ಇನ್ನೂ ಕಡಿಮೆಯಾಗದ ಕೃಷ್ಣಾ ನದಿ ನೀರು: ರಸ್ತೆಗಳು ಜಲಾವೃತ

ಇನ್ನೂ ಕಡಿಮೆಯಾಗದ ಕೃಷ್ಣಾ ನದಿ ನೀರು: ರಸ್ತೆಗಳು ಜಲಾವೃತ Krishna River water not receding: Roads flooded

ಜಮಖಂಡಿ 25: ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಕೃಷ್ಣ ಅಚ್ಚು ಕಟ್ಟು ಪ್ರದೇಶದಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ಸುಮಾರು 2 ಲಕ್ಷ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದೆ. ಇದರಿಂದಾಗಿ ತಾಲೂಕಿನ ಹಲವು ಗ್ರಾಮಗಳ ರಸ್ತೆಗಳು ಜಲಾವೃತವಾಗಿವೆ.  

ಜಂಬಗಿಯಿಂದ ಸಾವಳಗಿಗೆ ಹೋಗುವ ಮಾರ್ಗದ ಮಧ್ಯ ನದಿಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಟಕ್ಕಳಕಿ, ಟಕ್ಕೋಡ ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಬೇರೆ ಊರುಗಳಿಗೆ ಹೋಗಬೇಕಾದವರು ಸಾವಳಗಿ ರಸ್ತೆಯ ಮುಖಾಂತರ ಅಥವಾ ಹಿರೇಪಡಸಲಗಿ ಮುಖಾಂತರ ಸಂಚರಿಸುವ ಅನಿವಾರ್ಯತೆ ಉಂಟಾಗಿದೆ. ಅದರಂತೆ ಗೌಡ್ರು ಗಡ್ಡೆ ಪ್ರದೇಶದ ರಸ್ತೆ ಜಲಾವೃತವಾಗಿದೆ. ತಾಲೂಕಿನ ಮುತ್ತೂರು ನಡುಗಡ್ಡೆ ಪ್ರದೇಶ ಹಾಗೂ ತುಬಚಿ ಗ್ರಾಮದ ಹಲವು ರಸ್ತೆಗಳು ಜಲಾವೃತಗೊಂಡಿವೆ. 

ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದರಿಂದ ರಾಜಾಪುರ ಬ್ಯಾರೇಜ್ ನಿಂದ 179000 ಕ್ಯುಸೆಕ್ ಧೂದಗಂಗಾದಿಂದ 43000 ಕಲ್ಲೂರು ಮ್ಯಾರೇಜ್‌ದಿಂದ 2.21 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ತಾಲೂಕಿನಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಇನ್ನೆರಡು ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಎರಡು ದಿನಗಳಲ್ಲಿ ಪ್ರವಾಹ ಇಳಿಮುಖವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.