ರೈತರಿಗೆ ರಸಗೊಬ್ಬರ ಕೊರತೆಯ ಸಮಸ್ಯೆ ಪರಿಹರಿಸಲು ಸಂಸದ ಈ.ತುಕಾರಾಮ್ ಪ್ರಯತ್ನ

ರೈತರಿಗೆ ರಸಗೊಬ್ಬರ ಕೊರತೆಯ ಸಮಸ್ಯೆ ಪರಿಹರಿಸಲು ಸಂಸದ ಈ.ತುಕಾರಾಮ್ ಪ್ರಯತ್ನ MP E. Tukaram's efforts to solve the problem of fertilizer shortage for farmers

ಬಳ್ಳಾರಿ 24 :ಜಿಲ್ಲೆಯ ರೈತರಿಗೆ ಮುಂಗಾರು ಬಿತ್ತನೆಯ ಬೇಡಿಕೆಗೆ ತಕ್ಕಂತೆ ಯೂರಿಯಾ ಮತ್ತು ಇತರೆ ರಸಗೊಬ್ಬರ ಪೂರೈಕೆಯಾಗದೇ ಕೃಷಿ ಚಟುವಟಿಕೆಗಳಿಗೆ ತುಂಬಾ ಅನಾನುಕೂಲ ಆಗುತ್ತಿರುವ ಬಗ್ಗೆ ಅಖಂಡ ಬಳ್ಳಾರಿ ಜಿಲ್ಲೆಯ ಸಂಸದರಾದ ಈ.ತುಕಾರಾಮ್ ಅವರು ಗುರುವಾರ ನವದೆಹಲಿಯಲ್ಲಿ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. 

ಬಳ್ಳಾರಿ ಜಿಲ್ಲೆಯ ರೈತ ಸಮುದಾಯಕ್ಕೆ ಯೂರಿಯಾ ಮತ್ತು ಇತರೆ ರಸಗೊಬ್ಬರಗಳನ್ನು ಟ್ರ್ಯಾಕ್ ಸಂಖ್ಯೆ:08 ರಲ್ಲಿ ಮಾತ್ರ ಇಳಿಸಲಾಗುತ್ತಿರುವುದರಿಂದ ರೈತರಿಗೆ ಯಾವುದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಮನವರಿಕೆ ಮಾಡಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ಕೋರಿದರು. 

ಇದಕ್ಕೆ ಸಚಿವ ವಿ.ಸೋಮಣ್ಣ ಅವರು ಸಂಸದ ಈ.ತುಕಾರಾಮ್ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಕೂಡಲೇ ಬಳ್ಳಾರಿ ರೈಲ್ವೇ ನಿಲ್ದಾಣದ (ಜಂಕ್ಷನ್) ಟ್ರ್ಯಾಕ್ ಸಂಖ್ಯೆ: 06 ಮತ್ತು 08 ರಲ್ಲಿ ರಸಗೊಬ್ಬರಗಳನ್ನು ಇಳಿಸುವುದಕ್ಕೆ (ಅನ್‌ಲೋಡಿಂಗ್) ಅನುಮತಿ ನೀಡಿ ಬಳ್ಳಾರಿ ಜಿಲ್ಲೆಯ ಎಲ್ಲಾ ರೈತರಿಗೆ ಬೇಡಿಕೆ ಇರುವ ರಸಗೊಬ್ಬರ ಪೂರೈಕೆಗೆ ಸಮಸ್ಯೆಯಾಗದಂತೆ ಪರಿಹರಿಸುವುದಾಗಿ ತಿಳಿಸಿದರು.