ಮದುವೆ ಎಂಬುದು ಪವಿತ್ರ ಬಂಧನ: ಪ್ರಭುಲಿಂಗ ಶರಣರು

Marriage is a sacred bond: Prabhulinga Sharan

ತಾಳಿಕೋಟಿ 17: ವೀರಶೈವ ಲಿಂಗಾಯತ ಧರ್ಮದಲ್ಲಿ ಮದುವೆ ಎಂಬ ಕರ್ಮವು ಬಹಳ ವೈಶಿಷ್ಟತೆಯನ್ನು ಪಡೆದುಕೊಂಡಿದೆ. ಅದು ಕೇವಲ ಒಂದು ಗಂಡು ಮತ್ತು ಹೆಣ್ಣಿನ ನಡುವೆ ಮಾಡಿಕೊಂಡ ಒಪ್ಪಂದವಾಗಿರದೆ ಜೀವನ ಪೂರ್ತಿ ನಿರ್ವಹಿಸುವ ಒಂದು ಜವಾಬ್ದಾರಿ ಹಾಗೂ ಪವಿತ್ರವಾದ ಬಂಧನವಾಗಿದೆ ಎಂದು ಪ್ರವಚನಕಾರ ಹಿಕ್ಕನಗುತ್ತಿ ಲಿಂಗಾಯತ ಮಹಾಮಠದ ಪ್ರಭುಲಿಂಗ ಶರಣರು ಹೇಳಿದರು.  

ಪಟ್ಟಣದ ರಾಜವಾಡೆ ಮೈದಾನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಪುತ್ಥಳಿ ಸ್ಥಾಪನೆಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಚೆನ್ನಮ್ಮಾಜಿ ಜೀವನ ಚರಿತ್ರೆ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ "ಚೆನ್ನಮ್ಮಾಜಿಯ ಮದುವೆ" ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಚೆನ್ನಮ್ಮಳ ಮದುವೆ ಅವಳ 15ನೇ ವಯಸ್ಸಿನಲ್ಲಿ ಕಿತ್ತೂರಿನ ದೇಸಾಯಿ ಮನೆತನದ ಪ್ರಸಿದ್ಧ ರಾಜಾ ಮಲ್ಲಸರ್ಜನನ ಜೊತೆಯಲ್ಲಿ ನೆರವೇರಿತು. ಇದರ ಪ್ರತೀಕವಾಗಿ ಇಂದಿನ ಪ್ರವಚನದ ಈ ವೇದಿಕೆಯಲ್ಲಿ ಎರಡು ಜೋಡಿಗಳ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಲಾಗಿದೆ, ಸತಿ-ಪತಿಗಳು ಪರಸ್ಪರ ಅರಿತು ಬಾಳಿದರೆ ಬಾಳು ಬಂಗಾರ ಹಾಗೂ ಅರ್ಥಪೂರ್ಣವಾಗುತ್ತದೆ ಎಂದರು.  

ರಾಜ ವಾಡೆಯ ಪ್ರತಿಷ್ಠಿತ ವೀರನಗೌಡ ದೊಡ್ಡಪ್ಪಗೌಡ ಪಾಟೀಲ ಇವರ ಮೊಮ್ಮಕ್ಕಳು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಸಿ.ಎಸ್‌.ಪಾಟೀಲ, ಅಧ್ಯಕ್ಷೆ ನೀಲಮ್ಮ ಎಸ್‌.ಪಾಟೀಲ, ಉಪಾಧ್ಯಕ್ಷ ಕಲ್ಲಪ್ಪ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಕೋಟಿ, ಕಾರ್ಯದರ್ಶಿ ಬಿ.ಕೆ. ಪಾಟೀಲ, ಸಮಾಜದ ಗಣ್ಯರು ಹಿರಿಯರು ಹಾಗು ಮಹಿಳೆಯರು ಇದ್ದರು. ಖಾಸ್ಗತೇಶ್ವರ ಸಂಗೀತ ಶಾಲೆಯ ದೀಲೀಪಸಿಂಗ್ ಹಜೇರಿ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.