ಬೆನ್ನಾಳಿ ಗ್ರಾಮದಲ್ಲಿ ಎತ್ತಿನ ಬಂಡಿ ಶರ್ಯತ್ತಿಗೆ ಮೃಣಾಲ ಚಾಲನೆ

ಬೆನ್ನಾಳಿ ಗ್ರಾಮದಲ್ಲಿ ಎತ್ತಿನ ಬಂಡಿ ಶರ್ಯತ್ತಿಗೆ ಮೃಣಾಲ ಚಾಲನೆ Mrinal drives bullock cart to Sharyathi in Bennali village

 

ಬೆಳಗಾವಿ 20: ಗ್ರಾಮೀಣ ಕ್ರೀಡೆಗಳ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಬೆನ್ನಾಳಿ ಗ್ರಾಮದಲ್ಲಿ ಆಯೋಜಿಸಲಾದ ಎತ್ತಿನ ಬಂಡಿ ಶರ್ಯತ್ತಿನ ಕಾರ್ಯಕ್ರಮಕ್ಕೆ ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಚಾಲನೆ ನೀಡಿ ಸ್ಪರ್ಧಿಗಳಿಗೆ ಶುಭಾಶಯ ಕೋರಿದರು.  ಶರ್ಯತ್ತು ಗ್ರಾಮೀಣ ಕ್ರೀಡಾಪ್ರಿಯರು ಹಾಗೂ ಸ್ಥಳೀಯರ ಅಪಾರ ಆಸಕ್ತಿಗೆ ಕಾರಣವಾಗಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಕೃಷಿ ಜೀವನಶೈಲಿಯ ಪ್ರತಿಬಿಂಬವಾಗಿದ್ದು, ಇವು ಯುವಜನರಲ್ಲಿ ಶಾರೀರಿಕ ಸಾಮರ್ಥ್ಯ, ಧೈರ್ಯ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತವೆ ಎಂದು ಹೇಳಿದರು.

ಇಂತಹ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಮತ್ತು ಗ್ರಾಮೀಣ ಪ್ರತಿಭೆಗಳನ್ನು ಹೊರತೆಗೆದು ತರಬೇಕು ಎಂಬುದು ತಮ್ಮ ಆಶಯ ಎಂದರು.ಶರ್ಯತ್ತಿನಲ್ಲಿ ಭಾಗವಹಿಸಿದ ಎತ್ತುಗಳು ಹಾಗೂ ಬಂಡಿಗಳ ಅಲಂಕಾರ, ಸ್ಪರ್ಧಾಳುಗಳ ಉತ್ಸಾಹ ಮತ್ತು ಜನರ ಕೇಕೆಗಳಿಂದ ಮೈದಾನ ಸಂಭ್ರಮದಿಂದ ಕಂಗೊಳಿಸಿತು. ಗ್ರಾಮಸ್ಥರು, ಯುವಕರು ಮತ್ತು ಹಿರಿಯರು ಸಹಭಾಗಿಯಾಗಿದ್ದು, ಕಾರ್ಯಕ್ರಮವು ಸ್ಥಳೀಯ ಮಟ್ಟದಲ್ಲಿ ಸಾಮಾಜಿಕ ಏಕತೆಯ ಸಂಕೇತವಾಗಿ ಕಾಣಿಸಿಕೊಂಡಿತು.ಬಾಳು ದೇಸೂರಕರ್, ಮಹೇಶ್ ಕೋಲಕಾರ್, ಸಚಿನ ಬಾಳೇಕುಂದ್ರಿ, ಬಲವಂತ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.