ಸಾಮಾಜಿಕ ವ್ಯವಸ್ಥೆ ಅರಿಯಲು ಎನ್‌.ಎಸ್‌.ಎಸ್‌.ಶಿಬಿರ ಸಹಕಾರಿ

NSS camp helps to understand the social system

ಹೂವಿನಹಡಗಲಿ 10:  ’ಕಳಚುತ್ತಿರುವ ಮಾನವೀಯ ಮೌಲ್ಯ ಬೆಸೆಯುವ ಶಕ್ತಿ ಹಳ್ಳಿ ಬದುಕಲ್ಲಿ ಅಡಗಿದೆ. ಮೌಲ್ಯಾಧಾರಿತ ಜೀವನವನ್ನು ಗ್ರಾಮೀಣ ಶಿಕ್ಷಣದಿಂದ ಕಲಿಯಲು ಸಾಧ್ಯ. ಜತೆಗೆ ಸಾಮಾಜಿಕ ವ್ಯವಸ್ಥೆ ಅರಿಯಲು ಎನ್‌ಎಸ್‌ಎಸ್ ಶಿಬಿರ ಸಹಕಾರಿ’ ಎಂದು ಉಪನ್ಯಾಸಕ ಪ್ರಭು ಸೊಪ್ಪಿನ ಅವರು ಅಭಿಪ್ರಾಯಪಟ್ಟರು.  

ಪಟ್ಟಣದ ರುದ್ರಾಂಬ ಎಂ.ಪಿ.ಪ್ರಕಾಶ  ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ 2024-25ನೇ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿ’ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಜೊತೆಗೆ ಬದಲಾವಣೆ ಕಾಣಲು ಶಿಬಿರ ಪೂರಕ. ಹಳ್ಳಿಗಳಲ್ಲಿ ಭಾವೈಕ್ಯ, ಸಂಸ್ಕಾರ, ಸಂಸ್ಕೃತಿಯನ್ನು ಕಾಣಬಹುದು.  

ಜಾತಿ, ಧರ್ಮ, ಭಾಷೆಯ ಸಂಕೋಲೆಗಳಿಂದ ದೂರವಿರುವ ಗ್ರಾಮೀಣ ಜನರ ಬದುಕಿನಿಂದ ಉತ್ತಮ ನಾಗರಿಕತ್ವದ ನೀತಿ ಪಾಠ ಕಲಿಯಲು ಸಾಧ್ಯ’ ಎಂದರುಉಪನ್ಯಾಸಕ ಶಂಕರ್ ಜಿ. ಬೆಟಗೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದುಡಿಯುವ ಕಾರ್ಮಿಕರ ಗುಣ ಸದಾ ಸಕಾರಾತ್ಮಕವಾಗಿರುತ್ತದೆ ಎಂದು ತಿಳಿಸಿದರು.ಡಾ.ಸತೀಶ್ ಮಾತನಾಡಿದರು. 

ಈ ವೇಳೆ ದೇವಗೊಂಡನಹಳ್ಳಿ ಗ್ರಾಪಂ ಸದಸ್ಯರಾದ ಕೆ.ದೇವರಾಜ್, ನಂದಿಹಳ್ಳಿ ಮಹೇಂದ್ರ, ಹೆಚ್‌. ಮಹೇಶಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಭದ್ರಗೌಡ ಅರಸನಾಳ್, ಪದ್ಮನಾಭ ಶೆಟ್ರು, ಕಾಂತರಾಜು, ಆಂಜನೇಯ ಸ್ವಾಮಿ ಯುವಕರ ಸಂಘ ಉಪನಾಯಕನಹಳ್ಳಿ, ದೈಹಿಕ ಶಿಕ್ಷಣ ನಿರ್ದೇಶಕಿ ರೀಟಾ ಕೆ., ಸಹಾಯಕ ಪ್ರಾಧ್ಯಾಪಕಿ ಜಿ.ಟಿ. ಉಮಾದೇವಿ, ಉಪನ್ಯಾಸಕರಾದ ಸಂಗೀತ ಹಿರೇಮಠ, ಮಹೇಶ್ ಜಿ, ನಾಗರಾಜ್ ಮುತ್ತೂರ್, ನಾಗವೇಣಿ ಮಂಗ್ಲಿ, ಉಮೇಶ್ ಬಸವಣ್ಣೆಪ್ಪ ಇನ್ನಿತರರು ಉಪಸ್ಥಿತರಿದ್ದರು. ಸರ್ಕಾರಿ ಪ್ರೌಢಶಾಲೆ ಉಪನಾಯಕನಹಳ್ಳಿ, ರಾಷ್ಟ್ರೀಯಸೇವಾಯೋಜನೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.