ಫೆ.21 ಮತ್ತು 22 ರಂದು ಹಳೆ ಪಿಂಚಣಿ ವಂಚಿತರ ಸಭೆ

ಫೆ.21 ಮತ್ತು 22 ರಂದು ಹಳೆ ಪಿಂಚಣಿ ವಂಚಿತರ ಸಭೆ Meeting of old pensioners on Feb. 21 and 22

ಲೋಕದರ್ಶನ ವರದಿ 

ಹಾರೂಗೇರಿ 20: 2006ರ ಪೂರ್ವದಲ್ಲಿ ನೇಮಕಾತಿ ಹೊಂದಿ ನಂತರ ಅನುದಾನಕ್ಕೊಳಪಟ್ಟ ಶಾಲಾ ಕಾಲೇಜುಗಳ ನೌಕರ ಸಿಬ್ಬಂದಿಗೆ ಹಳೆಯ ಪಿಂಚಣಿ ಜಾರಿಗೊಳಿಸುವಂತೆ ಒತ್ತಾಯಿಸಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಫೆ.21 ಮತ್ತು 22 ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಹಳೆ ಪಿಂಚಣಿ ವೇದಿಕೆ ರಾಜ್ಯ ಕಾನೂನು ಸಲಹೆಗಾರ ಎಸ್‌.ಎಲ್‌.ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

   ಪಟ್ಟಣದ ಶ್ರೀ ಕರೆಸಿದ್ದೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಹಳೆಯ ಪಿಂಚಣಿ ವಂಚಿತರ ಸಭೆ ಫೆ.21 ರಂದು ಶನಿವಾರ ಮಧ್ಯಾಹ್ನ 2ಗಂಟೆಗೆ ಕರೆಸಿದ್ದೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಕರೆಯಲಾಗಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಹಳೆಯ ಪಿಂಚಣಿ ವಂಚಿತರ ಸಭೆಯನ್ನು ಫೆ.22 ರಂದು ಭಾನುವಾರ ಬೆಳಗಾವಿ ಲೇಕ್‌ವ್ಯೂವ್ ಆಸ್ಪತ್ರೆ ಸಮೀಪದ ಬೇಗಂ ಲತೀಪ ಬಾಲಕಿಯರ ಪ್ರೌಢಶಾಲೆಯಲ್ಲಿ ಕರೆಯಲಾಗಿದೆ.  

  ಈ ಸಭೆಗಳಲ್ಲಿ ಪಿಂಚಣಿ ವಂಚಿತರ ವೇದಿಕೆ ರಾಜ್ಯಾಧ್ಯಕ್ಷ ಡಾ.ಪಿ.ಎಸ್‌.ಕೊಕಟನೂರ, ವಿಭಾಗೀಯ ಅಧ್ಯಕ್ಷ ಡಾ.ಆರ್‌.ಎಮ್‌.ಸನದಿ, ಬೆಳಗಾವಿ ಜಿಲ್ಲಾಧ್ಯಕ್ಷ ಆಯ್‌.ಬಿ.ಬಿರಾದಾರ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಬಿ.ಎ.ನಿವಲಗಿ ಹಾಗೂ ಆರ್‌.ವಾಯ್‌.ಬೆಳಗಲಿ ಭಾಗವಹಿಸಿ, ರಾಜ್ಯ ವೇದಿಕೆಯ ಮುಂದಿನ ನಡೆ ಹಾಗೂ ಇಲ್ಲಿಯವರೆಗಿನ ಬೆಳವಣಿಗೆಗಳ ಕುರಿತು ವಿವರಣೆ ನೀಡಲಿದ್ದು, 2006ರ ಪೂರ್ವದಲ್ಲಿ ನೇಮಕಾತಿ ಹೊಂದಿ ನಂತರ ಅನುದಾನಕ್ಕೊಳಪಟ್ಟು ನಿವೃತ್ತಿ ಪಡೆದ ಹಾಗೂ ಹಾಲಿ ಸೇವೆಯಲ್ಲಿರುವ ನೌಕರರು ಸಭೆಗೆ ಹಾಜರಾಗಬೇಕೆಂದು ಹಳೆ ಪಿಂಚಣಿ ವೇದಿಕೆ ರಾಜ್ಯ ಕಾನೂನು ಸಲಹೆಗಾರ ಎಸ್‌.ಎಲ್‌.ಜಾಧವ ತಿಳಿಸಿದ್ದಾರೆ.