‘ನಮ್ಮ ಕ್ಲಿನಿಕ್‌’ ಉದ್ಘಾಟಿಸಿದ ಶಾಸಕ ನಾರಾ ಭರತ್ ರೆಡ್ಡಿ

‘ನಮ್ಮ ಕ್ಲಿನಿಕ್‌’ ಉದ್ಘಾಟಿಸಿದ ಶಾಸಕ ನಾರಾ ಭರತ್ ರೆಡ್ಡಿ MLA Nara Bharat Reddy inaugurated 'Namma Clinic'

ಸಾಮಾನ್ಯ ರೋಗಿಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ಪಡೆಯಲು ಸಹಕಾರಿ 

ಬಳ್ಳಾರಿ,ಜು.24: ನಗರ ಪ್ರದೇಶ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ‘ನಮ್ಮ ಕ್ಲಿನಿಕ್‌’ ಸಾರ್ವಜನಿಕರಿಗೆ ಗುಣಮಟ್ಟದ ಸೇವೆಗೆ ಆದ್ಯತೆ ನೀಡಲಿದ್ದು, ಸಾಮಾನ್ಯ ರೋಗಿಗಳಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ಪಡೆಯಲು ಸಹಕಾರಿಯಾಗಲಿವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕರಿಮಾರೆಮ್ಮ ಕಾಲೋನಿಯಲ್ಲಿ ಆರಂಭಿಸಲಾದ ನೂತನ ‘ನಮ್ಮ ಕ್ಲಿನಿಕ್‌’ ಅನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಸಾರ್ವಜನಿಕರು ಆರೋಗ್ಯ ಸಮಸ್ಯೆಗಳಿಗೆ ದೂರದೆಡೆಗೆ ಓಡಾಡಬಾರದು. ನಗರದ ಬಡ, ಆರ್ಥಿಕವಾಗಿ ಹಿಂದುಳಿದ ಸಮುದಾಯದವರಿಗೆ ತಮ್ಮ ವ್ಯಾಪ್ತಿಯಲ್ಲಿ ಉಚಿತವಾಗಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ‘ನಮ್ಮ ಕ್ಲಿನಿಕ್‌’ಗಳಲ್ಲಿ ಒದಗಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಈ ಕಾಲೋನಿಯಲ್ಲಿಯೇ ಸುಮಾರು 5 ಕೋಟಿ ರೂ. ವೆಚ್ಚದ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ತಿಳಿಸಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಗೆ 2023-24 ನೇ ಸಾಲಿಗೆ 12 ನಮ್ಮ ಕ್ಲಿನಿಕ್ ಮತ್ತು 2024-25 ನೇ ಸಾಲಿಗೆ ಬಳ್ಳಾರಿ ನಗರದಲ್ಲಿ 06, ಸಿರುಗುಪ್ಪ 01 ಮತ್ತು ಕಂಪ್ಲಿ 01 ಸೇರಿ ಒಟ್ಟು 08 ನಮ್ಮ ಕ್ಲಿನಿಕ್‌ಗಳು ಮಂಜೂರಾಗಿವೆ. ಇಂದು ಬಳ್ಳಾರಿ ನಗರದಲ್ಲಿ 03 ಲೋಕಾರೆ​‍್ಣಗೊಂಡಿದ್ದು, ಒಟ್ಟು 20 ನಮ್ಮ ಕ್ಲಿನಿಕ್ ಗಳು ಬಳ್ಳಾರಿ ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯ ಸೇವೆಗಳಿಗೆ ಅಣಿಯಾಗುತ್ತಿವೆ. 10 ರಿಂದ 20 ಸಾವಿರ ಜನಸಂಖ್ಯೆಗನುಗುಣವಾಗಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು. 

ಸೋಮವಾರದಿಂದ ಶನಿವಾರದವರೆಗೆ ನಮ್ಮ ಕ್ಲಿನಿಕ್‌ಗಳಲ್ಲಿ ಸೇವೆಗಳು ಲಭ್ಯವಿದ್ದು, ಇಲ್ಲಿ ಒಬ್ಬ ವೈದ್ಯಾಧಿಕಾರಿ, ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ನಿಷಿಯನ್ ಹಾಗೂ ಡಿ-ದರ್ಜೆ ನೌಕರರು ಇರಲಿದ್ದಾರೆ ಎಂದು ಹೇಳಿದರು. 

ನಂತರ ನಗರದ ಶ್ರೀರಾಂಪುರ ಕಾಲೋನಿ, ಎ.ಪಿ.ಎಮ್‌.ಸಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ಸೇರಿದಂತೆ ಒಟ್ಟು 3 ‘ನಮ್ಮ ಕ್ಲಿನಿಕ್‌’ ಗಳನ್ನು ಉದ್ಘಾಟಿಸಲಾಯಿತು. 

*ಅನಿಸಿಕೆ:* 

ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ನಗರದ ಆರೋಗ್ಯ ಕೇಂದ್ರಗಳಿಗೆ ಹೋಗುತ್ತಿದ್ದೇವು. ಈಗ ನಮ್ಮ ಏರಿಯಾದಲ್ಲಿ ‘ನಮ್ಮ ಕ್ಲಿನಿಕ್‌’ ಆರಂಭವಾಗಿರುವುದರಿಂದ ತುಂಬಾ ಸಂತೋಷವಾಗುತ್ತಿದೆ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. 

- ಚಂದ್ರಕಲಾ, ನಿವಾಸಿ, ಕರಿಮಾರೆಮ್ಮ ಕಾಲೋನಿ, ಬಳ್ಳಾರಿ ನಗರ. 

ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ  ಕಟ್ಟಡವನ್ನು ಉದ್ಘಾಟನೆಗೊಳಿಸಿದ್ದಾರೆ. ನಮ್ಮ ಕಾಲೋನಿಯಲ್ಲಿಯೇ ಇರುವುದರಿಂದ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ತುಂಬಾ ಅನುಕೂಲವಾಗಲಿದೆ. 

- ಚಾಂದಿನಿ, ನಿವಾಸಿ, ಕರಿಮಾರೆಮ್ಮ ಕಾಲೋನಿ, ಬಳ್ಳಾರಿ ನಗರ.  

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಮಿಂಚು ಶ್ರೀನಿವಾಸ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್‌.ಬಸರೆಡ್ಡಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಸುದ್ ಬೇಗಂ ಸೇರಿದಂತೆ ನಮ್ಮ ಕ್ಲಿನಿಕ್‌ಗಳ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.