ತಾಯಿಯ ತವರೂರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾಣಿಕೆ

Minister Lakshmi Hebbalkar's gift to his mother's hometown

 ಗ್ರಾಮ ದೇವಿ ದೇವಸ್ಥಾನ ಸೇರಿ 11 ಮಂದಿರಗಳ ಜೀರ್ಣೋದ್ಧಾರ 

ಬೆಳಗಾವಿ :  ಬಡಾಲ ಅಂಕಲಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮದೇವತೆ ಶ್ರೀ ಲಕ್ಷ್ಮಿ ದೇವಸ್ಥಾನದ ವಾಸ್ತುಶಾಂತಿ, ಮೂರ್ತಿಯ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಶುಕ್ರವಾರ ವಿಜ್ರಂಭಣೆಯಿಂದ ನಡೆಯಿತು. 

ಬಡಾಲ ಅಂಕಲಗಿ ಕ್ಷೇತ್ರದ ಸಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ತಾಯಿ ಗಿರಿಜಾ ಬಸವರಾಜ ಹಟ್ಟಿಹೊಳಿ ಅವರ ತವರೂರು. ತಾಯಿಯ ತವರೂರಿನಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ಒಟ್ಟೂ ಹನ್ನೊಂದು ಮಂದಿರಗಳ ಜೀರ್ಣೋದ್ಧಾರ ಇಲ್ಲವೆ ನಿರ್ಮಾಣ ಮಾಡಿಸಿದ್ದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಗಿರಿಜಾ  ಹಟ್ಟಿಹೊಳಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಶುಕ್ರವಾರ ಗ್ರಾಮ ದೇವಿ ದೇವಸ್ಥಾನ ಉದ್ಘಾಟಿಸಿದರು.  

ತಾಯಿಯ ತವರೂರಾದ ಬಡಾಲ ಅಂಕಲಗಿ ಗ್ರಾಮಕ್ಕೂ ನನಗೂ ಅವಿನಾಭಾವ ಸಂಬಂಧ. ನಾನು ಆಡಿ ಬೆಳೆದ ಊರು ನನ್ನ ಕ್ಷೇತ್ರದಲ್ಲಿರುವುದು ನನ್ನ ಸೌಭಾಗ್ಯ, ಗ್ರಾಮದ ಅಭಿವೃದ್ಧಿ ಸೇರಿದಂತೆ ಜನರ ಸೇವೆ ಮಾಡುವ ಅವಕಾಶ ದೊರೆತಿರುವುದು ಸಹ ನನ್ನ ಭಾಗ್ಯ. ನನ್ನ ಅಧಿಕಾರದ ಅವಧಿಯಲ್ಲಿ ಈಗಾಗಲೇ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದು, ಒಟ್ಟೂ 11 ಗುಡಿಗಳನ್ನು ಅಭಿಪಡಿಸಿದ್ದೇನೆ. ನನ್ನ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಮಠಾಧೀಶರು, ಗ್ರಾಮಸ್ಥರೊಂದಿಗೆ ನನ್ನ ಕುಟುಂಬಸ್ಥರು ಸೇರಿ ಗ್ರಾಮದೇವಿ ದೇವಸ್ಥಾನ ಉದ್ಘಾಟಿಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ ನೀಡಿದ್ದಾರೆ. 

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರಾಮಮಂದಿರದ ವೇದಮೂರ್ತಿ ರಾಚಯ್ಯ ಅಜ್ಜನವರು ಹಾಗೂ ನೇತೃತ್ವವನ್ನು ಬಿಳಕಿ ರುದ್ರಮಠದ ಶ್ರೀ ಚನ್ನಬಸವ ದೇವರು ವಹಿಸಿದ್ದರು.  

ಈ ವೇಳೆ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು, ಗ್ರಾಮದ ಹಿರಿಯರು, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಸೇರಿದಂತೆ ಕುಟುಂಬದ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.