕಳದ ಹೆಸರು ಚನ್ನಾಗಿದೆ. ಆದರೆ ಗೋ ಹತ್ಯೆ ಮಾಡಿದ ಪ್ರಕರಣದಲ್ಲಿ ಭಟ್ಕಳದ ಹೆಸರು ತಂದಿರುವುದು ಬೇಸರ ತಂದಿದೆ ಎಂದರು.ಹೊನ್ನಾವರದಲ್ಲಿ ಹತ್ಯೆ ಮಾಡಿದ ಗೋವಿನ ಮಾಂಸವನ್ನ ಭಟ್ಕಳದಲ್ಲಿ ಮಾರಾಟ ಮಾಡಿದ್ದಕ್ಕೆ ನಮಗೂ ಬೇಸರವಿದೆ. ಕಳ್ಳತನ ಮಾಡಿ ಮಾಂಸ ಕೊಡುತ್ತಾರೆ ಎನ್ನುವ ಕಾರಣಕ್ಕೆ , ನಾವು ಒಂದು ತಿಂಗಳು ಇಂತಹ ಮಾಂಸ ಖರೀದಿಯನ್ನೇ ಬಂದ್ ಮಾಡಿದ್ದೆವು. ಹಸು ಕಳ್ಳತನ ಮಾಡುವುದು ಹಾಗೂ ಹಸು ಮಾರಾಟ ಮಾಡುವವರ ಮೇಲೆ ಸಹ ಕ್ರಮ ಕೈಗೊಳ್ಳಬೇಕು ಎಂದರು.ಹೊನ್ನಾವರ ಗೋ ಹತ್ಯೆ ಪ್ರಕರಣದಲ್ಲಿ ಕೆಲವರು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಪ್ರಯತ್ನ ಮಾಡಿದರು. ಆದರೆ ಜನರು ಬುದ್ದಿವಂತರಾಗಿದ್ದಾರೆ. ಶಾಸಕ ದಿನಕರ ಶೆಟ್ಟಿ ಸಚಿವರ, ಸಿಎಂ, ಗೃಹ ಸಚಿವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗೆ ನಮ್ಮ ಖಂಡನೆ ಇದೆ. ಅವರ ಸರ್ಕಾರದ ಅವಧಿಯಲ್ಲಿ ಏನು ಮಾಡಿದ್ದರು ಎಂದು ಅವರು ಹೇಳಲಿ ಎಂದರು.ನ್ಯಾಯವಾದಿ ಇಮ್ರಾನ್ ಲಂಕ ಮಾತನಾಡಿ ಈ ಘಟನೆಗೆ ನಾವು ಖಂಡಿಸುತ್ತೇವೆ. ಘಟನೆ ಹಿಂದೆ ಯಾರೇ ಇದ್ದರೂ ಅವರನ್ನ ಬಂಧಿಸಲೇ ಬೇಕು ಎಂದರು.ಜಿಲ್ಲೆಯಲ್ಲಿ ಗೋ ಹತ್ಯೆ, ಗೋ ಮಾಂಸ ಸಾಗಾಟ ಮಾಡುವವರು ಒಂದೇ ಸಮಾಜದವರಿಲ್ಲ. ಎಲ್ಲಾ ಸಮಾಜದವರ ಹೆಸರು ಪೊಲೀಸ್ ಪಟ್ಟಿಯಲ್ಲಿದೆ. ಯಾರೇ ಗೋ ಹತ್ಯೆ, ಗೋ ಕಳ್ಳತನ ಮಾಡಿದರೆ ನಾವು ಒಪ್ಪುವುದಿಲ್ಲ. ಒಂದೇ ಸಮಾಜವನ್ನ ತಪ್ಪು ಮಾಡಿದ್ದಾರೆಂದು ಬಿಂಬಿಸಬೇಡಿ ಎಂದರು.ಭಟ್ಕಳದಲ್ಲಿ ಗೋ ಕಳ್ಳತನ, ಗೋ ಹತ್ಯೆ ಪ್ರಕರಣ ಬಂದಾಗ ನಾವು ಆರೋಪಿಗಳನ್ನ ಬಂಧಿಸಬೇಕು ಎಂದು ಆಗ್ರಹಿಸಿದ್ದೇವೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶ ನಮ್ಮದಾಗಿದೆ ಎಂದರು.ಪರೇಶ್ ಮೇಸ್ತಾ ಪ್ರಕರಣದಲ್ಲಿ ಜಾತಿ ಧರ್ಮ ಇಟ್ಟುಕೊಂಡು ರಾಜಕಾರಣ ಮಾಡಿದ್ದರು. ಈಗ ಅದೇ ರೀತಿ ರಾಜಕೀಯ ಮಾಡಲು ಕೆಲವರು ಪ್ರಯತ್ನ ಮಾಡಿದ್ದರು. ಆದರೆ ಜನರು ಇದಕ್ಕೆ ಸ್ಪಂದಿಸಿಲ್ಲ. ಈ ಪ್ರಕರಣದಲ್ಲಿ ಬೇರೆ ಕೋಮಿನವರು ಸಹ ಇದ್ದು, ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದರು.