ಮಂಜುನಾಥೇಶ್ವರ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಣೆ

 ಮಂಜುನಾಥೇಶ್ವರ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಣೆ National Doctor's Day celebrated at Manjunatheshwar School

ಲೋಕದರ್ಶನ ವರದಿ 

ಧಾರವಾಡ  1: ಇಲ್ಲಿನ  ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಚೈತ್ರ ಬಾವಿಕಟ್ಟಿ ಮಾತನಾಡಿ, ವೈದ್ಯಕೀಯ ಕ್ಷೇತ್ರವು ಕೇವಲ ವೃತ್ತಿಯಲ್ಲ, ಸಮಾಜ ಸೇವೆಯ ಮಹತ್ತರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಬಾಲ್ಯದಿಂದಲೇ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  

ಪೌಷ್ಟಿಕ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು, ನಿಯಮಿತ ವ್ಯಾಯಾಮ, ಯೋಗ ಮತ್ತು ಧ್ಯಾನ, ವೈಯಕ್ತಿಕ ಹಾಗೂ ಪರಿಸರ ಸ್ವಚ್ಛತೆ ಸೇರಿದಂತೆ ಉತ್ತಮ ಆರೋಗ್ಯ ಕಾಪಾಡುವ ಕ್ರಮಗಳ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಿಶೋರಾವಸ್ಥೆಯ ಆರೋಗ್ಯ ಸಮಸ್ಯೆಗಳು ಹಾಗೂ ಋತುಸ್ರಾವದ ಅವಧಿಯಲ್ಲಿ ಬಾಲಕಿಯರು ವಹಿಸಬೇಕಾದ ಆರೋಗ್ಯ ಮುನ್ನೆಚ್ಚರಿಕೆಗಳ ಬಗ್ಗೆಯೂ ಅವರು ಅರಿವು ಮೂಡಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯೆ ಡಯಾನಾ ಜೋಗಿನ್ ಮಾತನಾಡಿ, ಸಮಾಜದ ಆರೋಗ್ಯ ರಕ್ಷಣೆಗೆ ವೈದ್ಯರು ನೀಡುತ್ತಿರುವ ಸೇವೆ ಅಮೂಲ್ಯವಾದುದು ಎಂದು ಶ್ಲಾಘಿಸಿದರು.  ವೇದಿಕೆಯಲ್ಲಿ ಸಂಯೋಜಕರಾದ ನಿರ್ಮಲ ಪಾಟೀಲ, ಕಮಲಾಕ್ಷಿ ಸಣ್ಣಕ್ಕಿ ಹಾಗೂ ಪ್ರಿಯಾಂಕಾ ನಾಯಕ್ ಉಪಸ್ಥಿತರಿದ್ದರು.  ಸುಷ್ಮಾ ಬಿಜೆರಣ್ಣವರ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.