ಶಿವಾಜಿ ಮಹಾರಾಜರ ಆಡಳಿತದಲ್ಲಿ ನ್ಯಾಯ, ಸಮಾನತೆ ಮತ್ತು ಧಾರ್ಮಿಕ ಸಹಿಷ್ಣುತೆ ಮಾದರಿಯಾಗಿತ್ತು: ವಿಧಾನ ಪರಿಷತ್ ಶಾಸಕ ಎಫ್‌.ಎಚ್‌.ಜಕ್ಕಪ್ಪನವರ

ಶಿವಾಜಿ ಮಹಾರಾಜರ ಆಡಳಿತದಲ್ಲಿ ನ್ಯಾಯ, ಸಮಾನತೆ ಮತ್ತು ಧಾರ್ಮಿಕ ಸಹಿಷ್ಣುತೆ ಮಾದರಿಯಾಗಿತ್ತು: ವಿಧಾನ ಪರಿಷತ್ ಶಾಸಕ ಎಫ್‌.ಎಚ್‌.ಜಕ್ಕಪ್ಪನವರ Justice, equality and religious tolerance were exemplary in Shivaji Maharaj's rule: Legislative Coun


ಧಾರವಾಡ   19:  ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಬ್ಬ ಶೂರ ಯೋಧರು ಮಾತ್ರವಲ್ಲದೇ, ಇಡೀ ಸಮಾಜಕ್ಕೆ ದಾರಿ ತೋರಿದ ಸಾಮಾಜಿಕ ಹರಿಕಾರರು. ತಮ್ಮ ಆಡಳಿತದಲ್ಲಿ ನ್ಯಾಯ, ಸಮಾನತೆ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಮೆರೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಹೆಜ್ಜೆ ಇಟ್ಟವರು ಎಂದು ವಿಧಾನ ಪರಿಷತ್ ಶಾಸಕರಾದ ಎಫ್‌.ಎಚ್‌.ಜಕ್ಕಪ್ಪನವರ ಅವರು ಹೇಳಿದರು.  ಅವರು ಇಂದು (ಫೆ.19) ಮಧ್ಯಾಹ್ನ ಭಾರತ ಪ್ರೌಢಶಾಲಾ ಆವರಣದಲ್ಲಿರುವ ಮರಾಠ ವಿದ್ಯಾ ಪ್ರಸಾರಕ ಮಂಡಳದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಇಂದಿನ ಮಕ್ಕಳು ಶಿವಾಜಿ ಮಹಾರಾಜರ ಬಗ್ಗೆ ತಿಳಿದುಕೊಳ್ಳುವುದು ಅತಿ ಅವಶ್ಯಕ. ಅವರ ಜೀವನ ಕಥೆಗಳಲ್ಲಿ ಧೈರ್ಯ, ಆತ್ಮವಿಶ್ವಾಸ, ದೇಶಭಕ್ತಿ, ಶಿಸ್ತು ಮತ್ತು ಮೌಲ್ಯಗಳ ಪಾಠ ಅಡಗಿದೆ. ಇತಿಹಾಸವನ್ನು ತಿಳಿದುಕೊಳ್ಳುವುದರಿಂದ ಮಕ್ಕಳಲ್ಲಿ ಸ್ವಾಭಿಮಾನ ಮತ್ತು ದೇಶಪ್ರೇಮ ಬೆಳೆಸಬಹುದು. ನಮ್ಮ ಭವಿಷ್ಯದ ಪೀಳಿಗೆಗೆ ಸರಿಯಾದ ದಾರೀದೀಪವಾಗಲು ಶಿವಾಜಿ ಮಹಾರಾಜರ ಆದರ್ಶಗಳು ಪ್ರೇರಣೆಯಾಗುತ್ತವೆ ಎಂದು ಅವರು ಹೇಳಿದರು.  

ಶಿವಾಜಿ ಮಹಾರಾಜರು ಯುದ್ಧದಲ್ಲಿ ಅಪಾರ ಧೈರ್ಯ ತೋರಿದ ಯೋಧರಾಗಿದ್ದರು, ಮಾನವೀಯ ಮೌಲ್ಯಗಳಲ್ಲಿ ಅತ್ಯುನ್ನತರು. ಅವರ ಆಡಳಿತದಲ್ಲಿ ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರಿಗೂ ಅವಕಾಶ ಇತ್ತು. ವಿವಿಧ ಧರ್ಮಗಳ ಮತ್ತು ಸಮುದಾಯಗಳ ಜನರಿಗೆ ಸೇನೆಯಲ್ಲಿ ಹಾಗೂ ಆಡಳಿತದಲ್ಲಿ ಸ್ಥಾನವನ್ನು ನೀಡಿದವರು. ಇದರಿಂದ ಜಾತ್ಯಾತೀತ ಮತ್ತು ಸಮಾನತೆಯ ಸಮಾಜವನ್ನು ರೂಪಿಸುವ ದಿಕ್ಕಿನಲ್ಲಿ ಅವರು ಹೆಜ್ಜೆ ಇಟ್ಟಿದ್ದರು ಎಂದು ಹೇಳಿದರು. ಶಿವಾಜಿ ಮಹಾರಾಜರು ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ತಮ್ಮ ಸೇನೆಯಲ್ಲಿ ಮತ್ತು ಆಡಳಿತದಲ್ಲಿ ವಿವಿಧ ಧರ್ಮಗಳ ಜನರಿಗೆ ಸಮಾನ ಅವಕಾಶ ನೀಡಿದ್ದರು. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವ ಸಮಾನ ಮನೋಭಾವ ಅವರಲ್ಲಿತ್ತು ಎಂದು ಅವರು ತಿಳಿಸಿದರು. 

ದೇಶಭಕ್ತಿ ಎಂದರೆ ಕೇವಲ ಯುದ್ಧವಲ್ಲ, ಜನರ ರಕ್ಷಣೆ, ನ್ಯಾಯ ಮತ್ತು ಧರ್ಮವನ್ನು ಕಾಪಾಡುವುದು ಎಂಬುದನ್ನು ಅವರು ತೋರಿಸಿದ್ದರು. ತಮ್ಮ ಪ್ರಜೆಗಳನ್ನು ತನ್ನ ಕುಟುಂಬದವರಂತೆ ನೋಡಿಕೊಂಡ ಮಹಾನ್ ರಾಜರು ಅವರು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಮಾತನಾಡಿ, ಶಿವಾಜಿ ಮಹಾರಾಜರ ಶೌರ್ಯ, ಸಾಹಸ ಮತ್ತು ದೇಶಭಕ್ತಿ ಇಂದಿಗೂ ಅಜರಾಮರ. 17ನೇ ಶತಮಾನದಲ್ಲಿ ಕಟ್ಟಿದ ಹಿಂದೂ ಸ್ವರಾಜ್ಯವು ಕೇವಲ ಒಂದು ಸಾಮ್ರಾಜ್ಯವಲ್ಲ, ಅದು ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಸಂಕೇತವಾಗಿತ್ತು ಎಂದು ಅವರು ಹೇಳಿದರು. 

ಪೋಲಿಸ್ ತರಬೇತಿ ಶಾಲೆಯ ಪೋಲಿಸ್ ಅಧೀಕ್ಷಕ ಮಹದೇವಪ್ಪ ಯಾದವಾಡ ಅವರು ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಸಾಧನೆಗಳ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಧೈರ್ಯ, ಚಾತುರ್ಯ ಮತ್ತು ದೃಢಸಂಕಲ್ಪದಿಂದ ಮಹಾ ಸಾಮ್ರಾಜ್ಯವನ್ನು ನಿರ್ಮಿಸಿದರು ಎಂದು ಹೇಳಿದರು. ಶಿವಾಜಿ ಮಹಾರಾಜರನ್ನು ಮಹಾನ್ ನಾಯಕನನ್ನಾಗಿ ರೂಪಿಸಿದವರು ಅವರ ತಾಯಿ ಜಿಜಾಬಾಯಿ. ಅವರು ಬಾಲ್ಯದಿಂದಲೇ ಧೈರ್ಯ, ಧರ್ಮ ಮತ್ತು ನ್ಯಾಯದ ಮೌಲ್ಯಗಳನ್ನು ಬೋಧಿಸಿದರು. ದಾದೋಜಿ ಕೊಂಡದೇವರು ಯುದ್ಧಕಲೆ, ಆಡಳಿತ ಮತ್ತು ಶಿಸ್ತುಗಳನ್ನು ಕಲಿಸಿ, ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿದರು. ಆದ್ದರಿಂದ ಮಹಾನ್ ವ್ಯಕ್ತಿಯ ಹಿಂದೆ ನಿಂತಿರುವ ಮಾರ್ಗದರ್ಶಕರನ್ನು ನಾವು ಎಂದಿಗೂ ಮರೆಯಬಾರದು ಎಂದು ಅವರು ತಿಳಿಸಿದರು.  

ಧಾರವಾಡ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಶ್ರೀನಿವಾಸ ಎಚ್‌. ಪೂಜಾರ ಅವರು ಛತ್ರಪತಿ ಶ್ರೀ ಶಿವಾಜಿ ಮಹಾರಾಜ ಅವರ ಜೀವನ ಚರಿತ್ರೆ ಕುರಿತು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮರಾಠ ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷ ಮನೋಹರ ನಿಂಗಪ್ಪ ಮೋರೆ, ಕಾರ್ಯಾಧ್ಯಕ್ಷ ಸುನೀಲ ಪರಶುರಾಮ ಮೋರೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಶಂಕರ ಶೇಳಕೆ, ಗ್ರಾಮ ಪಂಚಾಯತ ಸದಸ್ಯ ಹಾಗೂ ಸಮಾಜದ ಮುಖಂಡ ಭೀಮಪ್ಪ ಖಸಾಯಿ ಅವರು ಮಾತನಾಡಿದರು. 

ವೇದಿಕೆಯಲ್ಲಿ ಮರಾಠ ವಿದ್ಯಾ ಪ್ರಸಾರಕ ಮಂಡಳ ಉಪಾಧ್ಯಕ್ಷ ಎಲ್ಲಪ್ಪ ಭೀಮಪ್ಪ ಚವ್ಹಾಣ, ಕಾರ್ಯದರ್ಶಿ ರಾಜು ತಿರಕಪ್ಪ ಬಿರ್ಜೆನವರ, ಸಹ ಕಾರ್ಯದರ್ಶಿ ರಾಜು ಜ್ಯೋತಿಬಾ ಕಾಳೆ ಹಾಗೂ ಇತರರು ಉಪಸ್ಥಿತರಿದ್ದರು. ಛತ್ರಪತಿ ಶ್ರೀ ಶಿವಾಜಿ ಮಹಾರಾಜ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಏರಿ​‍್ಡಸಿದ್ದ ಪ್ರಬಂಧ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಗಳ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.   

  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  ಕಾರ್ಯಕ್ರಮದಲ್ಲಿ ಕಲಾವಿದರು ಮತ್ತು ವಿದ್ಯಾರ್ಥಿಗಳು ಛತ್ರಪತಿ ಶಿವಾಜಿ ಮಹಾರಾಜರ ವೇಷಭೂಷಗಳನ್ನು ಧರಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.  ಕಾರ್ಯಕ್ರಮದಲ್ಲಿ ಮರಾಠಾ ಹಾಗೂ ವಿವಿಧ ಸಮುದಾಯದ ಗುರು ಹಿರಿಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.