ಪತ್ರಕರ್ತರಿಂದ ಸಮಾಜಮುಖಿ ಕಾರ್ಯಕ್ಕೆ ರಕ್ತದಾನ ಶಿಬಿರ ಆರಂಭ

ಪತ್ರಕರ್ತರಿಂದ ಸಮಾಜಮುಖಿ ಕಾರ್ಯಕ್ಕೆ ರಕ್ತದಾನ ಶಿಬಿರ ಆರಂಭ  Journalists start blood donation camp for social work

ಗದಗ  01: ಪತ್ರಿಕಾ ದಿನಾಚರಣೆ ಹಿನ್ನೆಲೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗದಗ ಜಿಲ್ಲಾ ಘಟಕದಿಂದ ಮೊದಲ ಬಾರಿ ರಕ್ತದಾನ ಶಿಭಿರ ಆಯೋಜನೆ ಮಾಡಲಾಗಿದ್ದು ಇದು ನಮಗೆಲ್ಲಾ ಹೆಮ್ಮೆಯ ವಿಷಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಜು ಎಂ. ಹೆಬ್ಬಳ್ಳಿ ಹೇಳಿದರು. ಗದಗ ನಗರದ ಬಸವೇಶ್ವರ ಬ್ಲಡ್ ಬ್ಯಾಂಕಿನಲ್ಲಿ ಪತ್ರಕರ್ತರಿಂದ ಜರುಗಿದ ರಕ್ತದಾನ ಶಿಭಿರ ಉದ್ದೇಶಿಸಿ ಮಾತನಾಡಿದ ಅವರು ಮತ್ತೊಂದು ಜೀವ ಉಳಿಸುವಂತಹ ಕೆಲಸ ನಮ್ಮ ಪತ್ರಿಕಾ ಮಿತ್ರರು ಮಾಡುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ, ಎಲ್ಲರೂ ರಕ್ತದಾನ ಮಾಡಿ ಮತ್ತೊಂದು ಜೀವ ಉಳಿಸಲು ಸಹಾಯ ಮಾಡೋಣ ಎಂದರು. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಮಾತನಾಡಿ ಪತ್ರಕರ್ತರು ಸೇರಿದಂತೆ ಅನೇಕರು ಅವರ ಕುಟುಂಬಗಳ ಅನಾರೋಗ್ಯ, ಆಪರೇಶನ್‌’ಗಳಂತಹ ಸಂದರ್ಭಗಳಲ್ಲಿ ರಕ್ತದ ಕೊರತೆ ಅನುಭವಿಸಿದ್ದು ಅದನ್ನೆಲ್ಲಾ ಮನಗಂಡು ಪತ್ರಿಕಾ ದಿನಾಚರಣೆ ಹಿನ್ನೆಲೆ ರಕ್ತದಾನ ಶಿಭಿರ ಹಮ್ಮಿಕೊಂಡಿದ್ದೇವೆ ಎಂದರು.ಕಾನಿಪ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಆನಂದಯ್ಯ ವಿರಕ್ತಮಠ ಮಾತನಾಡಿ ಪತ್ರಕರ್ತರಾದವರು ಬಿಡುವಿಲ್ಲದ ಕಾರ್ಯದೊತ್ತಡದಲ್ಲಿ ಜನಮುಖಿ, ಜನಪರ ವಿಚಾರಗಳಿಂದ ಸುದ್ದಿಯ ಮೂಲಕ ಸಮಾಜದ ಶುಧ್ದಿಗೊಳಿಸತಕ್ಕಂತವರು. ಅಂತಹದರ ನಡುವೆಯೂ ಪತ್ರಕರ್ತರಾದವರು ಸಮಾಜಮುಖಿಯಾಗಿ ಹೇಗಿರಬಲ್ಲರು ಎಂದು ಇಂದು ಪತ್ರಿಕಾ ದಿನಾಚರಣೆ ಹಿನ್ನೆಲೆ ರಕ್ತದಾನ ಮಾಡುವ ಮೂಲಕ ಸಮಾಜದೊಂದಿಗೆ ಹೇಗಿದ್ದೇವೆ ಎಂಬುದನ್ನು ತೋರಿಸಲು ಇದೊಂದು ನಿದರ್ಶನ ಎಂದರು. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ಜಿಲ್ಲಾ ಉಪಾಧ್ಯಕ್ಷ ಅನಿಲ ತೆಂಬದಮನಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಂತೋಷಕುಮಾರ ಮುರಡಿ, ಸದಸ್ಯ ಪ್ರವೀಣ ಮಾಂತಾ ರಕ್ತದಾನ ಮಾಡಿದರು.ಈ ಸಂದರ್ಭದಲ್ಲಿ ಕಾನಿಪ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅರುಣಕುಮಾರ ಹಿರೇಮಠ, ಕಾರ್ಯದರ್ಶಿಗಳಾದ ಬನೇಶ ಕುಲಕರ್ಣಿ, ಸಂಗಮೇಶ ವ್ಯಾಪಾರಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ವೆಂಕಟೇಶ ಇಮರಾಪೂರ, ಸಂತೋಷ ಕೊಣ್ಣೂರ, ರುದ್ರಗೌಡ ಪಾಟೀಲ್, ಪತ್ರಕರ್ತರಾದ ಸುರೇಶ್ ಕಡ್ಲಿಮಟ್ಟಿ, ಫಾರೂಖ ಮಕಾಂದಾರ, ಕೆಮರಾಮನ್ ವಿಜಯ ಕಾಗನೂರಮಠ, ಫೊಟೋಗ್ರಾಫರ ವಿನಾಯಕ ಚೌಡಾಪೂರ, ಬಸವೇಶ್ವರ ಬ್ಲಡ್ ಬ್ಯಾಂಕಿನ ಅನಿಲಕುಮಾರ ಹಾಗೂ ಸಿಬ್ಬಂದಿಗಳು ಇದ್ದರು.