ಮಲ್ಲಟ್ಟಿ-ಸುತಗಟ್ಟಿ ನಡುವೆ ಘಟಪ್ರಭಾ ನದಿಗೆ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಸಚಿವ ಜಾರಕಿಹೊಳಿ ಚಾಲನೆ

ಮಲ್ಲಟ್ಟಿ-ಸುತಗಟ್ಟಿ ನಡುವೆ ಘಟಪ್ರಭಾ ನದಿಗೆ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಸಚಿವ ಜಾರಕಿಹೊಳಿ ಚಾಲನೆ Minister Jarkiholi launches construction of bridge-cum-barrage on Ghataprabha river between Mallatti

ಯಮಕನಮರಡಿ 18: ಮಲ್ಲಟ್ಟಿ-ಸುತಗಟ್ಟಿ ನಡುವೆ ಘಟಪ್ರಭಾ ನದಿಗೆ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಇಂದು ಚಾಲನೆ ನೀಡಿದ್ದು ಈ ಭಾಗದ ಹದಿನೈದಕ್ಕೂ ಹೆಚ್ಚು ಗ್ರಾಮಗಳ ರೈತರ ದೀರ್ಘಕಾಲದ ಬೇಡಿಕೆ ಈಡೇರಿದೆ. ಈ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣದಿಂದ ಮಲ್ಲಟ್ಟಿ ಮತ್ತು ಸುತಗಟ್ಟಿ ಗ್ರಾಮಗಳ ನಡುವಿನ ಸಂಪರ್ಕ ಸುಲಭವಾಗಲಿದ್ದು, ಸಾರಿಗೆ ವ್ಯವಸ್ಥೆಗೆ ಎದುರಾಗುತ್ತಿದ್ದ ದೊಡ್ಡ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.  

ಯಮಕನಮರಡಿ ಕ್ಷೇತ್ರದ ನಾಗನೂರ ಕೆ.ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಟ್ಟಿ ಹಾಗೂ ಸುತಗಟ್ಟಿ ಗ್ರಾಮಗಳ ಜನರ ಬಹುದಿನಗಳ ಬೇಡಿಕೆಯಾಗಿದ್ದ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ 7 ಕೋಟಿ 96 ಲಕ್ಷ ರೂ. ವೆಚ್ಚದ ನೂತನ ಬ್ರಿಜ್ ಕಮ್ ಬ್ಯಾರೇಜ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಒಟ್ಟು 7 ಕೋಟಿ 96 ಲಕ್ಷ ರೂ.ಗಳ ಭಾರಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣದಿಂದ ಕೇವಲ ಸಂಚಾರ ವ್ಯವಸ್ಥೆ ಸುಧಾರಿಸುವುದಷ್ಟೇ ಅಲ್ಲದೆ, ನದಿಯಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದರಿಂದ ಸುತ್ತಮುತ್ತಲಿನ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಸ್ಥಳೀಯ ರೈತರ ಆರ್ಥಿಕ ಪ್ರಗತಿಗೂ ಇದು ಸಹಕಾರಿಯಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.  

ಇನ್ನು ಈ ಬ್ರಿಜ್ ಕಮ್ ಬ್ಯಾರೇಜ್‌ನಿಂದ ಸಂಗ್ರಹವಾಗುವ ನೀರನ್ನು ಸ್ಥಳೀಯ ರೈತರು ತಮ್ಮ ಜಮೀನುಗಳಿಗೆ ಪಂಪ್‌ಸೆಟ್ ಮೂಲಕ ಸುಲಭವಾಗಿ ಬಳಸಿಕೊಳ್ಳಬಹುದು. ನದಿಯಲ್ಲಿ ವರ್ಷಪೂರ್ತಿ ನೀರು ಶೇಖರಣೆಯಾಗುವುದರಿಂದ ರೈತರು ತಮ್ಮ ಪಂಪ್‌ಸೆಟ್‌ಗಳ ಮೂಲಕ ನೇರವಾಗಿ ಜಮೀನಿಗೆ ನೀರು ಹರಿಸಿಕೊಳ್ಳಬಹುದು. ಬ್ಯಾರೇಜ್‌ನಲ್ಲಿ ನೀರು ನಿಲ್ಲುವುದರಿಂದ ಸುತ್ತಮುತ್ತಲಿನ ರೈತರ ಬಾವಿ ಹಾಗೂ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಳವಾಗಲಿದೆ. ರೈತರ ಆರ್ಥಿಕ ಸುಧಾರಣೆಗೆ ಈ ಯೋಜನೆ ದಿಕ್ಸೂಚಿಯಾಗಲಿದೆ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಕಾಮಗಾರಿ ನಿಗದಿತ ಅವಧಿಯೊಳಗೆ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.ಈ ಸಂರ್ಭದಲ್ಲಿ ಬೆಳಗಾವಿಯ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್  44ನೇ ಬೆಟಾಲಿಯನ್‌ನ ಮುಖ್ಯಸ್ಥ ಎಸ್‌. ಜುನಜಾ, ಬೆಳಗಾವಿ ಜಿಲ್ಲಾಧಿಕಾರಿ ಮೊಹಮದ್ ರೋಶನ್, ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಹುಕ್ಕೇರಿ ತಾಪಂ ಇಒ ಪಿ.ಆರ್‌. ಮಲ್ಲಾಡದ ಸೇರಿದಂತೆ ನೀರಾವರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಮುಖಂಡರಾದ ದಯಾನಂದ ಪಾಟೀಲ್, ರಾಜು ದರಗಶೆಟ್ಟಿ, ಕಿರಣ ರಜಪೂತ, ಮಲಗೌಡ ಪಾಟೀಲ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.