ಹಲಸಿ ಗ್ರಾಮದ ನೀರಿನ ಸಮಸ್ಯೆಗೆ ಸ್ಪಂದಿಸಿದ ಶಾಸಕ ಹಲಗೇಕರ

ಹಲಸಿ ಗ್ರಾಮದ ನೀರಿನ ಸಮಸ್ಯೆಗೆ ಸ್ಪಂದಿಸಿದ ಶಾಸಕ ಹಲಗೇಕರ MLA Halagekar responds to water problem in Halasi village

ಲೋಕದರ್ಶನ ವರದಿ 

ಖಾನಾಪುರ 25: ಖಾನಾಪುರ ತಾಲೂಕಿನ ಪ್ರಸಿದ್ಧ ಐತಿಹಾಸಿಕ ಕ್ಷೇತ್ರವಾಗಿರುವ ಹಲಸಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ದಿಸೆಯಲ್ಲಿ ಬುಧವಾರ ಮಹತ್ವದ ಹೆಜ್ಜೆ ಇಡಲಾಗಿದೆ.  

ಶಾಸಕ ವಿಠ್ಠಲ ಹಲಗೇಕರ ಅವರ ಆದೇಶದ ಮೇರೆಗೆ ಗ್ರಾಮದಲ್ಲಿ ಹೊಸ ಬೋರ್ ವೆಲ್ ತೋಡುವ ಕಾಮಗಾರಿ ಯಶಸ್ವಿಯಾಗಿ ಆರಂಭಗೊಂಡಿದ್ದು, ಗಂಗಾ ತಾಯಿಯ ಕೃಪೆಯಿಂದ ನೀರು ಲಭ್ಯವಾಗಿರುವುದು ಗ್ರಾಮಸ್ಥರಲ್ಲಿ ಅಪಾರ ಸಂತಸ ಮೂಡಿಸಿದೆ. ಹಲವು ವರ್ಷಗಳಿಂದ ಎದುರಾಗುತ್ತಿದ್ದ ಕುಡಿಯುವ ನೀರಿನ ತೀವ್ರ ಸಮಸ್ಯೆಗೆ ಇದೀಗ ಶಾಶ್ವತ ಪರಿಹಾರ ದೊರಕುವ ವಿಶ್ವಾಸ ವ್ಯಕ್ತವಾಗಿದೆ.  

ಹಲಸಿ ಗ್ರಾಮವು ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿದ ಪ್ರದೇಶವಾಗಿದ್ದು, ವರ್ಷಪೂರ್ತಿ ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಉಂಟಾಗುತ್ತಿದ್ದ ನೀರಿನ ಕೊರತೆ ಗ್ರಾಮಸ್ಥರಿಗೆ ಮಾತ್ರವಲ್ಲದೆ, ಆಗಮಿಸುವ ಭಕ್ತರಿಗೂ ತೊಂದರೆ ಉಂಟುಮಾಡುತ್ತಿತ್ತು. ಈ ಪರಿಸ್ಥಿತಿಯನ್ನು ಮನಗಂಡ ಶಾಸಕರು ತಕ್ಷಣ ಕ್ರಮ ಕೈಗೊಂಡು ಬೋರ್ ವೆಲ್ ವ್ಯವಸ್ಥೆ ಒದಗಿಸಿರುವುದು ಶ್ಲಾಘನೀಯವಾಗಿದೆ.  

ಹಲಸಿ ಗ್ರಾಮದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಶಾಸಕರು ಹೆಚ್ಚಿನ ಒತ್ತು ನೀಡುತ್ತಿದ್ದು, ರಸ್ತೆ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಳ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಮುಖ ಕಾಮಗಾರಿಗಳು ಇದೀಗ ಹಂತಹಂತವಾಗಿ ಕಾರ್ಯರೂಪಕ್ಕೆ ಬರುತ್ತಿರುವುದು ಗ್ರಾಮಸ್ಥರಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದೆ.  

ಗ್ರಾಮದ ಅಭಿವೃದ್ಧಿಗೆ ಈ ರೀತಿಯ ಬದ್ಧತೆ ಮುಂದುವರಿದರೆ, ಹಲಸಿ ಗ್ರಾಮವು ಮುಂದಿನ ದಿನಗಳಲ್ಲಿ ಮಾದರಿ ಗ್ರಾಮವಾಗಿ ಹೊರಹೊಮ್ಮುವುದು ಖಚಿತ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.