ಕಬ್ಬಿನ ಬೆಲೆ ನಿಗದಿಗಾಗಿ ದಿ. 7ರಿಂದ ಅಹೋರಾತ್ರಿ ರಾಷ್ಟ್ರೀಯ ಹೆದ್ದಾರಿ ತಡೆ

ಕಬ್ಬಿನ ಬೆಲೆ ನಿಗದಿಗಾಗಿ ದಿ. 7ರಿಂದ ಅಹೋರಾತ್ರಿ ರಾಷ್ಟ್ರೀಯ ಹೆದ್ದಾರಿ ತಡೆ   National Highway to be blocked overnight from 7th for sugarcane price fixing


ಸಂಕೇಶ್ವರ 06: ರೈತರು ಬೆಳೆದ ಕಬ್ಬಿನ ಬೆಳೆಗೆ ಬೆಲೆ 3500 ನಿಗದಿ ಮಾಡದ ಕಾರಖಾನೆಗಳ ವಿರುದ್ಧ ಹಾಗೂ ಮೌನವಾಗಿ ಕಾರಖಾನೆಗಳ ಮಾಲೀಕರ ಬೆನ್ನಿಗೆ ನಿಂತಿರುವ ಸರಕಾರದ ವಿರುದ್ಧ ಶುಕ್ರವಾರ ದಿ. 7ರಂದು ಹತ್ತರಗಿಯ ಟೋಲ್ ನಾಕಾ ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ತಡೆದು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಹುಕ್ಕೇರಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ನ್ಯಾಯವಾದಿ ರಾಮಚಂದ್ರ ಜೋಶಿ ಅವರು ಇಂದಿಲ್ಲಿ ಹೇಳಿದರು.  

ಸಂಕೇಶ್ವರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಧ್ಯಾಹ್ನ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 12 ತಿಂಗಳು ಬೆವರು ಸುರಿಸಿ ರಾತ್ರಿ ಹಗಲು ಎನ್ನದೆ ದುಡಿದ ರೈತರಿಗೆ ಕಬ್ಬಿನ ಬೆಳೆಗೆ ಯೋಗ್ಯ ಬೆಲೆ ನೀಡಲು ಒತ್ತಾಯ ಮಾಡಿದರೂ ಯಾವ ರಾಜಕಾರಣಿಗಳು ಅಥವಾ ಸರಕಾರ ಇದರ ಬಗ್ಗೆ ಚಿಂತನೆ ಮಾಡುತ್ತಿಲ್ಲ. ರಾಜಕಾರಣಿಗಳು ಯೋಗ್ಯ ಬೆಲೆ ಕೊಡಿಸಲು ಪ್ರಯತ್ನ ಮಾಡುತಿಲ್ಲ ಹೀಗಾಗಿ ಗುರುವಾರ ತಡರಾತ್ರಿ ವರೆಗೆ ಸರಕಾರ ಘೋಷಣೆ ಮಾಡದೆ ಇದಲ್ಲಿ ಶುಕ್ರವಾರ ದಿ. 7ರಂದು ಹತ್ತರಗಿಯ ಟೋಲ್ ನಾಕಾ ಬಳಿಕ ಬೆಳಿಗ್ಗೆ 11 ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಸಂಕೇಶ್ವರ, ಹುಕ್ಕೇರಿ ನ್ಯಾಯವಾದಿಗಳು ಕೂಡಾ ಬೆಂಬಲ ನೀಡಿದ್ದಾರೆ ಎಂದರು.  

ಪ್ರತಿಭಟನೆ ವೇಳೆಯಲ್ಲಿ ರೋಗಿಗಳು ಇರುವ ಅಂಬ್ಯುಲನ್ಸ್‌ ವಾಹನಗೆ ಅದು ರೋಗಿಯ ದಾಖಲೆಗಳನ್ನು ನೀಡಿದರೆ ಮಾತ್ರ ಅಂಬ್ಯುಲನ್ಸ್‌ ಹೋಗಲು ಅವಕಾಶ ನೀಡಲಾಗುತ್ತದೆ. ಅಬ್ಯುಲನ್ಸ್‌ ಹೊರತುಪಡಿಸಿದರೆ, ತರಕಾರಿ, ಹಾಲು, ಓಷಧೀಯ ಯಾವುದೇ ವಾಹನಗಳು ತೆರಳಲು ಅವಕಾಶ ನೀಡುವದಿಲ್ಲ ಎಂದು ನುಡಿದರು. ರೈತರು ಕಬ್ಬಿನ ಬೆಲೆ ನಿಗದಿಗಾಗಿ ಒಂದು ವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ರೈತರ ಜೊತೆಗೆ ಮಾತುಕತೆ ಮಾಡದೆ ಇರೊದು ದುರ್ಧೈವ ಸಂಗತಿಯಾಗಿದೆ.  

ನಿಮಗೆ ಬೇಕಾದ ಕಬ್ಬನ್ನು ಖಾನಾಪುರ ದಿಂದ ತರಸತಿರಾ ಅದು 9 ರಿಕವರಿ ಇರುತ್ತದೆ. 12.5 ಬಂದರು ಬೆಲೆ ಇಲ್ಲ. ರೈತರನ್ನು ಕರೆದು ಮಾತುಕತೆ ಮಾಡಲಿಲ್ಲ. ಹಾಗಾದರೆ ರೈತರನ್ನು ಬದುಕಿಸುವವರು ಯಾರು. ತಾಯಿ ಎದೆ ಹಾಲು ನಂಜಾದರೆ ಎನು ಮಾಡುವದು ಮಗು ಎನು ಮಾಡಬೇಕು ಎನ್ನುವ ಪ್ರಶ್ನೆ ಮೂಡಿದೆ ಎಂದರು. ಉದಾಹರಣೆಗೆ ಹಿರಾಶುಗರ ಕಾರಖಾನೆಗೆ 100 ಕಿಮೀ ದೂರದಿಂದ ಅಂದರೆ ಖಾನಾಪುರ ತಾಲೂಕಿನಿಂದ 9 ರಿಕವರಿ ಇರುವ ಕಬ್ಬು ತರುತ್ತಾರೆ. ಆದರೆ ಸಮೀಪದಲ್ಲಿ ಇರುವ 12 ರಿಕವರಿ ಉಳ್ಳ ಕಬ್ಬಿಗೆ ಬೆಲೆ ನೀಡಲ್ಲ. ಸರಕಾರ ಕಾರಖಾನೆಗಳ ಬೆನ್ನಿಗೆ ನಿಂತಿದೆ. ಸರಕಾರದಲ್ಲಿ ಸಚಿವರು, ಶಾಸಕರು ಬಹುತೇಕ ಕಾರಖಾನೆಗಳ ಮಾಲಿಕರು ಇರುವುದರಿಂದ ಸರಕಾರ ರೈತರನ್ನು ಕಡೆಗಣಿಸುತ್ತಿದೆ ಎಂದು ದೂರಿದರು. 

ಸಿದ್ದ ರಾಮಯ್ಯನವರೇ ರಾಜ್ಯದ ಜನರಿಗೆ 5 ಗ್ಯಾರಂಟಿಗೆ ಹಣ ನೀಡುತ್ತಿರಿ ಆದರೆ ರೈತರ ಕಬ್ಬಿಗೆ ಯಾಕೆ ಯೋಗ್ಯ ಬೆಲೆ ನೀಡತಾ ಇಲ್ಲ. ರೈತರ ಮೇಲೆ ಅನ್ಯಾಯ ಆಗಿದೆ. ಕಾರಖಾನೆಗಳ ಮಾಲಿಕರು ಸರಕಾರ ಸೇರಿ ಅನ್ನದಾತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರಕಾರ ಮಾಲಿಕರ ಮೇಲೆ ಒತ್ತಡ ಹಾಕಿ ಬೆಲೆ ಕೊಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.  ಕೆಲವು ಸಹಕಾರಿ ತತ್ವದ ಸಕ್ಕರೆ ಕಾರಖಾನೆ ನಡೆಸುವ ಮುಖಂಡರು ಸಹಕಾರಿ ಕಾರಖಾನೆ ನಷ್ಟದಲ್ಲಿ ಇದೆ ಎಂದು ಹೇಳುತ್ತಾರೆ, ಆದರೆ ತಮ್ಮ ಒಡೆತನದ ಖಾಸಗಿ ಕಾರಖಾನೆ ಪ್ರಾರಂಭ ಮಾಡತಿರಾ ಎನು ಇದರ ಅರ್ಥ ಎಂದು ಪ್ರಶ್ನಿಸಿದರು.  

ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರತಿ ಮೇ. ಟನ್ ಕಬ್ಬಿನ ಬೆಳೆಗೆ ಹೆಚ್ವಿನ ಬೆಲೆ ನೀಡುತ್ತಿವೆ ಆದರೆ ಬೆಳಗಾವಿ ಜಿಲ್ಲೆಯ ಕಾರಖಾನೆಗಳು 3500 ಬೆಲೆ ನೀಡುತ್ತಿಲ್ಲ ಯಾಕೆ ಎನ್ನುವ ಮಾಧ್ಯಮದ ವ ಪ್ರಶ್ನೆಗೆ ಉತ್ತರಿಸಿದ ಅವರು, ರೈತರ ಏಳ್ಗೆ ಇಲ್ಲಿ ಬೇಡವಾಗಿದೆ. ಅಲ್ಲದೆ ಇಲ್ಲಿಯ ಕಾರ್ಖಾನೆಗಳು ಅನ್ನದಾತರಿಗೆ ಬೆಲೆ ಕೊಡಲು ಮನಸ್ಸು ಮಾಡತಾ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ರಿಕವರಿ ಚನ್ನಾಗಿದೆ ಆದರೂ ಬೆಲೆ ನೀಡದೆ ಇರುವದು ರೈತರ ದುರ್ಧೈವ ಎಂದು ನ್ಯಾಯವಾದಿ ರಾಮಚಂದ್ರ ಜೋಶಿ ಹೇಳಿದರು. 

ಇದೇ ವೇಳೆ ಸಂಕೇಶ್ವರ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ.ವಾಯ್‌. ಘಸ್ತಿ ಮಾತನಾಡಿ, ರೈತರ ಕಬ್ಬಿಗೆ ಯೋಗ್ಯ ಬೆಲೆ ಸಿಗುವವರೆ ನ್ಯಾಯವಾದಿಗಳು ರೈತರ ಬೆಂಬಲಕ್ಕೆ ನಿಲ್ಲುವದಾಗಿ ತಿಳಿಸಿದರು. ರೈತ ಕೂಲಿ ಕಾರ್ಮಿಕರ  ಸಂಘಟನೆಯ ಜಿಲ್ಲಾಧ್ಯಕ್ಷ ಬಸವಪ್ರಭು ವಂಟಮೂರಿ, ರಾಜ್ಯ ರೈತ ಕಾರ್ಯದರ್ಶಿ ಗೋಪಾಲ ಮರಬಸನವರ ಇವರು ಮಾತನಾಡಿ, ನ್ಯಾಯವಾದಿಗಳ ಸಂಘದವರು ರೈತರ ಮೇಲೆ ಯಾವದೇ ರೀತಿಯ ಕೇಸುಗಳು ದಾಖಲಾದರು ಕೇಸ್‌ಗೆ ಉಚಿತವಾಗಿ ವಕಾಲತ್ತು ವಹಿಸುವ ಭರವಸೆ ನೀಡಿರುವದರಿಂದ ಅವರಿಗೆ ಕೃತಜ್ಞತೆ ತಿಳಿಸಿದರು. ಈ ವೇಳೆ ರೈತ ಸಂಘದ ಮುಖಂಡ ಜಿಯಾವುಲ್ ವಂಟಮೂರಿ, ಕಿರಣ ನೇಸರಿ ಅವರು ಉಪಸ್ಥಿತರಿದ್ದರು.