ತುಂಗಭದ್ರ ನೀರಾವರಿ ಕಾರ್ಮಿಕರ ಹೋರಾಟಕ್ಕೆ ಮತ್ತಷ್ಟು ಬಲ

ತುಂಗಭದ್ರ ನೀರಾವರಿ ಕಾರ್ಮಿಕರ ಹೋರಾಟಕ್ಕೆ ಮತ್ತಷ್ಟು ಬಲ More strength for the struggle of Tungabhadra irrigation workers

ರಾಯಚೂರು 20 : ಗಿಲ್ಲೆಸೂಗೂರು ಉಪವಿಭಾಗ ಸಮಿತಿಯ ನಾಮಫಲಕ ಉದ್ಘಾಟನೆ ತುಂಗಭದ್ರ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು ಸಂಯೋಜಿತ) ಆರ್ಡಿಎಸ್ ಗಿಲ್ಲೆಸೂಗೂರು ಉಪವಿಭಾಗ ಸಮಿತಿಯ ನಾಮಫಲಕವನ್ನು ಇಂದು ಮೈತ್ರೇಯಿ ಕೃಷ್ಣನ್ ಹಾಗೂ ತುಂಗಭದ್ರ ನೀರಾವರಿ ಕಾರ್ಮಿಕರ ಸಂಘದ ಅಧ್ಯಕ್ಷ ಕೆ ನಾಗಲಿಂಗಸ್ವಾಮಿ ಉದ್ಘಾಟಿಸಿದರು. ನಾಮಫಲಕ ಉದ್ಘಾಟಿಸಿ ಮಾತನಾಡಿದ ಮೈತ್ರೇಯಿ ಕೃಷ್ಣನ್ ಅವರು, ತುಂಗಭದ್ರ ಜಲಾಶಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಕೆಲಸ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ತುಂಗಭದ್ರ ಕಾರ್ಮಿಕರ ಶ್ರಮದಿಂದಲೇ ಸಾವಿರಾರು ರೈತರ ಜಮೀನಿಗೆ ನೀರು ತಲುಪುತ್ತಿದೆ. 

 ತುಂಗಭದ್ರ ಜಲಾಶಯದ ಪ್ರಮುಖ ಉದ್ದೇಶವೇ ರೈತರ ಕೃಷಿಭೂಮಿಗೆ ಸಮರ​‍್ಕವಾಗಿ ನೀರು ಹರಿಸುವುದಾಗಿದೆ ಎಂದು ತಿಳಿಸಿದರು. ಕಾರ್ಮಿಕರು ನೀರಾವರಿ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಅವರ ಹಕ್ಕುಗಳು ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದು ಅವರು ಕರೆ ನೀಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ತುಂಗಭದ್ರ ನೀರಾವರಿ ಕಾರ್ಮಿಕರ ಸಂಘದ ಅಧ್ಯಕ್ಷ ಕೆ ನಾಗಲಿಂಗಸ್ವಾಮಿ ಅವರು, ತುಂಗಭದ್ರ ನೀರಾವರಿ ಕಾರ್ಮಿಕರ ಹೋರಾಟ ಸರ್ಕಾರ ಹಾಗೂ ಕಾನೂನು ಹೋರಾಟದ ಮೂಲಕ ಮುಂದುವರಿದಿದೆ ಎಂದು ಹೇಳಿದರು.  

ಇತ್ತೀಚೆಗೆ ಹತ್ತಕ್ಕೂ ಹೆಚ್ಚು ಕಾರ್ಮಿಕರ ಪರವಾಗಿ ಕಾರ್ಮಿಕ ನ್ಯಾಯಾಲಯದಿಂದ ಆದೇಶಗಳನ್ನು ಪಡೆಯಲಾಗಿದೆ. ಜೊತೆಗೆ ತುಂಗಭದ್ರ ನೀರಾವರಿ ಕಾರ್ಮಿಕರನ್ನು ಕಾಯಂ ಕೆಲಸಗಾರರೆಂದು ಪರಿಗಣಿಸುವಂತೆ ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣವೂ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.ಕಾರ್ಮಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ರೈತರ ಜಮೀನಿಗೆ ನೀರು ಹರಿಸುವ ಕೆಲಸವನ್ನು ಜವಾಬ್ದಾರಿಯಿಂದ ನಿರಂತರವಾಗಿ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ನಾಗರಾಜ್ ಪೂಜಾರ್, ಸಂಘದ ಪದಾಧಿಕಾರಿಗಳಾದ ಎಂ. ಬಸವರಾಜ್, ಅಜೀಜ್ ಜಾಗೀರದಾರ, ಭೀಮಯ್ಯ ಉಡುಂಗಲ್, ನಿಸಾರ್ ಅಹಮದ್, ಜಗದೀಶ್, ಈರಣ್ಣ ಅನ್ವರ್, ಜಿಲಾನಿ ಪಾಷ ಸೇರಿದಂತೆ ಅನೇಕ ಕಾರ್ಮಿಕರು ಉಪಸ್ಥಿತರಿದ್ದರು.