ಖಾಸ್ಗತೇಶ್ವರ ಜಾತ್ರೆ: ಸಪ್ತ ದಿನದ ಭಜನೆ ಆರಂಭ

ಖಾಸ್ಗತೇಶ್ವರ ಜಾತ್ರೆ: ಸಪ್ತ ದಿನದ ಭಜನೆ ಆರಂಭ  Khasgateshwar Fair: Seven-day bhajans begin

ತಾಳಿಕೋಟೆ 01: ಪಟ್ಟಣದ ಆರಾಧ್ಯ ದೈವ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರೆಯಂಗವಾಗಿ ಸಪ್ತಭಜನಾ ಕಾರ್ಯಕ್ರಮಕ್ಕೆ ಶ್ರೀಮಠದ ಪೀಠಾಧಿಪತಿ ಬಾಲಶಿವಯೋಗಿ ಸಿದ್ಧಲಿಂಗದೇವರು ಸೋಮವಾರ ಚಾಲನೆ ನೀಡಿದರು.  

 ಏಳುದಿನಗಳ ಕಾಲ ಅಹೋರಾತ್ರಿ ಜರುಗುವ ಭಜನಾ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ನೂರಾರು ಗ್ರಾಮಗಳ ಭಜನಾ ಮಂಡಳಿ ಪಾಲ್ಗೊಳ್ಳುತ್ತಿದ್ದಾರೆ. ಶ್ರೀಗಳ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 6ಘಂಟೆಗೆ ಖಾಸ್ಗತೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿಯನ್ನು ವಿಶ್ವನಾಥ ವಿರಕ್ತಮಠ ನೆರವೇರಿಸಿದರು. ಬೆಳಿಗ್ಗೆ ಮತ್ತು ಸಂಜೆ ನಿಜಗುಣ ಶಿವಯೋಗಿಗಳ ಪ್ರವಚನವು ನಿಜಗುಣ ಶಿವಯೋಗಿಗಳ ಆನಂದಾಶ್ರಮದ ಶಾಸ್ತ್ರ ಬಳಗದವರಿಂದ ನಡೆಯಿತು.   

 ಅಲಂಕೃತಗೊಂಡ ಪಟ್ಟಣ ಹಾಗೂ ದೇವಸ್ಥಾನ: ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನದ ಆವರಣ ಒಳಹೊರಗೆ ಬಣ್ಣಬಣ್ಣದ ವಿದ್ದುದ್ದೀಪಗಳ ಸರಮಾಲೆಗಳಿಂದ ಝಗಮಗಿಸುತ್ತ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ದೇವಸ್ಥಾನದ ಆವರಣದಿಂದ ಹಿಡಿದು ಕತ್ರಿ ಬಜಾರ; ವಿಠ್ಠಲ ಮಂದಿರ ದೇವಸ್ಥಾನ ರಸ್ತೆ, ಶಿವಾಜಿ ವೃತ್ತ, ರಾಣಾಪ್ರತಾಪವೃತ್ತ ಬಸ್ ನಿಲ್ದಾನ, ಬಸವೇಶ್ವರ ವೃತ್ತದವರೆಗೆ ದ್ವಿಭಾಜಕ ಎರಡುಬದಿಯ ಅಂಗಡಿಗಳು ದೀಪಾಲಂಕೃತಗೊಂಡಿವೆ, ಬೀದಿಗಳಲ್ಲಿ ದೊಡ್ಡದೊಡ್ಡ ಕಮಾನುಗಳು ತಲೆಯೆತ್ತಿ ನಿಂತು ಭಕ್ತರನ್ನು ಆದರಿಸಿ ಕೈಮಾಡಿ ಕರೆಯುತ್ತಿವೆ. ಅಜ್ಜನ ಜಾತ್ರೆಗೆ ಮೂವತ್ತು ಸಾವಿರಕ್ಕೂ ಅಧಿಕ ಭಕ್ತ ಸಮೂಹ ರಾಜ್ಯದ ಮೂಲೆಮೂಲೆಗಳಿಂದ ಹೊರರಾಜ್ಯಗಳಿಂದಲೂ ಬರುತ್ತಾರೆ