ಕೆಎಂಎಫ್ ನೂತನ ಅಧ್ಯಕ್ಷರಾಗಿ ಕೆ. ರಾಘವೇಂದ್ರ ಹಿಟ್ನಾಳ್

ಕೆಎಂಎಫ್ ನೂತನ ಅಧ್ಯಕ್ಷರಾಗಿ ಕೆ. ರಾಘವೇಂದ್ರ ಹಿಟ್ನಾಳ್  K. Raghavendra Hitnal is the new president of KMF

ಬಳ್ಳಾರಿ  25: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಕೆ.ರಾಘವೇಂದ್ರ ಹಿಟ್ನಾಳ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. 

ಹೀಗಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ ನಿಗದಿಯಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಎನ್‌.ಸತ್ಯನಾರಾಯಣ ಮಾತ್ರವೇ ನಾಮಪತ್ರ ಸಲ್ಲಿಸಿದರು. ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ, ಬಳ್ಳಾರಿ ಉಪ-ವಿಭಾಗಾಧಿಕಾರಿ ಪ್ರಮೋದ್ ಘೋಷಿಸಿದರು. ಕೆಎಂಎಫ್‌ನ ಮಾಜಿ ಅಧ್ಯಕ್ಷ ಭೀಮನಾಯ್ಕ ಚುನಾವಣೆಯಿಂದ ದೂರ ಉಳಿದದ್ದು ಕಂಡು ಬಂದಿತು. ಒಕ್ಕೂಟದ ಒಟ್ಟು 12 ನಿರ್ದೇಶಕ ಸ್ಥಾನಗಳಲ್ಲಿ ಹಿಟ್ನಾಳ್ 7 ಮತ್ತು ಭೀಮನಾಯ್ಕ 5 ನಿರ್ದೇಶಕರ ಬಲ ಹೊಂದಿದ್ದರು.ಕರ್ನಾಟಕ ಸರ್ಕಾರ ರಾಘವೇಂದ್ರ ಕೆ.ಹಿಟ್ನಾಳ್ ಅವರನ್ನು ಒಕ್ಕೂಟಕ್ಕೆ ಎರಡು ದಿನಗಳ ಹಿಂದೆಯಷ್ಟೇ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿತ್ತು. ಹೀಗಾಗಿ ಹಿಟ್ನಾಳ್ ಸಂಖ್ಯಾ ಬಲ 8 ಕ್ಕೆ ಏರಿದ್ದರಿಂದ ಮತ್ತು ಕೆ.ರಾಘವೇಂದ್ರ ಹಿಟ್ನಾಳರಿಗೆ ಬಳ್ಳಾರಿ ಜಿಲ್ಲೆಯ ಕೆಲ ಶಾಸಕರು ಮತ್ತು ಮುಖ್ಯಮಂತ್ರಿಗಳ ಬೆಂಬಲ ಇತ್ತು. 

ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷರಾಗಿ ಆಯ್ಕೆಯಾದ  ಘೋಷಣೆಯಾಗುತ್ತಿದ್ದಂತೆ ಕೆಎಂಎಫ್ ಕಚೇರಿ ಮುಂದೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.-