ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ರಾಜುಗೌಡ ಹಾಗೂ ಅಧಿಕಾರಿಗಳು ಭೇಟಿ ಪರೀಶೀಲನೆ

ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ರಾಜುಗೌಡ ಹಾಗೂ ಅಧಿಕಾರಿಗಳು ಭೇಟಿ ಪರೀಶೀಲನೆ MLA Rajugowda and officials visit crop damage area to inspect

ದೇವರಹಿಪ್ಪರಗಿ 28: ತಾಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಗೆ ನೀರು ಜಮೀನಿಗೆ ನುಗ್ಗಿ ತೊಗರಿ ಹಾಗೂ ಹತ್ತಿ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ, ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಕ್ಷಣ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡುವಂತೆ ತಹಶೀಲ್ದಾರ್ ಪ್ರಕಾಶ ಸಿಂದಗಿ ಹಾಗೂ ಕೃಷಿ ಇಲಾಖೆಯ ಅಧಿಕಾರಿ ಶರಣಗೌಡ ಪಾಟೀಲ ಅವರಿಗೆ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ  ಸೂಚಿಸಿದರು.

ರವಿವಾರ ಸಂಜೆ ತಾಲೂಕಿನ ಸಾತಿಹಾಳ, ಬೈರವಾಡಗಿ,ಮಾರ್ಕಬಿನಹಳ್ಳಿ ಹಾಗೂ ದೇವರಹಿಪ್ಪರಗಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ನಿರಂತರ ಮಳೆಗೆ ಬೆಳೆ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ ಅವರು, ಬೆಳೆಯ ಮೇಲೆ ನೀರು ನಿಂತಿರುವಾಗಲೇ ಸಮೀಕ್ಷೆ ಮಾಡಬೇಕು. ಅಧಿಕಾರಿಗಳು ವಿಳಂಬ ಮಾಡಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದರು.ನೀರು ನುಗ್ಗಿ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ. ಖುದ್ದು ಕ್ಷೇತ್ರಕ್ಕೆ ಭೇಟಿ ನೀಡಿದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ರೈತರ ನೋವು ಆಲಿಸಿದರು.ಪ್ರತಿ ವರ್ಷ ಡೋಣಿ ನದಿ ತೀರದ ಪ್ರವಾಹದಿಂದ ಹಾಗೂ ಅತಿವೃಷ್ಟಿಯಿಂದ ನಮ್ಮ ಬೆಳೆ ನಾಶವಾಗುತ್ತಿದೆ. ಈ ಬಾರಿ ಸಾವಿರಾರು ಎಕರೆಗಟ್ಟಲೆ ಜಮೀನಿಗೆ ಹಾಕಿ ದುಡ್ಡು ಹೂಡಿದ್ದೇವೆ. ಈಗ ಬೆಳೆ ಕೊಯ್ಯುವ ಹೊತ್ತಿಗೆ ನೀರು ನುಗ್ಗಿ ಹಾಗೂ ನಿರಂತರ ಮಳೆಗೆ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ. ಸರ್ಕಾರ ಸಹಾಯ ಮಾಡಬೇಕು ಎಂದು ರೈತರು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ  ಅವರು, ಬೆಳೆ ಹಾನಿಗೆ ಶೀಘ್ರ ಪರಿಹಾರ ಒದಗಿಸಲು ಸರ್ಕಾರದ ಮಟ್ಟದಲ್ಲಿ ವಿಶೇಷ ಅನುದಾನಕ್ಕಾಗಿ ಪ್ರಯತ್ನಿಸಲಾಗುವುದು. ರೈತರು ಕೂಡ ತಮ್ಮ ಹಾನಿಯ ಮಾಹಿತಿ ಸರಿಯಾಗಿ ಅಧಿಕಾರಿಗಳಿಗೆ ನೀಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಹಣಮಂತರಾಯಗೌಡ ಬಿರಾದಾರ, ವೀರೇಶ ಕುದರಿ,ನಾಗೇಶ ಅವಟಿ, ಸುನಿಲ್ ಮಾಗಿ, ಮಾಂತೇಶಗೌಡ ಪಾಟೀಲ, ಶಿವಾನಂದ ಮಾವಿನಗಿಡದ, ಆಡಳಿತ ಅಧಿಕಾರಿಗಳಾದ ಮಹಾದೇವಿ ಅಲ್ಲೊಳ್ಳಿ, ಅನಿಲ್ ರಾಠೋಡ ಸೇರಿದಂತೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.